ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನೋಡ್ರೋ ನೀವಿಬ್ರೂ ನನ್ ಗೆಳೆಯರು ಒಬ್ಬರಿಗೊಬ್ರು ಎದೆ ಕೊಟ್ಗಂಡು ನಿಂತ್ರೆ ಏನ್ ಬೇಕಾದ್ರೂ ಸಾಧಿಸ್ಬೋದು ಇನ್ನೂ ಮ್ಯಾಲಿನ ಮುಗಿಲು ನೆಚ್ಕೊಂಡು ಹೆಂಡ್ರನ್ನ ಸಾಕ್ತೀವಿ ಅಂಬೋದು ಎಷ್ಟು ಸರಿ ಅಂತ?.
ಅಂದ್ರೆ ಈಗ್ ಏನ್ ಮಾಡ್ಬೇಕಂತಿ ಕಂಚಪ್ಪ ಕೇಳಿದ್ದಕ್ಕೆ ಭೀಮಣ್ಣನೂ ತಲೆ ಆಡಿಸಿದ ಸಣ್ಣಿಂಗ ತಂದಿಟ್ಟ ಬಿಸಿ ಚಾ ಕೈಗೆತ್ತಿಕೊಳ್ಳುತ್ತಲೇ ಆ ದಿನಗಳಲ್ಲಿ ಬಂದಂಗೇ ಈಗೀಗ ಮಳೆಸ್ವಾನೆಗಳೇ ಬರ್ತಿಲ್ಲ ಒಂದು ಬಂದ್ರೆ ಮೂರು ಕೈ ಕೊಡ್ತವೆ ಬಿತ್ತಿದ ಬೀಜಗಳು ಮೊಳಕೆನೂ ಆಗ್ತಿಲ್ಲ ಹಿಂಗೇ ಮುಂದುವರೆದ್ರೇ ನಾವು ಹೆಂಗ್ ಬದ್ಕೋದು.
ಮತ್ತೇನು ಮಾಡ್ಬೇಕಂತಿಯೋ? ಗುಟುಕರಿಸುತ್ತಲೇ ಭೀಮಣ್ಣ ಕೇಳಿದ ಬದ್ಕಾಕೆ ಏನಾದ್ರೂ ಒಂದು ಹೊಸ ದಾರಿ ಹುಡುಕ್ಲೇಬೇಕ್ರೋ, ಸರಕಾರ ಅಧಿಕಾರಿಗಳು ನಮ್ಗೆ ಎಟುಕದ ಮಾತು.
ಆ ಕೃಷ್ಣೇಗೌಡ ಅಧ್ಯಕ್ಷ ಮೆಂಬರ್ ಗಳತ್ರ ಮಾತಾಡಿ, ಗಂಗಾಕಾವೇರಿ ಸ್ಕೀಂನಾಗೆ ಬೋರ್ ಹಾಕ್ಸಿಕೊಡ್ತೀನೀ ಅಂತ ಆ ದಿನಗಳಿಂದ್ಲೂ ಹೇಳ್ತಾನೇ ಬರ್ತವ್ನೆ ಅದು ಕೂಡ ದಕ್ಕಕ್ಕಿಲ್ಲಾಂತಾ ಈಗೀಗ ಅನಸ್ತಿದೆ.
ಈಗ ನಾನಂತೂ ಒಂದು ತೀರ್ಮಾನಕ್ಕೆ ಬಂದ್ ಬಿಟ್ಟಿದಿನಿ ನೀವಿಬ್ರೂ ನನ್ಗೆ ಸಹಾಯ ಮಾಡೋದಾದ್ರೇ.....ಇಬ್ಬರೂ ಕ್ಷಣ ಕಾಲ ಅರ್ಥವಾಗದವರಂತೆ ಒಬ್ರ ಮುಖವನ್ನೊಬ್ರು ದಿಟ್ಟಿಸಿಕೊಂಡ್ರು!....ಅಂದ್ರೇ..?
