ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಧಾನಿಯ ವಾಹನ ಸವಾರರಿಗೆ ಬಿಬಿಎಂಪಿ ಹಾಗೂ ಬಿಡಿಎ ಕಡೆಯಿಂದ ಬಹುದೊಡ್ಡ ಕೊಡುಗೆ ಸಿಕ್ಕಿದೆ. ಬೆಂಗಳೂರಿನ ಸಂಚಾರ ದಟ್ಟಣೆಗೆ ಕೊಂಚ ಬ್ರೇಕ್ ಹಾಕುವ ನಿಟ್ಟಿನಲ್ಲಿ, ಚಲ್ಲಘಟ್ಟದ ನಾಡಪ್ರಭು ಕೆಂಪೇಗೌಡ ಬಡಾವಣೆ ಬಳಿ ನಿರ್ಮಿಸಲಾಗಿರುವ ಮಾಜಿ ಮುಖ್ಯಮಂತ್ರಿ, ದಿವಂಗತ ಎಸ್.ಎಂ. ಕೃಷ್ಣ ಅವರ ಹೆಸರಿನ ನೂತನ ದಶಪಥ (10 ಲೇನ್) ರಸ್ತೆಯನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಾಗಿದೆ.
ನಾಡಪ್ರಭು ಕೆಂಪೇಗೌಡರ ಜಯಂತಿಯ ಶುಭ ದಿನದಂದೇ ಈ ಭವ್ಯ ರಸ್ತೆಯನ್ನು ಉದ್ಘಾಟಿಸಿರುವುದು ವಿಶೇಷ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಿಬ್ಬನ್ ಕತ್ತರಿಸುವ ಮೂಲಕ ಈ ಹೆದ್ದಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪ್ರೇಮಾ ಕೃಷ್ಣ, ಡಿಸಿಎಂ ಪರಮೇಶ್ವರ್, ಸಚಿವರಾದ ಕೆ.ಹೆಚ್ ಮುನಿಯಪ್ಪ, ಕೃಷ್ಣಬೈರೇಗೌಡ ಹಾಗೂ ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಉಪಸ್ಥಿತರಿದ್ದರು.
ರಸ್ತೆಯ ಬೃಹತ್ ವೈಶಿಷ್ಟ್ಯಗಳು ಮತ್ತು ಹೈಲೈಟ್ಸ್:
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸುಮಾರು 631 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಅತ್ಯಾಧುನಿಕ ಕಾರಿಡಾರ್ ಅನ್ನು ನಿರ್ಮಿಸಿದೆ.
ಉದ್ದ ಮತ್ತು ಅಗಲ: ಕಡಬಗೆರೆಯಿಂದ ಚಲ್ಲಘಟ್ಟ ಮೆಟ್ರೋ ನಿಲ್ದಾಣದ ನಡುವಿನ ಈ ನೂತನ ಹೆದ್ದಾರಿಯು ಒಟ್ಟು 10.7 ಕಿ.ಮೀ. ಉದ್ದ ಹಾಗೂ 100 ಮೀಟರ್ ಅಗಲವಿದೆ.
ಸಂಪೂರ್ಣ ಉಚಿತ ಪ್ರಯಾಣ: ಅತ್ಯಂತ ಪ್ರಮುಖ ವಿಷಯವೆಂದರೆ, ಈ ಭವ್ಯ ರಸ್ತೆಯು ಸಿಗ್ನಲ್ ಫ್ರೀ ಮಾತ್ರವಲ್ಲದೆ ಸಂಪೂರ್ಣವಾಗಿ ಟೋಲ್ ಮುಕ್ತ ಆಗಿದೆ.
ಮೆಟ್ರೋ ಭವಿಷ್ಯ: ಭವಿಷ್ಯದ ಮೆಟ್ರೋ ಯೋಜನೆ ವಿಸ್ತರಣೆಗಾಗಿ ರಸ್ತೆಯ ಮಧ್ಯದಲ್ಲಿ 3 ಮೀಟರ್ ಅಗಲದ ವಿಭಜಕವನ್ನು ಕಾಯ್ದಿರಿಸಲಾಗಿದೆ.
