ಚಂದ್ರವಳ್ಳಿ ನ್ಯೂಸ್, ಹೈದರಾಬಾದ್: ಅನ್ನದಾನಿಗೆ ಯಮಲೋಕದಲ್ಲೂ ಮನ್ನಣೆ ಈಗಿನ ಕಾಲದಲ್ಲಿ ಇರುವಂತೆ ಹಿಂದಿನ ಕಾಲದಲ್ಲಿ ತರಹೇವಾರಿ ಊಟದ ವ್ಯವಸ್ಥೆ ಅಥವಾ ಸೊಂಪಾದ ಕಾಲ ಅದಾಗಿರಲಿಲ್ಲ ಊಟವೆಂದರೆ ಹೇಗೋ ಹೊಟ್ಟೆ ತುಂಬಿಸಿಕೊಂಡರೆ ಸಾಕಪ್ಪ ಎಂಬ ಕಾಲ. ಆಗಿನ ಕಾಲದಲ್ಲಿ ಒಂದು ಮುದ್ದೆ ಮಾತ್ರ ಉಳಿದು ಊಟ ಮಾಡುವವರು ಮೂವರು ಇದ್ದರೆ ಅದರಲ್ಲಿಯೇ ಒಬ್ಬರಿಗೆ ಮುರುಕ (1/2) ಇಬ್ಬರಿಗೆ ಗಿರುಕಗಳಾಗಿ (1/4) ಹಂಚಿಕೊಂಡು ಬದುಕುವ ಗುಣ ಸ್ಥಿತಿ ಗತಿ ಇತ್ತು ಆದಾಗ್ಯೂ ಎಷ್ಟೋ ಜನಕ್ಕೆ ಅಷ್ಟು ಸಿಗದೆ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ ಎಂಬಂತಹ ಸ್ಥಿತಿಯು ಸರ್ವೇ ಸಾಮಾನ್ಯವಾಗಿತ್ತು ಎಂಬುವುದು ಆಗಿನ ಕಾಲದ ಹಿರಿಯರ ಅನುಭವ ಕೇಳಿರುತ್ತೇವೆ. ಅಂತಹ ಸಮಯದಲ್ಲೇ ಈ ಸ್ಥಿತಿವಂತರು, ಇದ್ದಂತವರು ಅದರಲ್ಲೂ ಮನಸಿದ್ದಂತವರು ಜಾತ್ರೆ ಪರ್ಸೆ ಹಬ್ಬ ಸಮಾರಂಭ ಎಂಬಿತ್ಯಾದಿಗಳನ್ನು ಮಾಡುವುದರ ಮೂಲಕ ಎಲ್ಲರಿಗೂ ಸಾಮೂಹಿಕ ಭೋಜನಗಳನ್ನು ಏರ್ಪಡಿಸುತ್ತಿದ್ದರು ಆಗಿನ ಅವರ ಉದ್ದೇಶ ಬಡ-ಬಗ್ಗರು ಒಂದು ದಿನವಾದರು ಹೊಟ್ಟೆ ತೃಪ್ತಿಯಾಗುವಂತೆ ಊಟ ಮಾಡಲಿ ಎಂಬುದಾಗಿತ್ತು ಈ ರೀತಿಯಾಗಿ ಸೇವೆ ಎಂದು ತಿಳಿದು ಅನ್ನದಾನ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಹೇಳಬಹುದಾದರೆ, ಅನ್ನದಾನ ಮಾಡಿದ, ಮಾಡುವಂತಹ ಜನರು ಸ್ವರ್ಗವಾಸಿಯಾದಾಗ ಅವರಿಗೆ ಯಾವ ಯಾವ ರೀತಿ ಸನ್ಮಾನಗಳು ಸಿಗುತ್ತವೆ ಎಂಬುದರ ಬಗ್ಗೆ ನನ್ನ ತಂದೆಯವರು ಒಂದು ಕತೆಯನ್ನು ಹೇಳಿದ್ದರು.
