ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ರಾಜ್ಯ ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ಕರ್ನಾಟಕ ಸರ್ಕಾರವು ‘ಕರ್ತವ್ಯ’ (ಕರ್ನಾಟಕ ಅಡ್ವಾನ್ಸ್ಡ್ ಅಟೆಂಡೆನ್ಸ್ ಮ್ಯಾನೇಜ್ಮೆಂಟ್ ಸಿಸ್ಟಮ್) ಎಂಬ ನೂತನ ಮುಂದುವರಿದ ಹಾಜರಾತಿ ನಿರ್ವಹಣಾ ತಂತ್ರಜ್ಞಾನವನ್ನು ಜಾರಿಗೆ ತಂದಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಲಾಖಾ ಕಾರ್ಯದರ್ಶಿಗಳೊಂದಿಗೆ ನಡೆಸಿದ ಮೊದಲ ಸಭೆಯಲ್ಲೇ ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳು ಕಚೇರಿ ವೇಳೆಯಲ್ಲಿ ಕಡ್ಡಾಯವಾಗಿ ಶೇ.೧೦೦ ರಷ್ಟು ಹಾಜರಿರಬೇಕು ಮತ್ತು ಸಾರ್ವಜನಿಕರ ಕುಂದುಕೊರತೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಖಡಕ್ ಸೂಚನೆ ನೀಡಿದ್ದರು.
ಈ ಹಿಂದೆ ಜಾರಿಯಲ್ಲಿದ್ದ ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ಉದ್ಯೋಗಿಗಳು ಕೇವಲ ಡಿಜಿಟಲ್ ಸಹಿ ಮಾಡಿ ಕಚೇರಿಯಿಂದ ಗೈರಾಗುವ ಸಾಧ್ಯತೆಗಳಿದ್ದವು. ಈ ದೋಷವನ್ನು ನಿವಾರಿಸಲು ಉದ್ಯೋಗಿಗಳ ಭೌತಿಕ ಉಪಸ್ಥಿತಿ ಮತ್ತು ಕಚೇರಿಯ ಭೌಗೋಳಿಕ ಸ್ಥಳವನ್ನು (ಜಿಯೋಗ್ರಾಫಿಕಲ್ ಲೊಕೇಶನ್) ನಿಖರವಾಗಿ ಪತ್ತೆಹಚ್ಚುವ ಈ ಹೊಸ ವ್ಯವಸ್ಥೆಯನ್ನು ರೂಪಿಸಲಾಗಿದೆ.
ಸಂಪೂರ್ಣ ‘ಮೇಡ್-ಇನ್-ಕರ್ನಾಟಕ’ ಆವಿಷ್ಕಾರ
ಯಾವುದೇ ಬಾಹ್ಯ ಖಾಸಗಿ ತಂತ್ರಜ್ಞಾನ ಸಂಸ್ಥೆಗಳ ನೆರವಿಲ್ಲದೆ, ಸಂಪೂರ್ಣವಾಗಿ ಸರ್ಕಾರದ ಪರಿಸರ ವ್ಯವಸ್ಥೆಯಲ್ಲೇ ‘ಕರ್ತವ್ಯ’ ಸಾಫ್ಟ್ವೇರ್ ಅನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ) ಉಸ್ತುವಾರಿಯಲ್ಲಿ, ಸೆಂಟರ್ ಫಾರ್ ಇ-ಗವರ್ನೆನ್ಸ್ ಮತ್ತು ಕರ್ನಾಟಕ ಎಐ ಸೆಲ್ ಜಂಟಿಯಾಗಿ ಇದನ್ನು ಸಿದ್ಧಪಡಿಸಿವೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ವೆಂಡರ್ ವೆಚ್ಚ ಉಳಿತಾಯವಾಗಿದ್ದು, ದತ್ತಾಂಶ ಸುರಕ್ಷತೆ ಮತ್ತು ಸ್ವಾಯತ್ತತೆ ಹೆಚ್ಚಾಗಿದೆ. ಕರ್ನಾಟಕದ ಈ ಯಶಸ್ವಿ ಮಾದರಿಯನ್ನು ದೇಶದ ಇತರೆ ರಾಜ್ಯಗಳೂ ಅಳವಡಿಸಿಕೊಳ್ಳಬಹುದಾಗಿದೆ.
