ಪೊಲೀಸರ ಕೊಲೆಗೆ ಯತ್ನ ಆರೋಪಿಗೆ ಗುಂಡು ಹಾರಿಸಿದ ಪೊಲೀಸರು

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪ್ರಕರಣ ಒಂದರಲ್ಲಿ ಬೇಕಾಗಿದ್ದ ಆರೋಪಿಯನ್ನು ಬಂಧಿಸಲು ಮುಂದಾದ ಪೊಲೀಸರ ಹತ್ಯೆ ಯತ್ನ ಮಾಡಿದ್ದು ಆತ್ಮ ರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿರುವ ಘಟನೆ ಚಿತ್ರದುರ್ಗ ತಾಲೂಕಿನ ಸೀಬಾರ ಸಮೀಪದಲ್ಲಿ ಶುಕ್ರವಾರ ಬೆಳಗಿನ ಜಾವ ಜರುಗಿದೆ.

ಪೊಲೀಸರು ಹಾರಿಸಿದ ಗುಂಡು ಆರೋಪಿ ಚೇಳುಗುಡ್ಡದ ಮಹಮ್ಮದ್ ಕಮ್ರಾನ್ ತಂದೆ ಮಹಮ್ಮದ್ ಖಾಸೀಂ ಮೊಣಕಾಲಿಗೆ ಗುಂಡು ತಗಲಿದ್ದು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಆರೋಪಿಯನ್ನು ಹಿಡಿಯಲು ಮುಂದಾದ ಪೊಲೀಸ್ ಸಿಬ್ಬಂದಿ ತಿಮ್ಮರಾಯಪ್ಪ ಅವರಿಗೆ ಚಾಕುವಿನಿಂದ ಹೊಟ್ಟೆಗೆ ಇರಿಯಲು ಯತ್ನಿಸಿದಾಗ ಪೊಲೀಸ್ ಕೈ ಅಡ್ಡ ಹಿಡಿದಿದ್ದರಿಂದ ಕೈಗೆ ಚಾಕು ಇರಿದಿದ್ದಲ್ಲದೆ ಮತ್ತೆ ಚಾಕುವಿನಿಂದ ಕೊಲೆ ಮಾಡಲು ಮುಂದಾಗುತ್ತಿದ್ದಂತೆ ಪೊಲೀಸರು ಆತ್ಮ ರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.

ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಮುಖ ಪ್ರಕರಣವೊಂದರಲ್ಲಿ ಬೇಕಾಗಿದ್ದ ಆರೋಪಿ ಮಹಮ್ಮದ್ ಕಮ್ರಾನ್ ನಗರದ ಹೊರವಲಯದ ಸೀಬಾರದ ಬಳಿ ಇರುವ ಮಾಹಿತಿ ಪೊಲೀಸ್ ನಿರೀಕ್ಷಕ ಮುದ್ದರಾಜ ವೈ ರವರು ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಹೋಗಿದ್ದು ಪೊಲೀಸರನ್ನು ಕಂಡು ಸ್ಥಳದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ವ್ಯಕ್ತಿಯನ್ನು ಹಿಡಿದುಕೊಳ್ಳುವ ಸಮಯದಲ್ಲಿ ಈ ಘಟನೆ ಸಂಭವಿಸಿದೆ.

ಆಗ ಪೊಲೀಸ್ ನಿರೀಕ್ಷಕ ಮುದ್ದರಾಜ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಕೆ ನೀಡಿದಾಗ್ಯೂ ಆರೋಪಿ ಪುನಃ ಚಾಕುವಿನಿಂದ ತಿಮ್ಮರಾಯಪ್ಪವರಿಗೆ ಚುಚ್ಚಿ ಕೊಲೆ ಮಾಡಲು ಪ್ರಯತ್ನಿಸಿದಾಗ ಮುದ್ದುರಾಜರವರು ಆರೋಪಿಯ ಕಡೆಗೆ ಒಂದು ಸುತ್ತು ಗುಂಡು ಹಾರಿಸಿದ್ದು ಆರೋಪಿಯ ಮೊಣಕಾಲಿಗೆ ತಗುಲಿದೆ. ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿ ಮತ್ತು ಆರೋಪಿ ಇಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

Share This Article
error: Content is protected !!
";