ಸತ್ತು ಬಂದವರೆನ್ನೆಲ್ಲ ವಿಚಾರಣೆ ಮಾಡಿ ಯಾರಿಗೆ ಸ್ವರ್ಗ ಯಾರಿಗೆ ನರಕ ಎಂದು ನಿರ್ಧರಿಸುವುದಕ್ಕೂ ಮುನ್ನ ಯಮಲೋಕದಲ್ಲಿ ಎಲ್ಲರನ್ನು ಒಂದು ರೂಮಿನಲ್ಲಿ ದಿಗ್ಬಂಧನ ಮಾಡಿ ಕೂಡಿಟ್ಟುರುತ್ತಾರೆ ಮತ್ತು ಮುಂದಿನ ವಿಚಾರಣೆಯ ತಿಥಿಯು ಬರುವವರೆಗೂ ಅಲ್ಲೇ ಇರಲು ಹೇಳಿ ನಿಮಗೆ ನಾವು ಯಾವುದೇ ಊಟದ ವ್ಯವಸ್ಥೆ ಮಾಡಿರುವುದಿಲ್ಲ ಆದರೆ ನೀವುಗಳು ಯಾರ್ಯಾರು ಭೂಲೋಕದಲ್ಲಿ ಇರುವಾಗ ಅನ್ನದಾನ ಮಾಡಿರುವಿರೋ ಹೇಳಿ ನೀವು ಯಾವ ರೀತಿ ಅನ್ನದಾನ ಮಾಡಿರುತ್ತೀರೋ ಅದೇ ರೀತಿ ನಿಮಗೆ ಮುಂದಿನ ವಿಚಾರಣೆವರೆಗೂ ನಿಮಗೆ ಊಟದ ವ್ಯವಸ್ಥೆ ಮಾಡುತ್ತೇವೆ ಎನ್ನುತ್ತಾರೆ. ಆಗ ಕೆಲವರು ತಾವು ಮಾಡಿದ ಅನ್ನದಾನವನ್ನು ನೆನಪು ಮಾಡಿಕೊಂಡು ಹೇಳುತ್ತಾರೆ ಅದರಂತೆ ಯಮದೇವನು ತನ್ನ ದಿವ್ಯ ಶಕ್ತಿಯಿಂದ ಅದರ ಸತ್ಯತೆಯನ್ನು ತಿಳಿದು ಅವರು ಹೇಳಿದ್ದು ನಿಜವೆಂದಾದರೆ ಅವರು ಅನ್ನದಾನ ಮಾಡಿರುವ ರೀತಿಯಲ್ಲೇ ಅವರಿಗೆ ನಿನಗೆ ಹೊಟ್ಟೆ ಹಸಿದಾಗೆಲ್ಲ ನೀನು ಮಾಡಿದ ಅನ್ನದಾನವನ್ನು ನೆನಪು ಮಾಡಿಕೋ ನಿನ್ನ ಹೊಟ್ಟೆ ತುಂಬುತ್ತದೆ ಎಂದು ಮತ್ತು ಯಾರು ಸುಳ್ಳು ಹೇಳಿದರೋ ಹಾಗು ಎಂದಿಗೂ ಒಬ್ಬರಿಗೆ ಅನ್ನದಾನವೇ ಮಾಡಿರುವುದಿಲ್ಲವೋ ಅಂತವರಿಗೆ ಮುಂದಿನ ವಿಚಾರಣೆ ಸಮಯ ಬರುವವರೆಗೂ ನೀನು ಹೊಟ್ಟೆ ಹಸಿವಿನಿಂದ ಸಂಕಟ ಅನುಭವಿಸು ಎಂದು ಶಿಕ್ಷೆ ಕೊಡುತ್ತಾನೆ.
