ಅಂತರಗಳು ಕಥೆ ಭಾಗ-6: ಕುಮಾರ್ ಬಡಪ್ಪ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನೆನಪು ಮರುಕಳಿಸಿ ದೇಹವೆಲ್ಲ ಭಾರವಾಗಿ ತಲೆಯೆತ್ತಿ ಓಡಾಡದಷ್ಟು ಕಸಿವಿಸಿಯಾಗಿತ್ತು. ಹೌದು ಈ ಇಳಿವಯಸ್ಸಲ್ಲಿ ಇದರ ಅವಶ್ಯಕತೆ ಇತ್ತಾ
? ಪ್ರತಿ ದಿನವೂ,ಅವರ ನೋಟಕ್ಕೆ ನಾನು ಏನು ಉತ್ತರ ಹೇಳ್ಲಿ. ಮಮ್ಮಿ ತೀರಿ ಇನ್ನೂ ವರ್ಷವಾಗಿಲ್ಲ, ಅವರ ನೆನಪಾದ್ರೂ ಬೇಡ್ವಾ ನಿಮಗೆ.

ವೀರೇಶ್ ನ ಮನಸ್ಸು ಕೂರಲೂ ಬಿಡದೆ, ನಿಲ್ಲಲಾರದೆ  ಪರಿತಪಿಸಿತ್ತು. ಎಂತಾ ತಪ್ಪಿಗೆ ಮುಂದಾದ್ರಿ ನೀವು. ಬೆರಳೆಣಿಕೆಯ ಸಂಬಂಧಿಕರೊಂದಿಗೆ ನಡೆದ ಮದ್ವೆಯಲ್ಲಿ, ಎಲ್ಲೂ ಕಾಣದ ಭಾರತಿ, ಮೊನ್ನೆ ಇದ್ದಕ್ಕಿದ್ದಂತೇ ಗಂಡನ ಜೊತೆ ಬಂದು ಏನೆಲ್ಲ ರಂಪ ಮಾಡಿ ಹೋದ್ಲು.

- Advertisement - 

ಲಲಿತೆ ಭಾರತಿ ಇಬ್ಬರೂ ಕಾಲೇಜ್ ಮೆಟ್ಸ್, ನಿಮಗೆ ನಾಚಿಕೆ ಮಾನ ಏನಾದ್ರು ಇದಿಯಾ ಡ್ಯಾಡಿ, ಫ್ರೆಂಡ್ಸ್ ನೇ ಮದ್ವೆ ಆಗಿದಿರಲ್ಲಾ ನಾನು ಹೇಗೆ ಅವಳನ್ನ ಚಿಕ್ಕಮ್ಮ ಅಂತ ಕರೀಲಿ, ಜೀವನಪೂರ್ತಿ ಜೊತೆಗಿದ್ದ ಮಮ್ಮಿ ತೀರ್ಕೊಂಡ್ರು, ಅವರ ನೆನಪು ಸಾಕಾಗ್ಲಿಲ್ವಾ ನಿಮ್ಗೆ, ಇನ್ಮುಂದೆ ನಾನಿಲ್ಲಿಗೆ ಬರೊಲ್ಲ, ಅವ್ರ ಜೊತೇನೆ ನನ್ನ ಪಾಲಿಗೆ ತವರುನೂ ಸತ್ತೋಯ್ತು ಅಂತ ಅತ್ತೂ,ಗೋಳಾಡಿ ಮನೆ ಒಳಗೂ ಬರದೇ ಹೋದವಳು ಇತ್ತ ತಿರುಗಿಯೂ ನೋಡಿಲ್ಲ.

ಯಾಕೋ ಏನೋ ಲಲಿತೆಯೂ ಕೂಡ ಆ ದಿನ ಕೋಣೆಯಿಂದ ಹೊರಗೇ ಬಂದಿರಲಿಲ್ಲ, ವೇಣು ಮಾತ್ರ ಮನೆಯಲ್ಲಿ ಇದ್ಯಾವುದು ನಡೆದೇ ಇಲ್ಲವೇನೋ ಅನ್ನೋಹಾಗೆ, ಭಾರತಿಗೂ ಏನೊಂದೂ ಹೇಳದೇ  ಗಂಭೀರವಾಗಿಯೇ ಕುಳಿತಿದ್ರು, ಯಾರು ಏನು ಹೇಳಿದ್ರು ನನ್ನ ನಿರ್ಧಾರವೂ ಸರಿ ಇದೆ ಅನ್ನುವಂತೆ.

