ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಕೈಗಾರಿಕಾ ವಲಯದಲ್ಲಿ ಮತ್ತೊಂದು ಹೂಡಿಕೆಯ ಪರ್ವ ಆರಂಭವಾಗಿದ್ದು, ಒಟ್ಟು 18,430.44 ಕೋಟಿ ಮೊತ್ತದ ಬಂಡವಾಳ ಹೂಡಿಕೆಗೆ ರಾಜ್ಯ ಸರ್ಕಾರ ಅಸ್ತು ಎಂದಿದೆ. ಇದರಿಂದಾಗಿ ರಾಜ್ಯದಲ್ಲಿ ಸುಮಾರು 15,032 ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಅನುಮೋದನೆ ನೀಡಿಕೆ ಸಮಿತಿಯ (SHLCC) 67ನೇ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಒಟ್ಟು 11 ಹೊಸ ಯೋಜನೆಗಳು ಹಾಗೂ 6 ಹೆಚ್ಚುವರಿ ಬಂಡವಾಳ ಹೂಡಿಕೆಯ ಪ್ರಸ್ತಾವನೆಗಳಿಗೆ ಅಧಿಕೃತವಾಗಿ ಸಮ್ಮತಿ ಸೂಚಿಸಲಾಗಿದೆ.
’ಬಿಯಾಂಡ್ ಬೆಂಗಳೂರು‘ ಪರಿಕಲ್ಪನೆಗೆ ಭರ್ಜರಿ ಯಶಸ್ಸು:
ಕೈಗಾರಿಕೆಗಳು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ರಾಜ್ಯದ ಇತರೆ ಜಿಲ್ಲೆಗಳಿಗೂ ವಿಸ್ತರಿಸಬೇಕು ಎನ್ನುವ ಸರ್ಕಾರದ ‘ಬಿಯಾಂಡ್ ಬೆಂಗಳೂರು‘ ಆಶಯಕ್ಕೆ ಈ ಹೂಡಿಕೆಗಳು ದೊಡ್ಡ ಬಲ ನೀಡಿವೆ. ಈ ಬಾರಿ ಅನುಮೋದನೆಗೊಂಡಿರುವ ಯೋಜನೆಗಳು ರಾಜ್ಯದ ವಿವಿಧ 11 ಜಿಲ್ಲೆಗಳಲ್ಲಿ ಹರಡಿಕೊಂಡಿರುವುದು ವಿಶೇಷ.
ಹೂಡಿಕೆ ಹರಿಯಲಿರುವ ಜಿಲ್ಲೆಗಳು:
ಬಾಗಲಕೋಟೆ, ಬೀದರ್, ಬೆಳಗಾವಿ, ಬಳ್ಳಾರಿ, ಕೋಲಾರ, ಚಿಕ್ಕಬಳ್ಳಾಪುರ,ದಕ್ಷಿಣ ಕನ್ನಡ, ತುಮಕೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಜಿಲ್ಲೆ.
ಸಮತೋಲಿತ ಅಭಿವೃದ್ಧಿಯತ್ತ ಹೆಜ್ಜೆ:
”ಬಿಯಾಂಡ್ ಬೆಂಗಳೂರು ಪರಿಕಲ್ಪನೆಯು ಉದ್ಯಮ ವಲಯದಲ್ಲಿ ಆಳವಾಗಿ ಬೇರೂರುತ್ತಿರುವುದಕ್ಕೆ ಈ ಹೂಡಿಕೆಗಳೇ ಸಾಕ್ಷಿ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗುವುದರಿಂದ ಆಯಾ ಭಾಗದ ಸ್ಥಳೀಯರಿಗೆ ಉದ್ಯೋಗ ದೊರೆಯಲಿದೆ. ಇದು ರಾಜ್ಯದ ಸರ್ವತೋಮುಖ ಮತ್ತು ಸಮತೋಲಿತ ಅಭಿವೃದ್ಧಿಗೆ ದಾರಿಯಾಗಲಿದೆ,” ಎಂದು ಸಚಿವ ಎಂ.ಬಿ. ಪಾಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಬೃಹತ್ ಹೂಡಿಕೆಯು ಕರ್ನಾಟಕವನ್ನು ದೇಶದ ಅಗ್ರಗಣ್ಯ ಕೈಗಾರಿಕಾ ಹಬ್ ಆಗಿ ಮುಂದುವರಿಸಲು ನೆರವಾಗಲಿದ್ದು, ಆರ್ಥಿಕತೆಗೆ ಹೆಚ್ಚಿನ ವೇಗ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

