ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ದಶಕಗಳ ಕಾಯುವಿಕೆಯ ನಂತರ ಭದ್ರಾ ಜಲಾಶಯದ ನೀರು ಗೋನೂರು ಕೆರೆಗೆ ಹರಿದು ಬಂದಿರುವುದು ಚಿತ್ರದುರ್ಗ ಜಿಲ್ಲೆಯ ಬಯಲುಸೀಮೆಯ ಜನರಲ್ಲಿ ಹೊಸ ಆಶಾವಾದ ಹಾಗೂ ಅಳಿಸಲಾಗದ ಸಂತಸವನ್ನು ತಂದಿದೆ. ಆದರೆ, ಈ ಐತಿಹಾಸಿಕ ಯೋಜನೆಯ ಸಾಕಾರದ ಬೆನ್ನಲ್ಲೇ, ಇದರ ಕ್ರೆಡಿಟ್ (ಶ್ರೇಯಸ್ಸು) ತೆಗೆದುಕೊಳ್ಳಲು ನಾಯಕರು ಮುಗಿಬೀಳುತ್ತಿರುವುದು ನೈಜ ಹೋರಾಟಗಾರರು ಹಾಗೂ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಕುರಿತು ತಮ್ಮ ಕಳಕಳಿ ವ್ಯಕ್ತಪಡಿಸಿರುವ ಹಿರಿಯೂರಿನ ಹಿರಿಯ ನಾಗರಿಕರಾದ ಎಂ.ಜಿ. ರಂಗಸ್ವಾಮಿಯವರು, "ಬಯಲುಸೀಮೆಗೆ ನೀರು ತರುವುದು ಲಕ್ಷಾಂತರ ಜನರ ದಶಕಗಳ ಕನಸಾಗಿತ್ತು. ವಿವಿಧ ಕಾಲಘಟ್ಟಗಳಲ್ಲಿ ಆಡಳಿತ ನಡೆಸಿದ ಸರ್ಕಾರಗಳ ಜೀವಪರ ಚಿಂತನೆ ಮತ್ತು ಸಾಂಘಿಕ ಹೋರಾಟದ ಫಲವಾಗಿ ಈ ಯೋಜನೆ ಇಂದು ಸಾಕಾರಗೊಂಡಿದೆ. ಆದರೆ, ಹೋರಾಟ ನಡೆದ ಸಮಯದಲ್ಲಿ ಯಾವುದೇ ಪಾತ್ರ ವಹಿಸದವರು ಹಾಗೂ ಶೋಕೇಸ್ ಗೊಂಬೆಗಳಂತಿದ್ದವರು ಈಗ ಗೆಲುವಿನ ಶ್ರೇಯಸ್ಸನ್ನು ತಮ್ಮ ಮುಡಿಗೇರಿಸಿಕೊಳ್ಳಲು ಮುಗಿಬೀಳುತ್ತಿರುವುದು ತೀರಾ ಖಂಡನೀಯ ನಡವಳಿಕೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಲಕ್ಷಾಂತರ ಜನರ ಶ್ರಮದ ಫಲ:
ಈ ಯೋಜನೆಯ ಅನುಷ್ಠಾನದ ಹಿಂದೆ ಲಕ್ಷಾಂತರ ಸಾರ್ವಜನಿಕರ, ಅನ್ನದಾತರ ಮತ್ತು ಹೋರಾಟಗಾರರ ಸತತ ಶ್ರಮವಿದೆ. ನೂರಾರು ರೈತರು ಮತ್ತು ಹೋರಾಟಗಾರರು ತಮ್ಮ ಸ್ವಂತ ಬದುಕನ್ನು ಲೆಕ್ಕಿಸದೆ ವರ್ಷಗಳ ಕಾಲ ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ನೀರಿಲ್ಲದೆ ದಶಕಗಳ ಕಾಲ ಬೆಳೆ ನಷ್ಟ ಅನುಭವಿಸಿ ಸಂಕಷ್ಟದಲ್ಲಿದ್ದ ಬಯಲುಸೀಮೆಯ ರೈತರ ಹಿತದೃಷ್ಟಿಯಿಂದ ಹಾಗೂ ಯೋಜನೆಗೆ ತಮ್ಮ ಅಮೂಲ್ಯವಾದ ಭೂಮಿಯನ್ನೇ ದಾನ ಮಾಡಿದ ಮಹನೀಯರ ತ್ಯಾಗದಿಂದಾಗಿ ಇದು ಸಾಧ್ಯವಾಗಿದೆ.
ಇದು ಯಾರೊಬ್ಬರ ವೈಯಕ್ತಿಕ ಸಾಧನೆಯಲ್ಲ:
ಹೋರಾಟಗಳು ನಡೆಯುತ್ತಿದ್ದ ಸಮಯದಲ್ಲಿ ಹೋರಾಟಗಾರರನ್ನು ಹತ್ತಿಕ್ಕಲು, ಭಯಗೊಳಿಸಲು ಯತ್ನಿಸಿದ ಘಟನೆಗಳೂ ನಡೆದಿವೆ. ಹೀಗಿರುವಾಗ, ಈ ಯೋಜನೆಯನ್ನು ತಮ್ಮದೇ ವೈಯಕ್ತಿಕ ಸಾಧನೆ ಅಥವಾ ಒಂದು ನಿರ್ದಿಷ್ಟ ರಾಜಕೀಯ ಪಕ್ಷದ ಕೊಡುಗೆ ಎಂದು ಬಿಂಬಿಸಿಕೊಳ್ಳುವುದು 'ಭದ್ರಾ ಯೋಜನೆಗೆ' ಮತ್ತು ಅದಕ್ಕಾಗಿ ಹೋರಾಡಿದ ಜೀವಗಳಿಗೆ ಎಸಗುವ ದ್ರೋಹವಾಗಿದೆ.
ಈ ಯೋಜನೆಯ ಯಶಸ್ಸು ಹಲವು ಸಂಘಟನೆಗಳ, ನೈಜ ಹೋರಾಟಗಾರರ ಬೆವರ ಹನಿಯ ಕೊಡುಗೆಯಾಗಿದ್ದು, ಇದರ ಪ್ರತಿಯೊಂದು ಫಲಶೃತಿಯು ಕಡೆಯ ಹಂತದ ನೈಜ ಹೋರಾಟಗಾರನಿಗೂ ತಲುಪಬೇಕಿದೆ ಎಂದು ಅಭಿಪ್ರಾಯಪಡಲಾಗಿದೆ.




