ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಲೋಕಸೇವಾ ಆಯೋಗದ ಸುಧಾರಣೆಗಾಗಿ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಆರಂಭವಾಗಿರುವ “KPSC ಉಳಿಸೋಣ!” ಅಭಿಯಾನಕ್ಕೆ ರಾಜ್ಯಾದ್ಯಂತ ಯುವಜನತೆಯಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.
ಅಭಿಯಾನದ ಭಾಗವಾಗಿ ರಾಜ್ಯದ ಮೂಲೆ ಮೂಲೆಗಳಿಂದ ಯುವ ಮಿತ್ರರು 1,700ಕ್ಕೂ ಹೆಚ್ಚು ಅಮೂಲ್ಯವಾದ ಸಲಹೆಗಳನ್ನು ಕಳುಹಿಸಿಕೊಟ್ಟಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, "ಯುವಕರು ಕಳುಹಿಸಿರುವ ಸಲಹೆಗಳು ನನಗೆ ಅಪಾರ ಆಶಾಭರವಸೆ ಮತ್ತು ವಿಶ್ವಾಸವನ್ನು ನೀಡಿವೆ. ಬಹಳಷ್ಟು ಯುವಕರು ಅತ್ಯಂತ ಪ್ರಾಯೋಗಿಕ, ಆಳವಾದ ಮತ್ತು ಇಡೀ ವ್ಯವಸ್ಥೆಯನ್ನೇ ಬದಲಾಯಿಸಬಲ್ಲ ಮಹತ್ವದ ಸಲಹೆಗಳನ್ನು ಹಂಚಿಕೊಂಡಿದ್ದಾರೆ" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಚರ್ಚೆಗೆ ಯುವಕರ ಧ್ವನಿ:
ಯುವ ಸಮೂಹದಿಂದ ಬಂದಿರುವ ಪ್ರಮುಖ ಮತ್ತು ವ್ಯವಸ್ಥಿತ ಬದಲಾವಣೆಗೆ ಪೂರಕವಾಗಿರುವ ಸಲಹೆಗಳನ್ನು ಸಾರ್ವಜನಿಕ ಚರ್ಚೆಗೆ ತರುವ ನಿಟ್ಟಿನಲ್ಲಿ, ಅವುಗಳನ್ನು ಹಂತ-ಹಂತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.
ಸದನ ಸಮಿತಿಯಲ್ಲಿ ಗಂಭೀರ ಚರ್ಚೆಗೆ ಕ್ರಮ:
"ಈ ಎಲ್ಲಾ ಸಲಹೆಗಳು ಹಾಗೂ ಇನ್ನೂ ಅನೇಕ ಯುವಕರ ಅಭಿಪ್ರಾಯಗಳನ್ನು ಸದನ ಸಮಿತಿಗೆ ತಲುಪಿಸಿ, ಅಲ್ಲಿ ಗಂಭೀರ ಚರ್ಚೆಗೆ ಒಳಪಡಿಸುವ ಸಂಪೂರ್ಣ ಜವಾಬ್ದಾರಿಯನ್ನು ನಾನು ವಹಿಸಿಕೊಂಡಿದ್ದೇನೆ."
ನಿಖಿಲ್ ಕುಮಾರಸ್ವಾಮಿ
ದೂರು, ಸಲಹೆಗಳಿಗೆ ಮುಕ್ತ ಅವಕಾಶ:
KPSC ವ್ಯವಸ್ಥೆಯಲ್ಲಿನ ಲೋಪದೋಷಗಳು, ಸುಧಾರಣೆಗಳು ಹಾಗೂ ದೂರುಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಮತ್ತು ಯುವಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಇನ್ನೂ ಅವಕಾಶವಿದ್ದು, ಸಾರ್ವಜನಿಕರು tinyurl.com/KPSCSuggestions ಲಿಂಕ್ ಮೂಲಕ ತಮ್ಮ ಸಲಹೆಗಳನ್ನು ದಾಖಲಿಸಬಹುದಾಗಿದೆ ಎಂದು ಅವರು ಕೋರಿದ್ದಾರೆ.
"ಇದು ಕೇವಲ ಒಂದು ಅಭಿಯಾನವಲ್ಲ, ಭ್ರಷ್ಟ ವ್ಯವಸ್ಥೆಯ ವಿರುದ್ಧ ಯುವಶಕ್ತಿಯ ಕ್ರಾಂತಿ. ನಿಮ್ಮ ಧ್ವನಿಯೇ ಬದಲಾವಣೆಯ ಆರಂಭ" ಎಂದು ಹೇಳುವ ಮೂಲಕ ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯದ ಯುವಜನತೆಯಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಹೊಸ ಭರವಸೆಯನ್ನು ಮೂಡಿಸಿದ್ದಾರೆ.



