ಚಂದ್ರವಳ್ಳಿ ನ್ಯೂಸ್, ಮೈಸೂರು:
ಕರ್ನಾಟಕದಿಂದ ಶೀಘ್ರದಲ್ಲೇ ತೆರವಾಗಲಿರುವ ನಾಲ್ಕು ರಾಜ್ಯಸಭಾ ಸ್ಥಾನಗಳ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ ರಾಜಕೀಯ ವಲಯದಲ್ಲಿ ಭಾರಿ ಪೈಪೋಟಿ ಮತ್ತು ಕುತೂಹಲ ಸೃಷ್ಟಿಯಾಗಿದೆ.
ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್ನಿಂದ ಮೂವರು ಮತ್ತು ಬಿಜೆಪಿಯಿಂದ ಒಬ್ಬರು ಸುಲಭವಾಗಿ ಆಯ್ಕೆಯಾಗಬಹುದು. ಆದರೆ, ಎನ್ಡಿಎ ಮೈತ್ರಿಕೂಟದ ಇಬ್ಬರು ಹಿರಿಯ ನಾಯಕರು ಒಂದೇ ಸ್ಥಾನದ ಮೇಲೆ ಕಣ್ಣಿಟ್ಟಿರುವುದು ಈಗ ಬಿಜೆಪಿ ಹಾಗೂ ಜೆಡಿಎಸ್ ವರಿಷ್ಠರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಜೂನ್ 25ಕ್ಕೆ ಹಾಲಿ ರಾಜ್ಯಸಭಾ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆ (ಕಾಂಗ್ರೆಸ್), ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (ಜೆಡಿಎಸ್), ಕೆ. ನಾರಾಯಣ (ಬಿಜೆಪಿ) ಮತ್ತು ಈರಣ್ಣ ಕಡಾಡಿ (ಬಿಜೆಪಿ) ಅವರ ಅವಧಿ ಮುಕ್ತಾಯಗೊಳ್ಳಲಿದೆ. ಈ ಪೈಕಿ ತೆರವಾಗಲಿರುವ ಮೈತ್ರಿಕೂಟದ ಒಂದು ಸ್ಥಾನಕ್ಕೆ ಜೆಡಿಎಸ್ನಿಂದ ದೇವೇಗೌಡರು ಹಾಗೂ ಬಿಜೆಪಿಯಿಂದ ಮಾಜಿ ಸಿಎಂ ಡಿ.ವಿ. ಸದಾನಂದಗೌಡರು ಆಕಾಂಕ್ಷಿಯಾಗಿರುವುದು ಮೈತ್ರಿ ಧರ್ಮವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ದೇವೇಗೌಡರ ರೀ-ಎಂಟ್ರಿಗೆ ಸದಾನಂದಗೌಡರ ಪೈಪೋಟಿ!
ಕಳೆದ ಬಾರಿ ಕಾಂಗ್ರೆಸ್ ಬೆಂಬಲದೊಂದಿಗೆ ರಾಜ್ಯಸಭೆ ಪ್ರವೇಶಿಸಿದ್ದ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು, ಈ ಬಾರಿ ಮೈತ್ರಿ ಸೂತ್ರದಡಿ ಬಿಜೆಪಿ ಬೆಂಬಲದೊಂದಿಗೆ ಮರು ಆಯ್ಕೆ ಬಯಸಿದ್ದಾರೆ.
"ನನ್ನದೇನೂ ಹಠವಿಲ್ಲ, ಪ್ರಧಾನಿ ನರೇಂದ್ರ ಮೋದಿ ಅವರ ವಿವೇಚನೆಗೆ ಬಿಟ್ಟ ವಿಚಾರ. ಅವರು ಬೆಂಬಲಿಸಿದರೆ ನಾನು ರಾಜ್ಯಸಭೆಗೆ ಹೋಗುತ್ತೇನೆ" ಎಂದು ದೇವೇಗೌಡರು ಈಗಾಗಲೇ ಹೇಳಿದ್ದಾರೆ.
ಆದರೆ, ಇದೇ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮಾಜಿ ಸಿಎಂ ಡಿ.ವಿ. ಸದಾನಂದಗೌಡರು ತಾವು ಕೂಡ ಪ್ರಬಲ ಆಕಾಂಕ್ಷಿ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಮೈಸೂರಿನಲ್ಲಿ ಡಿವಿಎಸ್ ಹೇಳಿಕೆ: "ನಾವು ಮತ್ತು ಜೆಡಿಎಸ್ ಒಂದೇ ಮೈತ್ರಿಕೂಟದಲ್ಲಿದ್ದೇವೆ. ವಿಧಾನಸಭೆಯಲ್ಲಿ ನಮಗೆ 63 ಮತ್ತು ಜೆಡಿಎಸ್ಗೆ 17 ಶಾಸಕರ ಬಲವಿದೆ. ಲೋಕಸಭಾ ಚುನಾವಣೆ ವೇಳೆಯೇ ನಾನು ಇನ್ನು ಮುಂದೆ ಚುನಾವಣಾ ರಾಜಕಾರಣ ಮಾಡಲ್ಲ ಎಂದು ಹೇಳಿದ್ದೆ. ಈಗ ನನ್ನನ್ನು ರಾಜ್ಯಸಭೆಗೆ ಕಳುಹಿಸುವ ವಿಚಾರವನ್ನು ರಾಷ್ಟ್ರೀಯ ನಾಯಕರು ನೋಡಿಕೊಳ್ಳುತ್ತಾರೆ" ಎಂದು ನೇರವಾಗಿಯೇ ಹೈಕಮಾಂಡ್ಗೆ ಬೇಡಿಕೆ ಇಟ್ಟಿದ್ದಾರೆ.