- Advertisement - 

ಕಣ್ಣಿ ಕಿತ್ತ ಕರುವಿನಂತೆ ಮನಸ್ಸು ಎತ್ತೆತ್ತಲೋ ಹರಿಹಾಯುತ್ತಿತ್ತು. ಒಂಟಿತನಕ್ಕೆ ಪ್ರತಿರೂಪಗಳೇ ಪ್ರಶ್ನೆ,ಉತ್ತರವಾಗಿ ಸಂವಾದದಲ್ಲಿ ತೊಡಗಿದ್ದವು.
ಅವರ ಕಾಡುವಿಕೆ ಇತ್ತೀಚೆಗಂತೂ ಅತಿಯಾಗಿದೆ
, ನಾನು ಹೇಗೆ ಸಹಿಸ್ಕೊಂಡು ಮನೆಗೆ ಹೋಗ್ಲಿ, ಭಾವಿಸಿಕೊಂಡ ತಾಯಿ ರೂಪ, ಅವರಲ್ಲಿ ಕಿಂಚತ್ತೂ ಕಾಣುತ್ತಿಲ್ಲ.

ಅಸಲಿ ನನ್ನೊಡನೆ ಮದ್ವೆಗೆ ಸಿದ್ದಗೊಂಡ ವಧು ಅವ್ರು , ನಾನೆಷ್ಟು ಮನವರಿಕೆ ಮಾಡಿದ್ರೂ, ಕಟ್ಟುಪಾಡುಗಳನ್ನ ಬಿಡಿಸಿ ಹೇಳಿದ್ರೂ ಯಾವುದಕ್ಕೂ ಹಿಂದೆ ಸರಿಯುತ್ತಿಲ್ಲ.
ಮೊನ್ನೆ ಇಂಥದ್ದೇ… ಇನ್ನೊಂದು ಘಟನೆ ಛೇ…..ನೆನಪುಗಳೇಕೆ ಬರುತ್ತವೆ ಬೇಡವೆಂದರೂ ಸಹ.

ಇದೇನ್ ಮಾತು ಅಂತ ಆಡ್ತೀರಾ ಸಮಾಜ ಏನಂದೀತು ಅನ್ನೋ ಜ್ಙಾನ ಬೇಡ್ವಾ ನಿಮ್ಗೆ. ಲಲಿತೆಯ ಸಿಟ್ಟು ಕೂಡ ಅಷ್ಟೇ ಗಟ್ಟಿಯಾಗಿತ್ತು. ಮಗಳ ವಯಸ್ಸು ಅನ್ನೋ ಅರಿವಿಲ್ಲದೆ, ಮುದುಕ ಮಂಚಕ್ಕೆ ಕರೆಯೋದಕ್ಕೆ ಈ ನಿನ್ನ ಸಮಾಜ ಏನೂ ಅನ್ನಲ್ವೋ. ಕಟ್ಟಳೆಗಳು ಹೆಣ್ಣಿಗೆ ಮಾತ್ರನಾ,ಗಂಡಿಗೆ ಅನ್ವಯಿಸಲ್ವಾ?
ಬಂಡೆಗೆ ಅಪ್ಪಳಿಸಿ ಸಿಡಿಯುವಂತಹ ಲಲಿತೆಯ ಮಾತುಗಳು
, ವೀರೇಶನಿಗೆ ತಬ್ಬಿಬ್ಬಾಗಿಸಿದ್ದವು.

ನನಗೂ ಬಯಕೆಗಳಿವೆ, ಅವುಗಳಿಗಿನ್ನೂ ಮುಪ್ಪಾಗಿಲ್ಲ ವೀರೂ, ಪಡಿಬೇಕು ಅಂತ ಹೊರಟ್ರೇ ಇದೇ ಸಮಾಜ ಕ್ಯೂ ನಿಲ್ಲುತ್ತೆ, ಬಾಯಲ್ಲಿ ಸಂಸ್ಕಾರ ಪಠಿಸೋವೆಲ್ಲಾ ಜೊಲ್ಲು ಸುರಿಸೊ ನಾಯಿಗಳಾಗಿ ಹತ್ತಿರ ಬರ್ತವೆ.