ಆದರೆ ಒಬ್ಬ ಮನುಷ್ಯ ಮಾತ್ರ ಅನ್ನದಾನ ಮಾಡಿರುವುದರ ಬಗ್ಗೆಯಾಗಲಿ ಅಥವಾ ಮಾಡದಿರುವುದರ ಬಗ್ಗೆಯಾಗಲಿ ಏನೊಂದು ಹೇಳದೆ ದುಃಖಿಸುತ್ತಿರುತ್ತಾನೆ ಅದನ್ನು ಕಂಡ ಯಮದರ್ಮರಾಯ ಹೇ ಮನುಷ್ಯ ನಿನ್ನ ಆಯುಷ್ಯ ತೀರಿ ಇಲ್ಲಿಗೆ ಬಂದಿದ್ದೀಯ ಮತ್ತು ನಾನಿನ್ನೂ ನಿನಗೆ ಯಾವುದೇ ಶಿಕ್ಷೆ ಕೊಟ್ಟಿಲ್ಲ ಆದರೂ ಏಕೆ ಈ ರೀತಿ ಶೋಕಿಸುತ್ತಿರುವೆ ಎಂದಾಗ, ಆ ಮನುಷ್ಯ ಹೇಳುತ್ತಾನೆ ಸ್ವಾಮಿ, ನಾನು ಭೂಲೋಕದಲ್ಲಿರುವಾಗ ಒಬ್ಬ ಅನಾಥ ಬಡ ಬಿಕ್ಷುಕನಾಗಿದ್ದೆ ನಾನು ಯಾರಿಗು ಅನ್ನದಾನ ಮಾಡಲಿಲ್ಲ. ಏಕೆಂದರೆ ಮೊದಲೇ ನಾನು ಒಬ್ಬ ಭಿಕ್ಷುಕ ಹಾಗಾಗಿ ನನಗೆ ಅನ್ನದಾನ ಮಾಡುವಷ್ಟು ಶಕ್ತಿ ಹೇಗೆ ಬಂದೀತು ಅದರಲ್ಲೂ ಅವತ್ತಿನ ಮಟ್ಟಿಗೆ ಬೇಕಾಗುವಷ್ಟು ಮಾತ್ರವನ್ನೇ ಬಿಕ್ಷೆಯಾಗಿ ಪಡೆದೆ ಎಂದು ಹೇಳಲು ಇದು.
ಯಮದರ್ಮರಾಯರಿಗೂ ಒಂದು ಸಂದಿಗ್ದ ಸ್ಥಿತಿಯಾಗಿ ಗೋಚರಿಸುತ್ತದೆ. ಮನಸಲ್ಲೇ ಇವನಿಗೆ ಏನು ಮಾಡಬೇಕು ಎಂದು ತನ್ನ ದಿವ್ಯ ಶಕ್ತಿಯಿಂದ ಕಣ್ಮುಚ್ಚಿ ಯೋಚಿಸಿದಾಗ ಏನೋ ಅರಿತಂತವರಾಗಿ ಅಯ್ಯ ಮನುಷ್ಯ ನೀನು ಅನ್ನದಾನ ಮಾಡದೆ ಇರಬಹುದು ಆದರೆ ಬೇರೆ ಯಾವುದಾದರೂ ಸಹಾಯ ಮಾಡಿರಬಹುದು ಯೋಚಿಸಿ ಹೇಳು ಎಂದು ಕೇಳಿದಾಗ ಅಯ್ಯೋ ಸ್ವಾಮಿ ನಾನೆ ಒಬ್ಬ ಭಿಕ್ಷುಕ ನನ್ನಿಂದೆಂತಹ ಸಹಾಯ ಮಾಡಲಾದೀತು.
