ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಪಾಕ್ ಭಯೋತ್ಪಾದಕರ ಹುಟ್ಟಡಗಿಸುತ್ತಿವೆ ಬೆಂಗಳೂರು ಡ್ರೋನ್ ಗಳು” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ಭಾರತೀಯ ಸೇನೆಯು ನಡೆಸುತ್ತಿರುವ “ಆಪರೇಷನ್ ಸಿಂಧೂರ್” ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಭಯೋತ್ಪಾದಕ ಗೂಡುಗಳ ಆಳಕ್ಕೆ ನುಗ್ಗಿ ರಕ್ಕಸರ ಹುಟ್ಟಡಗಿಸುತ್ತಿರುವ ಆತ್ಮಾಹುತಿ ಡ್ರೋನ್ ಗಳು (SkyStriker suicide drones) ಬೆಂಗಳೂರಿನಲ್ಲಿ ನಿರ್ಮಾಣಗೊಂಡಿವೆ. ಇದು ನಿಜಕ್ಕೂ ಕನ್ನಡಿಗರಾದ ನಾವೆಲ್ಲರೂ ಹೆಮ್ಮೆ ಪಡುವ ಸಂಗತಿ ಎಂದು ವಿಜಯೇಂದ್ರ ಹರ್ಷ ವ್ಯಕ್ತಪಡಿಸಿದ್ದಾರೆ.
ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ದೂರದೃಷ್ಟಿ ಹಾಗೂ ಮಹತ್ವಾಕಾಂಕ್ಷಿ ಯೋಜನೆಯಲ್ಲೊಂದಾದ ಮೇಕ್ ಇನ್ ಇಂಡಿಯಾ ಭಾಗವಾಗಿ ಈ ಅತ್ಯಾಧುನಿಕ ತಂತ್ರಜ್ಞಾನದ, ಸ್ವಯಂ ಚಾಲಿತ ಡ್ರೋನ್ ಗಳು ರೂಪುಗೊಂಡಿದ್ದು,
ಈ ಹೊತ್ತು ಪರಿಣಾಮಕಾರಿಯಾಗಿ ಬಳಕೆಗೆ ಬಂದಿವೆ. ಭಾರತದ ಮಿಲಿಟರಿ ಶಕ್ತಿಯ ಜಂಘಾಬಲ ಹೆಚ್ಚಿಸಿ ಭಯೋತ್ಪಾದಕ ರಕ್ಕಸರು ಶತ್ರು ರಾಷ್ಟ್ರದ ಯಾವುದೇ ಮೂಲೆ, ಎಷ್ಟೇ ಆಳದಲ್ಲಿ ಅವಿತು ಕುಳಿತಿದ್ದರೂ, ಹುಡುಕಿಕೊಂಡು ಹೋಗಿ ನುಗ್ಗಿ ಸದೆಬಡಿಯುತ್ತಿವೆ ಎಂದು ವಿಜಯೇಂದ್ರ ಹೇಳಿದ್ದಾರೆ.