ಹೆತ್ತವರ ಬಡತನ,ಹಸಿವು ನೀಗ್ಸೋದಕ್ಕೆ ನಿನ್ನ ತಂದೆ ಕಟ್ಟಿರೋ ತಾಳಿ ನನ್ನ ಕೊರಳು ಅಲಂಕರಿಸಿದೆ ಅಷ್ಟೇ, ಆದ್ರೆ ನನಗೂ ಮನಸ್ಸೂ ಅಂತ ಇದೆಯಲ್ಲಾ, ಅದು ಎಂದೂ ನಿನ್ನ ತಂದೆಯನ್ನ ಗಂಡ ಅಂತ ಸ್ವೀಕರಿಸಿಲ್ಲ.

ವೀರೇಶ್ ಕಂಪಿಸಿದಂತಾಗಿ ಹೌಹಾರಿದ, ಇದೇನು ಅಂತ ಮಾತಾಡ್ತಿದಿರಿ! ಹೌದು ನಿನ್ನ ತಂದೆ ಜೊತೆಗಿದ್ದು, ನಿನಿಗೆ ಚಿಕ್ಕ ಅಮ್ಮನಾಗಿ, ನಾನು ಸಹ ಬದುಕೋಕಾಗಲ್ಲ.

ತೆರೆದ ಬಾಗಿಲಲ್ಲಿ ತಣ್ಣಗೆ ನುಸುಳುತ್ತಿದ್ದ ಗಾಳಿ, ಒಮ್ಮೆಲೇ ಸುತ್ತಿಕೊಂಡು ನೆಲದ ಧೂಳೆಲ್ಲ ಮೇಲೆದ್ದು ಬಂದಂತಾಯಿತು ವೀರೇಶ್ ಗೆ. ಮುಖ ನೋಡಲಾಗದೇ ಲಲಿತೆಯ ಪಾದಗಳನ್ನೇ ದಿಟ್ಟಿಸುತ್ತ, ನಿಮ್ಮ ಕೈ ಮುಗಿತೀನಿ ಈ ತರ ನಡ್ಕೋಬೇಡಿ, ಯುದ್ದಕ್ಕೊರಟ ಹೆಣ್ಣಂತೆ ಕೆರಳಿದ್ದ ಲಲಿತೆ ನೋಡು ಈ.ಬೆಲೆಬಾಳೋ ಸೀರೆ,ಆಭರಣಗಳು, ಈ ಭವ್ಯ ಬಂಗ್ಲೆ ನಿಮ್ಮ  ಸುಪ್ಪತ್ತಿಗೆ, ಇವು ಯಾವುವೂ ನನ್ನ ಸುಖದ ಹೆಜ್ಜೆಗಳಲ್ಲ.

ನನಗೆ ನನ್ನ ತೊಟ್ಟಿಲ ಕನಸು ನನಸಾಗಬೇಕು ಅಷ್ಟೇ. ಅದು ಮಾತ್ರ ಈ ಜನ್ಮದಲ್ಲಿ ಸಾಧ್ಯವಿಲ್ಲ, ತಾಯಿ ಮಗನ ಪವಿತ್ರ ಸಂಬಂಧಕ್ಕೆ, ಅಪಚಾರ ಮಾಡುವ ಪ್ರಯತ್ನಕ್ಕೆ ಆಸ್ಪದ ಕೊಡಲ್ಲ.

ಅದೇ ಗಾಂಭೀರ್ಯದಲ್ಲಿ ವೀರೇಶ್ ನಿಂದ ಹೊರಬಂದ ಮಾತುಗಳು ಕೋಣೆಯ ಮೂಲೆ ಮೂಲೆಗೂ ಧ್ವನಿಸಿದ್ದವು,ಉರಿಯುತ್ತಿದ್ದ ಬೆಂಕಿಗೆ ತಣ್ಣೀರೇರಚುವಂತೆ.
ಲೇಖನ: ಕುಮಾರ ಬಡಪ್ಪ, ಚಿತ್ರದುರ್ಗ.      ನಾಳೆಗೆ………

Share This Article
error: Content is protected !!
";