ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸಚಿವ ಸಂಪುಟ ಕೊನೆಗೂ ವಿಸ್ತರಣೆಯಾಗಿದ್ದು, 20 ನೂತನ ಸಚಿವರ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ಅಧಿಕೃತವಾಗಿ ಪ್ರಕಟಿಸಿದೆ.
ಹೈಕಮಾಂಡ್ ಹೊಸ ಸಮೀಕರಣಗಳೊಂದಿಗೆ ಸಚಿವ ಸ್ಥಾನ ಭರ್ತಿ ಮಾಡಿದ್ದು, ನೂತನ ಸಚಿವರ ಪಟ್ಟಿ ಹೊರಬಿದ್ದ ತಕ್ಷಣವೇ ಕಾಂಗ್ರೆಸ್ನಲ್ಲಿ ಸಚಿವಾಂಕ್ಷಿಗಳ ಆಕ್ರೋಶ ಭುಗಿಲೆದ್ದಿದೆ.
ಸಚಿವ ಸ್ಥಾನದ ತೀವ್ರ ನಿರೀಕ್ಷೆಯಲ್ಲಿದ್ದ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ಅವರಿಗೆ ಕೊನೆ ಗಳಿಗೆಯಲ್ಲಿ ಸಚಿವ ಸ್ಥಾನ ಕೈತಪ್ಪಿದ್ದು, ಇದರಿಂದ ತೀವ್ರ ಅಸಮಾಧಾನಗೊಂಡಿರುವ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಅಷ್ಟೇ ಅಲ್ಲದೆ, ತಮ್ಮ ಬಳಿಯಿರುವ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಇದರಿಂದಾಗಿ ಕೆಲ ಶಾಸಕರು ಕೂಡ ರಾಜೀನಾಮೆ ಹಾದಿ ತುಳಿಯುವ ಸುಳಿವು ನೀಡಿದ್ದಾರೆ.
ಎಂ.ಬಿ. ಪಾಟೀಲ್ ವಿರುದ್ಧ ಬೆಂಬಲಿಗರ ಆರೋಪ: ಕೆಲವು ದಿನಗಳ ಹಿಂದಷ್ಟೇ ಯಶವಂತರಾಯಗೌಡ ಪಾಟೀಲ್ ಅವರ ಬೆಂಬಲಿಗರು ಬೆಂಗಳೂರಿನ ಸಿಎಂ ನಿವಾಸದ ಹೊರಗೆ ಬೃಹತ್ ಪ್ರತಿಭಟನೆ ನಡೆಸಿದ್ದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ವಿಜಯಪುರ ಜಿಲ್ಲೆಯ ಮತ್ತೊಬ್ಬ ಶಾಸಕರಿಗೆ ಸಚಿವ ಸ್ಥಾನ ನೀಡುವುದನ್ನು ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.
ಯಶವಂತರಾಯಗೌಡರು ಸಚಿವರಾದರೆ ತಮ್ಮ ರಾಜಕೀಯ ಪ್ರಾಮುಖ್ಯತೆ ಕಡಿಮೆಯಾಗಬಹುದು ಎಂಬ ಭಯದಿಂದ ಎಂ.ಬಿ. ಪಾಟೀಲ್ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಬೆಂಬಲಿಗರು ಗಂಭೀರ ಆರೋಪ ಮಾಡಿದ್ದರು. ವಿಜಯಪುರ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ನೀಡಬೇಕು ಎಂಬ ಬೆಂಬಲಿಗರ ಹಾಗೂ ಶಾಸಕರ ಆಗ್ರಹಕ್ಕೆ ಹೈಕಮಾಂಡ್ ಸೊಪ್ಪು ಹಾಕದಿರುವುದು ಈಗ ಕಾಂಗ್ರೆಸ್ ಪಾಳಯದಲ್ಲಿ ದೊಡ್ಡ ಮಟ್ಟದ ಬಂಡಾಯದ ಸದ್ದು ಉಂಟುಮಾಡಿದೆ.