ತಂತ್ರಜ್ಞಾನದ ಪ್ರಮುಖ ವೈಶಿಷ್ಟ್ಯಗಳು:
ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಮುಖ ಗುರುತಿಸುವಿಕೆ, ವಂಚನೆಯ ಹಾಜರಾತಿಯನ್ನು ತಡೆಯಲು ಲೈವ್ನೆಸ್ ಡಿಟೆಕ್ಷನ್ ತಂತ್ರಜ್ಞಾನದೊಂದಿಗೆ ಎಐ ಫೇಶಿಯಲ್ ರೆಕಗ್ನಿಷನ್ ಬಳಸಲಾಗಿದೆ.
ಜಿಯೋಫೆನ್ಸಿಂಗ್: ಜಿಐಎಸ್ ತಂತ್ರಜ್ಞಾನದ ಮೂಲಕ ಉದ್ಯೋಗಿ ತನ್ನ ಕಚೇರಿಯ ನಿಗದಿತ ಪರಿಧಿಯೊಳಗೆ ಇದ್ದಾಗ ಮಾತ್ರ ಹಾಜರಾತಿ ದಾಖಲಿಸಲು ಸಾಧ್ಯವಾಗುತ್ತದೆ.
ಸಂಯೋಜಿತ ಡೇಟಾಬೇಸ್: ಇದನ್ನು ಆಧಾರ್ ಇ-ಕೆವೈಸಿ ಮತ್ತು ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (ಹೆಚ್ಆರ್ಎಂಎಸ್) ಯೊಂದಿಗೆಸಂಯೋಜಿಸಲಾಗಿದೆ.
ಮೊಬೈಲ್ ಆಪ್ ಮತ್ತು ರಜೆ ನಿರ್ವಹಣೆ: ಆಂಡ್ರಾಯ್ಡ್ ಮತ್ತು ಐಒಎಸ್ ಆಪ್ಗಳ ಮೂಲಕ ಹಾಜರಾತಿ, ರಜೆ ಮತ್ತು ಅಧಿಕೃತ ಹೊರಗಿನ ಕೆಲಸದ (ಒಒಡಿ) ವಿವರಗಳನ್ನು ದಾಖಲಿಸುವ ಸೌಲಭ್ಯವಿದೆ.
ಇಲಾಖೆಗಳಲ್ಲಿ ದಾಖಲೆ ವೇಗದ ಅನುಷ್ಠಾನ: ಮುಖ್ಯಮಂತ್ರಿಗಳ ಕಟ್ಟುನಿಟ್ಟಿನ ಆದೇಶದ ಬೆನ್ನಲ್ಲೇ ಈ ತಂತ್ರಜ್ಞಾನವು ಇಲಾಖೆಗಳಲ್ಲಿ ಅತ್ಯಂತ ವೇಗವಾಗಿ ಅನುಷ್ಠಾನಗೊಳ್ಳುತ್ತಿದೆ.