ಸದಾನಂದಗೌಡರ ಪರ ಬಿಎಸ್ವೈ ಲಾಬಿ!-
ರಾಜ್ಯ ಬಿಜೆಪಿ ಘಟಕ, ವಿಶೇಷವಾಗಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಸದಾನಂದಗೌಡರನ್ನು ರಾಜ್ಯಸಭೆಗೆ ಕಳುಹಿಸಲು ತೀವ್ರ ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ಕಳೆದ ಲೋಕಸಭಾ ಚುನಾವಣೆ ವೇಳೆ ಕಡೇ ಕ್ಷಣದಲ್ಲಿ ಸದಾನಂದಗೌಡರಿಗೆ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಕೈತಪ್ಪಿತ್ತು. ಅಂದು ಆದ ಅನ್ಯಾಯಕ್ಕೆ ಈಗ ರಾಜ್ಯಸಭಾ ಸ್ಥಾನ ನೀಡುವ ಮೂಲಕ ಪರಿಹಾರ ಒದಗಿಸಬೇಕು ಎಂಬುದು ಯಡಿಯೂರಪ್ಪ ಬಣದ ಲೆಕ್ಕಾಚಾರವಾಗಿದೆ.
ಅಮಿತ್ ಶಾ ಅಂಗಳದಲ್ಲಿ ಕುಮಾರಸ್ವಾಮಿ ಮಾತುಕತೆ-
ಜೆಡಿಎಸ್ಗೆ ಸದ್ಯ ಇರುವ ಅತಿ ದೊಡ್ಡ ಮೈನಸ್ ಪಾಯಿಂಟ್ ಎಂದರೆ ಸಂಖ್ಯಾಬಲ. ರಾಜ್ಯಸಭೆಗೆ ಒಬ್ಬರನ್ನು ಆಯ್ಕೆ ಮಾಡಲು ಕನಿಷ್ಠ 43 ರಿಂದ 44 ಶಾಸಕರ ಮತಗಳು ಬೇಕು. ಆದರೆ ಜೆಡಿಎಸ್ ಬಳಿ ಇರುವುದು ಕೇವಲ 17 ಶಾಸಕರು ಮಾತ್ರ. ಹೀಗಾಗಿ ಬಿಜೆಪಿ ಬೆಂಬಲವಿಲ್ಲದೆ ದೇವೇಗೌಡರು ಗೆಲ್ಲಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಈಗಾಗಲೇ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಒಂದು ಹಂತದ ಮಾತುಕತೆ ನಡೆಸಿದ್ದಾರೆ.
ವರಿಷ್ಠರಿಗೆ 'ಬ್ಯಾಲೆನ್ಸಿಂಗ್' ಸವಾಲು-
ಈ ಇಬ್ಬರು ಹಿರಿಯ ನಾಯಕರ ಪೈಕಿ ಯಾರನ್ನು ಆಯ್ಕೆ ಮಾಡಬೇಕು ಎಂಬುದು ಈಗ ಅಮಿತ್ ಶಾ ಅವರಿಗೆ ದ್ರೌಪದಿ ವಸ್ತ್ರಾಪಹರಣದಷ್ಟೇ ಕಠಿಣ ಸವಾಲಾಗಿದೆ. ಇದಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ.
ದೇವೇಗೌಡರ ಹಿರಿತನ: ಪ್ರಧಾನಿ ಮೋದಿ ಅವರಿಗೆ ದೇವೇಗೌಡರ ಮೇಲೆ ಅಪಾರ ಗೌರವವಿದೆ. "ಹಿರಿಯ ನಾಯಕರ ಅನುಭವ ದೇಶಕ್ಕೆ ಮುಖ್ಯ" ಎಂದು ಮೋದಿ ಈ ಹಿಂದೆ ಹೇಳಿದ್ದರು. ಜೊತೆಗೆ ಲೋಕಸಭೆಯಲ್ಲಿ ಜೆಡಿಎಸ್ ಮೈತ್ರಿಗೆ ನಿಷ್ಠವಾಗಿರುವುದರಿಂದ ಅವರನ್ನು ಏಕಾಏಕಿ ನಿರಾಕರಿಸುವುದು ಕಷ್ಟ.
ಬಿಜೆಪಿಯ ಆಂತರಿಕ ಸಮೀಕರಣ: ಲೋಕಸಭೆ ಟಿಕೆಟ್ ವಂಚಿತರಾಗಿ ಅಸಮಾಧಾನಗೊಂಡಿರುವ ಸದಾನಂದಗೌಡರನ್ನು ಸಮಾಧಾನಪಡಿಸುವುದು ಮತ್ತು ಒಕ್ಕಲಿಗ ಸಮುದಾಯವನ್ನು ಬ್ಯಾಲೆನ್ಸ್ ಮಾಡುವುದು ಬಿಜೆಪಿಗೆ ಅನಿವಾರ್ಯವಾಗಿದೆ.
ಮೈತ್ರಿಕೂಟದ ಈ ಒಂದು ಸ್ಥಾನ ಯಾರ ಪಾಲಾಗಲಿದೆ? ಅಮಿತ್ ಶಾ ಅವರು ದೇವೇಗೌಡರ ಹಿರಿತನಕ್ಕೆ ಮಣೆ ಹಾಕುತ್ತಾರೋ ಅಥವಾ ಸದಾನಂದಗೌಡರಿಗೆ ಹಸಿರು ನಿಶಾನೆ ತೋರುತ್ತಾರೋ ಎಂಬುದು ಸದ್ಯ ತೀವ್ರ ಕುತೂಹಲ ಮೂಡಿಸಿದೆ.