ಕುರುಮರಡಿ ಕೆರೆಯ ಓಬಳದೇವ್ರ ಗುಡ್ಡದ ಕಡೆಯಿಂದ,ಸಂಗೇನಹಳ್ಳಿ ಕೆರೆ ಕಡೆಗೆ ಹರಿಯೋ ಜಿನಗಿ ಹಳ್ಳ,ಮೂವತ್ತಳ್ಳಿಗೆ ನೀರುಣಿಸಿ, ಮುಂದಕ್ಕ ಯಾವ ಡ್ಯಾಮ್ ಪಾಲಾಗುತ್ತೋ ಯಾರಿಗ್ಗೊತ್ತು, ಮಳೆಗಾಲಕ್ಕೆ ಅದೂ ನಮ್ಮ ಹಟ್ಟಿ ಮಗ್ಲಿಗೂ ಹರಿಯೋ ಹಳ್ಳ ತಾನೇ, ಮನಸ್ಸು ಮಾಡಿದ್ರೆ ನಾವದನ್ನ ಬಳಸ್ಕಬೋದಲ್ಲ...
ನಿಂಗೆ ತಲೆ ಏನಾದ್ರೂ ಕೆಟ್ಟಿದ್ಯೇನೋ! ಒಂದು ಸಾರಿ ಆ ಹಳ್ಳ ಬಂದ್ರೇ,ಇಡೀ ದಿನ ಆ ಕಡೆ ಯಾರೂ ಸುಳಿಯಂಗಿರಲ್ಲ. ಅಂತಾದ್ರಲ್ಲಿ ಬಳಸ್ಕೊಳ್ಳೋದು ಎಲ್ಲಿಂದ ಬಂತು? ವಸಿ ನನ್ನ ಮಾತು ಕೇಳ್ರೋ.. ಮುದ್ದಾಪುರದ ಗುಡ್ಡದಿಂದ ಯಳಗೋಡು ಮುಂದಿರೋ ಆ ಸಣ್ಣ ಗುಡ್ಡದ ಮದ್ಯೆ ತಾನೆ ಆ ಜಿನಗಿಹಳ್ಳ ಹರಿಯೋದು, ಎರಡೂ ಗುಡ್ಡಗಳ್ನ ಬಳಸ್ಕಂಡು ಹಳ್ಳಕ್ಕೆ ಎತ್ತರವಾಗಿ ಒಂದು ಬಲವಾದ ಅಡ್ಡಕಟ್ಟೆ ಕಟ್ಟಿಬಿಟ್ರೇ, ನೀರು ನಮ್ಮ ಹಟ್ಟಿಗೂ ಸೇರಿ ಸುತ್ತಮುತ್ತಲ ಹಳ್ಳಿಗೂ ಉಳಿತದೆ.
ತುಂಬಿ ಕೋಡಿ ಬಿದ್ದ ನೀರು ಮುಂದಕ್ಕೋಗ್ಲೀ ಬಿಡು, ಕಾಡಪ್ರಾಣಿ, ಪಕ್ಷಿ ಕುರಿ ಮ್ಯಾಕೆ ದನ ಕರುಗಳಿಗೆ ನೀರಾತು, ನೆಲ ತನುವಾಗಿ ಬಾವಿಗಳು ಜಲ ತುಂಬ್ಕೊಳ್ತವೆ.
ಕಟ್ಟೆಗೆ ನಿಲ್ಲೋ ನೀರಿಗೆ ನಮ್ಮ ಅಕ್ಕಪಕ್ದ ಹೊಲಗಳಲ್ಲಿ ಒಂದಿಷ್ಟು ಉಣ್ಣೋ ಬೆಳೆನಾದ್ರೂ ತೆಗಿಬೋದು. ಅಲಾಲಾಲ.....ಯೋಜನೇ.. ಬಾರಿ ಐತೋ ಬಡಕಯ್ಯ! ಕೇಳಾಕೇನೋ ಚಂದೈತೆ ಉಂಬಾಕೆ ಗತಿ ಇಲ್ದಿದ್ರೂ ಜುಟ್ಟಿಗೆ ಮಲ್ಲಿಗೆ ಹೂ ಕೇಳ್ದಂಗೆ, ಇವತ್ತಿನ ಕೂಲಿ ಎಲ್ಲಿಗ್ಹೊಗ್ಬೇಕು ಸಂಜೆ ಮಕ್ಕಳಿಗೆ ಗಂಜಿ ಹೆಂಗೇ ಇದಕ್ಕೇನಾರ ಹೇಳ್ತಾನೇನೋ ಅಂದ್ರೇ ಸುರಿಯೋ ಮಳೆಗೆ ಕಟ್ಟೆ ಕಟ್ಟಾಕೆ ಹೊಂಟಾನಲ್ಲಪ್ಪೋ!...