ಕಳೆದ ವಾರ ಅಂದಾಜು ೨,೪೬,೦೦೦ ರಷ್ಟಿದ್ದ ಒಟ್ಟು ನೋಂದಾಯಿತ ಉದ್ಯೋಗಿಗಳ ಸಂಖ್ಯೆ ಪ್ರಸ್ತುತ ವಾರದಲ್ಲಿ ೩,೦೧,೦೩೪ ಕ್ಕೆ ಏರಿಕೆಯಾಗಿದೆ. ಇದು ಕೇವಲ ಒಂದೇ ವಾರದಲ್ಲಿ ಶೇ.೨೫ ಕ್ಕಿಂತಲೂ ಹೆಚ್ಚು (೫೫,೦೦೦ಕ್ಕೂ ಅಧಿಕ ಹೊಸ ಸೇರ್ಪಡೆ) ಬೆಳವಣಿಗೆಯಾಗಿದೆ. ಇದೇ ಅವಧಿಯಲ್ಲಿ, ಆಪ್ ಮೂಲಕ ಪ್ರತಿದಿನ ದಾಖಲಾಗುವ ದೈನಂದಿನ ಹಾಜರಾತಿ ಸಂಖ್ಯೆಯು ಸಹ ೧,೮೫,೩೦೮ ರಿಂದ ೨,೩೨,೬೧೨ ಕ್ಕೆ ಜಿಗಿದಿದ್ದು, ಸಕ್ರಿಯ ಬಳಕೆಯಲ್ಲಿ ಶೇ.೨೫ ರಷ್ಟು ಭಾರಿ ಏರಿಕೆ ದಾಖಲಾಗಿದೆ.
ಪ್ರಸ್ತುತ ೪೨ ಇಲಾಖೆಗಳ ೪,೭೮,೫೨೨ ನೌಕರರನ್ನು ಈ ವ್ಯವಸ್ಥೆಗೆ ಒಳಪಡಿಸಲಾಗಿದ್ದು, ಈ ಪೈಕಿ ೩.೦೧ ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ. ಕೇವಲ ಒಂದೇ ವಾರದಲ್ಲಿ ನೋಂದಣಿ ಪ್ರಕ್ರಿಯೆಯಲ್ಲಿ ಶೇ.೨೫ ರಷ್ಟು ಅಭೂತಪೂರ್ವ ಪ್ರಗತಿ ಕಂಡುಬಂದಿದೆ.
ಶಾಲಾ ಶಿಕ್ಷಣ ಇಲಾಖೆ: ಒಟ್ಟು ೧,೭೬,೦೫೫ ಉದ್ಯೋಗಿಗಳಲ್ಲಿ ಈಗಾಗಲೇ ೧,೬೮,೨೫೨ ನೌಕರರು ನೋಂದಾಯಿಸಿಕೊಂಡಿದ್ದು, ೧,೪೧,೮೦೦ಕ್ಕೂ ಹೆಚ್ಚು ದೈನಂದಿನ ಚೆಕ್-ಇನ್ಗಳೊಂದಿಗೆ ಮೊದಲ ಸ್ಥಾನದಲ್ಲಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ: ೬೬,೯೬೯ ನೋಂದಣಿ ಹಾಗೂ ೫೪,೪೦೦ಕ್ಕೂ ಹೆಚ್ಚು ದೈನಂದಿನ ಹಾಜರಾತಿಯೊಂದಿಗೆ ಎರಡನೇ ಸ್ಥಾನದಲ್ಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆಗಳಲ್ಲಿ ಪ್ರಾಯೋಗಿಕವಾಗಿ ಯಶಸ್ವಿಯಾದ ನಂತರ, ಶಾಲಾ ಶಿಕ್ಷಣ ಇಲಾಖೆಯ ಸಿಬ್ಬಂದಿ ಇದನ್ನು ಸಕ್ರಿಯವಾಗಿ ಬಳಸುತ್ತಿದ್ದಾರೆ. ಇನ್ನುಳಿದ ಹಲವು ಇಲಾಖೆಗಳು ಈಗಾಗಲೇ ಶೇ.೯೦ಕ್ಕಿಂತ ಹೆಚ್ಚು ನೋಂದಣಿ ಮೈಲಿಗಲ್ಲನ್ನು ದಾಟಿವೆ.
ಇತರ ಇಲಾಖೆಗಳು: ಪದವಿ ಪೂರ್ವ ಶಿಕ್ಷಣ ಮಂಡಳಿ, ಆಯುಷ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಗಳು ಈಗಾಗಲೇ ಶೇ.೯೦ಕ್ಕಿಂತ ಹೆಚ್ಚು ನೋಂದಣಿ ಗುರಿಯನ್ನು ಯಶಸ್ವಿಯಾಗಿ ತಲುಪಿವೆ.
ಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿಗಳು ಮತ್ತು ಜಿಲ್ಲಾ ಮಟ್ಟದಲ್ಲಿ ಡಿಸಿ, ಸಿಇಒಗಳು ದಿನನಿತ್ಯ ಈ ವ್ಯವಸ್ಥೆಯ ಡ್ಯಾಶ್ಬೋರ್ಡ್ ಅನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಕಚೇರಿ ಅವಧಿಯಲ್ಲಿ ಅಧಿಕಾರಿಗಳು ಸಾರ್ವಜನಿಕರಿಗೆ ಸಿಗದಿರುವ ಬಗ್ಗೆ ನಾಗರಿಕರು ನೀಡುವ ಪ್ರತಿಕ್ರಿಯೆ (ಫೀಡ್ಬ್ಯಾಕ್) ಈ ಸುಶಾಸನದ ಗುರಿಯನ್ನು ತಲುಪಲು ಪ್ರಮುಖ ಪಾತ್ರ ವಹಿಸಲಿದೆ.
ಸಾರ್ವಜನಿಕರಿಗೆ ಸಿಗಲಿದೆ ಉತ್ತಮ ಸೇವೆ:
ಸಾರ್ವಜನಿಕ ಸೇವೆಗೆ ಹೊಸ ವೇಗ-ಮೊಬೈಲ್ ಮೂಲಕವೇ ಹಾಜರಾತಿ ದಾಖಲಿಸುವ ಸೌಲಭ್ಯ ಇರುವುದರಿಂದ ಕಚೇರಿಗಳ ಮುಂಭಾಗದಲ್ಲಿ ಬಯೋಮೆಟ್ರಿಕ್ಗಾಗಿ ಸಾಲಿನಲ್ಲಿ ನಿಲ್ಲುವುದು ತಪ್ಪಿದೆ ಎಂದು ಸರ್ಕಾರಿ ನೌಕರರು ಸಂತಸ ವ್ಯಕ್ತಪಡಿಸಿದ್ದಾರೆ.
ಕರ್ತವ್ಯ ಆಪ್ ಪ್ರತಿಯೊಬ್ಬ ಸರ್ಕಾರಿ ನೌಕರನೂ ತನ್ನ ಜವಾಬ್ದಾರಿಯನ್ನು ಹೆಮ್ಮೆ, ಶಿಸ್ತು ಮತ್ತು ನಿರ್ದಿಷ್ಟ ಉದ್ದೇಶದೊಂದಿಗೆ ನಿರ್ವಹಿಸಲು ಶಕ್ತಿ ತುಂಬುತ್ತಿದೆ.
ಅಂತಿಮವಾಗಿ ಕಚೇರಿಗಳಲ್ಲಿ ಅಧಿಕಾರಿಗಳ ಭೌತಿಕ ಲಭ್ಯತೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸುವ ಮೂಲಕ ಸಾರ್ವಜನಿಕರಿಗೆ ಸಿಗುವ ಸೇವೆಗಳು ಇನ್ನು ಮುಂದೆ ಹೆಚ್ಚು ಸುಲಭ ಹಾಗೂ ತಡೆರಹಿತವಾಗಲಿವೆ. ಈ ಮೂಲಕ ಕರ್ನಾಟಕವು ಡಿಜಿಟಲ್ ಆಡಳಿತ ಮತ್ತು ನಾಗರಿಕ ಕೇಂದ್ರಿತ ಸುಧಾರಣೆಯಲ್ಲಿ ದೇಶದಲ್ಲೇ ಮುಂಚೂಣಿ ರಾಜ್ಯವಾಗಿ ಹೊರಹೊಮ್ಮಿದೆ ಎಂದು ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