ಆದರೆ ಒಮ್ಮೆ ನಾನು ಒಂದು ದೇವಸ್ಥಾನದಲ್ಲಿ ಪ್ರಸಾದ ಸ್ವೀಕರಿಸಿ ಬೇರೊಂದು ಕಡೆ ಹೋಗುವಾಗ ಅಲ್ಲಿ ಯಾರೋ ನನ್ನಂತವನೆ ಹಸಿವು ಹಸಿವು ಎಂದು ಅಳುತ್ತಿದ್ದ ಅವನಿಗೆ ನಾನು ಪ್ರಸಾದ ಸ್ವೀಕರಿಸಿ ಬಂದಂತಹ ದೇವಸ್ಥಾನದ ಕಡೆ ಹೋಗೆಂದು ಕೈ ಬೆರಳು ಮಾಡಿ ತೋರಿಸಿದೆ ಅಷ್ಟೇ ಎಂದನು. ಹೌದೇ ಪರವಾಗಿಲ್ಲ ಬಿಡು ನೀನೊಬ್ಬ ಬಿಕ್ಷುಕನಾಗಿದ್ದೇ ಎಂದು ಹೇಳುತ್ತಿದ್ದೀಯ ಅಲ್ಲದೆ ಎಷ್ಟೋ ಜನ ಎಲ್ಲಾ ಉಳ್ಳವರೆ ಒಬ್ಬರಿಗೆ ಅನ್ನದಾನ ಮಾಡದೆ ಇರುವಾಗ ನೀನು ತಾನೇ ಏನು ಮಾಡಲು ಸಾಧ್ಯ ಹೋಗಲಿ ನೀನು ಯಾವ ಕೈ ಬೆರಳು ಮಾಡಿ ತೋರಿಸಿ ಒಬ್ಬ ಹಸಿದವನಿಗೆ ಅನ್ನ ಸಿಗುವ ಜಾಗ ತೋರಿಸಿ ಅವನ ಹಸಿವು ನೀಗಿಸಿದೆಯೋ ಆ ಬೆರಳನ್ನು ನಿನಗೆ ಯಾವಾಗ ಹೊಟ್ಟೆ ಹಸಿವಾಗುವುದೋ ಆಗ ಆ ಕೈ ಬೆರಳನ್ನು ನಿನ್ನ ಬಾಯಲ್ಲಿಟ್ಟು ಚೀಪು ನಿನ್ನ ಹೊಟ್ಟೆ ತುಂಬುತ್ತದೆ ಎಂದು ಯಮರಾಯ ಹೇಳಲು ಅದರಂತೆ ಮಾಡಿ ಆ ಭಿಕ್ಷುಕ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಾನೆ. ಈ ರೀತಿಯಾಗಿ ಈ ಕತೆಯ ಸಾರಾಂಶದ ಅರ್ಥವೇ ಹೇಳುವಂತೆ ಯಾರು ಅನ್ನದಾನ ಸೇವೆ ಮಾಡುತ್ತಾರೋ ಅವರಿಗೆ ಯಮಲೋಕದಲ್ಲೂ ಮನ್ನಣೆ ಸಿಗುತ್ತದೆ. ಅದಕ್ಕಾಗಿ ಅನ್ನದಾನ ಎನ್ನುವುದು ತುಂಬಾ ಶ್ರೇಷ್ಠ ಎಂದು ಹೇಳಲೇಬೇಕು. ಆದರೆ ಆ ಸೇವೆಯ ಉಪಯೋಗ ನಿರ್ಗತಿಕರಿಗೆ ಮತ್ತು ಅವಶ್ಯಕತೆ ಇರುವಂತವರಿಗೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡಿದ ಸೇವೆ-ದಾನದ ಫಲ ಪ್ರಾಪ್ತಿಯಾಗುತ್ತದೆ.
