ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೊಲೆ, ಕೊಲೆ ಯತ್ನ, ದರೋಡೆ, ಮನೆಗಳ್ಳತನ ಸೇರಿದಂತೆ ಭೀಕರ 67 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯ 30ಕ್ಕೂ ಹೆಚ್ಚು ಬಾರಿ ಜಾಮೀನು ರಹಿತ ವಾರೆಂಟ್ ಹೊರಡಿಸಿದರೂ ಸಿಗದೆ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಶೀಟರ್ನನ್ನು ಬಾಣಸವಾಡಿ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಹೆಡೆಮುರಿ ಕಟ್ಟಿದ್ದಾರೆ.
ಬಂಧಿತ ಆರೋಪಿಯನ್ನು ಕೆ.ಜಿ. ಹಳ್ಳಿ ನಿವಾಸಿ, ರೌಡಿಶೀಟರ್ ಸೈಯದ್ ಅಬ್ರಾರ್ (32) ಎಂದು ಗುರುತಿಸಲಾಗಿದೆ.
10 ಸಾವಿರ ರೂ. ಕಳ್ಳತನ ಕೇಸ್ ಬೆನ್ನತ್ತಿದಾಗ ಸಿಕ್ಕಿತು 'ದೊಡ್ಡ ಮೀನು'!:
ಕಳೆದ ಮಾರ್ಚ್ ತಿಂಗಳಲ್ಲಿ ಹೆಚ್.ಆರ್.ಬಿ.ಆರ್ ಬಡಾವಣೆ ಸಮೀಪ ಬೀಗ ಹಾಕಿದ್ದ ಮನೆಯೊಂದರ ಬಾಗಿಲು ಮುರಿದು 10 ಸಾವಿರ ರೂಪಾಯಿ ನಗದು ಕಳ್ಳತನವಾಗಿತ್ತು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಬಾಣಸವಾಡಿ ಠಾಣೆಯ ಇನ್ಸ್ಪೆಕ್ಟರ್ ಹೆಚ್.ಸಿ. ಸುದರ್ಶನ್ ಹಾಗೂ ಪಿಎಸ್ಐ ಬಿ.ಟಿ. ವೆಂಕಟರಮಣಪ್ಪ ನೇತೃತ್ವದ ತಂಡ ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡಿದಾಗ, ಆರೋಪಿ ಬೈಕ್ನಲ್ಲಿ ಪರಾರಿಯಾಗುತ್ತಿರುವುದು ಪತ್ತೆಯಾಗಿತ್ತು. ಇದನ್ನು ಆಧರಿಸಿ ತನಿಖೆ ಚುರುಕುಗೊಳಿಸಿದಾಗ ಸಿಕ್ಕಿದ್ದೇ ಈ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಸೈಯದ್ ಅಬ್ರಾರ್.
ಮೊಬೈಲ್ ಬಳಸದೆ ಪೊಲೀಸರಿಗೆ ಚಳ್ಳೆಹಣ್ಣು ತಿನಿಸುತ್ತಿದ್ದ ಖದೀಮ:
ಆರೋಪಿ ಅಬ್ರಾರ್ ತನಿಖಾ ಸಂಸ್ಥೆಗಳಿಗೆ ಸಿಕ್ಕಿಬೀಳಬಾರದೆಂದು ಮೊಬೈಲ್ ಫೋನ್ ಬಳಸುವುದನ್ನು ಸಂಪೂರ್ಣವಾಗಿ ಬಿಟ್ಟಿದ್ದ. ಅಷ್ಟೇ ಅಲ್ಲದೆ, ಒಂದೇ ಕಡೆ ಇರದೆ ಸದಾ ಜಾಗ ಬದಲಾಯಿಸುತ್ತಾ ಅಲೆಮಾರಿಯಂತೆ ತಿರುಗಾಡುತ್ತಿದ್ದ. ಪೊಲೀಸರು ಸತತ 4 ದಿನಗಳ ಕಾಲ ಹಗಲಿರುಳು ಕಾರ್ಯಾಚರಣೆ ನಡೆಸಿ, ಕೊನೆಗೆ ಬಾಗಲೂರು ಬಳಿ ಈತನನ್ನು ಸುತ್ತುವರಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
15 ವರ್ಷಗಳ ಅಪರಾಧ ಇತಿಹಾಸ, 37 ವಾರೆಂಟ್ಗಳು!:
ಬಂಧಿತ ಅಬ್ರಾರ್ನ ಹಿನ್ನೆಲೆ ಕೆದಕಿದ ಪೊಲೀಸರಿಗೇ ಶಾಕ್ ಕಾದಿತ್ತು. ಕಳೆದ 15 ವರ್ಷಗಳಿಂದ ಅಪರಾಧ ಲೋಕದಲ್ಲಿ ಸಕ್ರಿಯನಾಗಿದ್ದ ಈತನ ವಿರುದ್ಧ ಬೆಂಗಳೂರು, ಕೋಲಾರ, ಯಾದಗಿರಿ ಸೇರಿದಂತೆ ವಿವಿಧ ಜಿಲ್ಲೆಗಳ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ರಾಬರಿ ಹಾಗೂ ಕಳ್ಳತನದ 67 ಪ್ರಕರಣಗಳು ದಾಖಲಾಗಿವೆ.
ನ್ಯಾಯಾಲಯದ ವಿಚಾರಣೆಗೆ ನಿರಂತರವಾಗಿ ಗೈರಾಗಿದ್ದ ಹಿನ್ನೆಲೆಯಲ್ಲಿ ಈತನ ವಿರುದ್ಧ 37ಕ್ಕೂ ಹೆಚ್ಚು ಜಾಮೀನು ರಹಿತ ವಾರೆಂಟ್ಗಳು ಜಾರಿಯಾಗಿದ್ದವು.
ನ್ಯಾಯಾಲಯವು ಈತನನ್ನು ಐದು ಬಾರಿ ಪ್ರೊಕ್ಲಮೇಷನ್ (ಸ್ವಯಂಘೋಷಿತ ಅಪರಾಧಿ) ಎಂದು ಘೋಷಿಸಿತ್ತು.
ಮೋಜು-ಮಸ್ತಿಗಾಗಿ ಕಳ್ಳತನ:
ಕಳೆದ ಎರಡು ವರ್ಷಗಳ ಹಿಂದೆ ಅಪರಾಧ ಪ್ರಕರಣವೊಂದರಲ್ಲಿ ಈತನನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದರು. ಆದರೆ, ಜಾಮೀನಿನ ಮೇಲೆ ಹೊರಬಂದಿದ್ದ ಈತ ಮತ್ತೆ ತನ್ನ ಹಳೇ ಚಾಳಿ ಮುಂದುವರಿಸಿದ್ದ. ಕೇವಲ ಐಷಾರಾಮಿ ಜೀವನ ಹಾಗೂ ಮೋಜು-ಮಸ್ತಿ ಮಾಡಲು ಹಣ ಸಂಪಾದಿಸಲೆಂದೇ ಈತ ನಿರಂತರವಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ಕಂಬಿ ಹಿಂದೆ ತಳ್ಳಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.