ನಮ್ಮ ಬಡಕಯ್ಯ.......ತಾತ್ಸಾರದ ನಗುವಿಗೆ ಕಂಚಪ್ಪ ಭೀಮಣ್ಣ ದನಿಗೂಡಿಸುತ್ತಲೇ, ನಾವಿನ್ನೂ ಬರ್ತೀವಿ ಕಣೋ, ಆದ್ರೇ ಒಂದ್ ವಿಷ್ಯ..... ನಮ್ತಾವ ಹೇಳ್ದಂಗೆ ಹಟ್ಟಿಯಾಗೆ ಯಾರತಾಗಾದ್ರು ಮಾತಾಡಿಯ? ತಲೆ ಕೆಟ್ಟೈತ್ರಲೇ ಇವನಿಗೇ ಹುಚ್ಚಾಸ್ಪತ್ರೆಗೆ ಸೇರಿಸ್ಬೇಕು ಅಂತ ಮಾತಾಡಿಬಿಡ್ತಾರೆ.
ನಡ್ಯೋ ಕಂಚಪ್ಪ ಈ ದಿನದ ಕೂಲಿ ಯಾರದಕ್ಕೇ ಅಂತ ಕೇಳ್ಬೇಕು ಬಾ ಹೋಗಾನ. ಬಡಪ್ಪನ್ನ ನೋಡಿ ಮನ್ಸಲ್ಲೇ ನಗ್ತಾ ಬರ್ತೀವೋ, ಅಂದ ಭೀಮಣ್ಣ ಮಾತುಗಳು ಮುಗಿಯುತ್ತಿದ್ದಂತೆಯೇ ಇಬ್ಬರ ಹೆಜ್ಜೆಗಳು ಹಟ್ಟಿಯ ದಾರಿಗೆ ಸರಿದಿದ್ವು.
ಹೊತ್ತು ಮಾರೆತ್ತರಕ್ಕೇರಿ ಬಿಸಿಲು ಕೂಡ ಬಲಿಯ ತೊಡಗಿತ್ತು. ಹೋಟ್ಲಾಗಿನ ರೇಡಿಯೋ ದುರ್ಗದ ಆಕಾಶವಾಣಿಯ ವಾರ್ತೆಗಳನ್ನ ಬಿತ್ತರಿಸಿಕೊಂಡಿತ್ತು. ಸಣ್ಣಿಂಗ ತಿರಗಿ ಬಂದು ಮತ್ತೇನಾದ್ರು ಬೇಕೇನೋ ಅಂತ ಕೇಳ್ತಾನೇ ಇದ್ದ. ಬಡಪ್ಪನಿಗೆ ಇದ್ಯಾವ್ದೂ ಗಮನಕ್ಕಿಲ್ಲದಂತೆ ಮೈಯಿ ಭಾರವಾದಂತಾಗಿ ಇನ್ನೂ ಅಲ್ಲಿಯೇ ಕುಳಿತಿದ್ದ ಆದ್ರೇ ಮನಸ್ಸು ಮಾತ್ರ ಗಟ್ಟಿಯಾಗಿ ತನ್ನ ಕನಸಿನ ಅಡ್ಡಕಟ್ಟೆಯನ್ನ ಕಟ್ಟತೊಡಗಿತ್ತು ಮುದ್ದಾಪುರದ ಗುಡ್ಡಕ್ಕೂ ಯಳಗೋಡು ಎದುರಿನ ಆ ಸಣ್ಣಗುಡ್ಡದ ಮದ್ಯದ ಜಿನಿಗಿ ಹಳ್ಳಕ್ಕೂ....
ಲೇಖನ: ಕುಮಾರ ಬಡಪ್ಪ, ಚಿತ್ರದುರ್ಗ. ನಾಳೆಗೆ.........