ನಮ್ಮ ನಾಡಿನ ಸಾಂಸ್ಕೃತಿಕ ರಾಯಭಾರಿಯಾದ ಮತ್ತು ಕಾಯಕವೇ ಕೈಲಾಸ ಎಂದು ಪ್ರತಿಪಾದಿಸಿದ ಅಣ್ಣ ಬಸವಣ್ಣನವರು ಅನ್ನದಾನದ ಮಹತ್ವವನ್ನು ಜಗತ್ತಿಗೆ ಸಾರಿದವರು ಅವರು ಅನ್ನದಾನ ಮಾಡಿ ಅನ್ನದಾನಿ ಎನಿಸಿಕೊಳ್ಳುವುದು ಪ್ರತಿಷ್ಠೆಯ ವಿಚಾರವಾಗುತ್ತದೆ ಎಂದು ತಾವು ಮಾಡುವ ಅನ್ನಾದನವನ್ನು ಅನ್ನದಾಸೋಹ ಎಂದು ಕರೆದರು ಮತ್ತು ಅವರು ತಮ್ಮ ದುಡಿಮೆಯ ಬಹುತೇಕ ಭಾಗವನ್ನು ಅನ್ನ ದಾಸೋಹಕ್ಕೆ ಮೀಸಲಿಟ್ಟು ನಿರ್ಗತಿಕರಿಗೆ ಮತ್ತು ಅವಶ್ಯಕ ಇರುವಂತವರಿಗೆ ಅನ್ನ ದಾಸೋಹ ಮಾಡುವ ಮೂಲಕ ಎಲ್ಲರಿಗೂ ಪ್ರೇರಣೆ ನೀಡಿ ಆದರ್ಶವಾಗಿದ್ದಾರೆ. ಬದುಕಿರುವಾಗ ಎಲ್ಲರೂ ಒಂದಲ್ಲ ಒಂದು ತರನಾದ ದಾನ ಮಾಡುತ್ತಾರೆ ಅದು ಅನ್ನದಾನ ಆಗಿರಬಹುದು, ವಿದ್ಯಾದಾನ ಆಗಿರಬಹುದು ಅಥವಾ ಇನ್ಯಾವುದೋ ದಾನ ಆಗಿರಬಹುದು.
ಆದರೆ ಈ ಅನ್ನದಾನವೆನ್ನುವುದೇನೋ ತುಂಬಾ ಶ್ರೇಷ್ಠವೇ ನಿಜ ಅದು ಅವಶ್ಯಕತೆ ಇದ್ದವರಿಗೆ ನಿರ್ಗತಿಕರಿಗೆ ನಿರಾಶ್ರಿತರಿಗೆ ದುಡಿದು ತಿನ್ನಲು ಆಗದವರಿಗೆ ನೀಡಿದಲ್ಲಿ ಮಾತ್ರ ಆ ಅನ್ನದಾನ ಶ್ರೇಷ್ಠದಾನ ಆಗುತ್ತದೆ ಆದರೆ ಕೆಲವರು ನಾನು ಅನ್ನದಾನ ಮಾಡುತ್ತೇನೆ ಎಂದು ಮೂಕ ಪ್ರಾಣಿಗಳನ್ನು ಬಲಿಕೊಟ್ಟು ಹಬ್ಬ ಹರಿದಿನಗಳಲ್ಲಿ ತನ್ನ ಸಂಬಂಧಿಕರಿಗೋ ಅಥವಾ ಒಡನಾಡಿಗಳಿಗೋ ಊಟ ಹಾಕಿದ ಮಾತ್ರಕ್ಕೆ ಅದು ಯಾವುದೇ ಕಾರಣಕ್ಕೂ ಅನ್ನದಾನ ಎನ್ನಲು ಸಾಧ್ಯವೇ ಇಲ್ಲ ಹಸಿದವರಿಗೆ ಮತ್ತು ಅವಶ್ಯಕತೆ ಇರುವಂತವರಿಗೆ ಅನ್ನದಾನ ಮಾಡಬೇಕು ಮತ್ತು ಅವರು ನಮಗೆ ಗೊತ್ತಿರುವವರೇ ಆಗಿರಬೇಕಾಗೇನು ಇಲ್ಲ ಅವರು ನಮ್ಮನ್ನು ಹೊಗಳಬೇಕಾಗು ಇಲ್ಲ ಅವರು ಹೊಟ್ಟೆ ತುಂಬಿಸಿಕೊಂಡ ಖುಷಿಯಾಗಿ ಹೋದರೆ ಅದೇ ನಮಗೆ ನೆಮ್ಮದಿ ತರುತ್ತದೆ. ಲೇಖನ:ವೆಂಕಟೇಶ ಹೆಚ್ ಚಿತ್ರದುರ್ಗ
CRPF ಹೈದರಾಬಾದ್ 7760023887