ಹಸಿರು ವನಸಿರಿ: ಪರಿಸರ ಪ್ರೇಮ ಮೆರೆಯಲು ರಸ್ತೆಯ ಎರಡು ಬದಿಗಳಲ್ಲಿ ಭರ್ಜರಿ 27 ಮೀಟರ್ ಹಸಿರು ವನಸಿರಿ ನಿರ್ಮಿಸಲಾಗಿದೆ.
ವಿಶೇಷ ಮೂಲಸೌಕರ್ಯ: ಈ ಮಾರ್ಗದಲ್ಲಿ 3 ಅಂಡರ್ ಪಾಸ್, 11 ಸೇತುವೆಗಳು ಮತ್ತು 270 ಮೀಟರ್ ಉದ್ದದ ಸುರಂಗ ಮಾರ್ಗವಿದೆ. ಜೊತೆಗೆ ಸೈಕ್ಲಿಂಗ್ ಪ್ರಿಯರಿಗಾಗಿ ಪ್ರತ್ಯೇಕ ಟ್ರ್ಯಾಕ್ ಹಾಗೂ ಸುಸಜ್ಜಿತ ಸರ್ವೀಸ್ ರಸ್ತೆಗಳಿವೆ.
ಪ್ರಯಾಣದ ಅವಧಿ 60 ರಿಂದ 20 ನಿಮಿಷಕ್ಕೆ ಇಳಿಕೆ!:
ಈ ಹೊಸ ರಸ್ತೆಯು ನೈಸ್ ರಸ್ತೆಗಿಂತಲೂ ವೇಗವಾಗಿ ಸಂಚರಿಸಬಹುದಾದ ಅತ್ಯುತ್ತಮ ಪರ್ಯಾಯ ಮಾರ್ಗವಾಗಿದೆ. ಇದರಿಂದಾಗಿ ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆ ನಡುವಿನ ಪ್ರಯಾಣದ ಸಮಯ 60 ನಿಮಿಷಗಳಿಂದ ಕೇವಲ 20 ನಿಮಿಷಕ್ಕೆ ಇಳಿಕೆಯಾಗಲಿದೆ.
ಯಾರಿಗೆಲ್ಲಾ ಲಾಭ?: ಕೆಂಪೇಗೌಡ ಲೇಔಟ್ನ ಎಲ್ಲಾ 9 ಬ್ಲಾಕ್ಗಳನ್ನು ಈ ರಸ್ತೆ ಪರಸ್ಪರ ಜೋಡಿಸುತ್ತದೆ.
ಕಂಬೀಪುರ, ಕೊಮ್ಮಘಟ್ಟ, ಕೆಂಚನಪುರ ಮತ್ತು ಸುತ್ತಮುತ್ತಲಿನ 11 ನೆರೆಹೊರೆಯ ಹಳ್ಳಿಗಳಿಗೆ ನೇರ ಸಂಪರ್ಕ ಸಿಗಲಿದ್ದು, ಈ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಲಿದೆ.
ಮೈಸೂರು, ಮಂಡ್ಯ, ರಾಮನಗರ, ಹಾಸನ, ಕುಣಿಗಲ್ ಮತ್ತು ಮಾಗಡಿಯಿಂದ ರಾಜಧಾನಿಗೆ ಬರುವ ಪ್ರಯಾಣಿಕರಿಗೆ ಇನ್ಮುಂದೆ ಬೆಂಗಳೂರು ಸಿಟಿ ಟ್ರಾಫಿಕ್ ಕಿರಿಕಿರಿ ಇರುವುದಿಲ್ಲ.
"ಬೆಂಗಳೂರಿನ ಐಟಿ ಪಿತಾಮಹನಿಗೆ ಗೌರವ": ಸಿಎಂ ಡಿ.ಕೆ. ಶಿವಕುಮಾರ್ ಶ್ಲಾಘನೆ
ರಸ್ತೆ ಉದ್ಘಾಟನೆ ಬಳಿಕ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಸಿಎಂ ಡಿ.ಕೆ ಶಿವಕುಮಾರ್ ಅವರು ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಸಾಧನೆಯನ್ನು ಸ್ಮರಿಸಿದ್ದಾರೆ.
"ಎಸ್.ಎಂ.ಕೃಷ್ಣ ಅವರು ಬೆಂಗಳೂರನ್ನು ಜಾಗತಿಕ ಮಾಹಿತಿ ತಂತ್ರಜ್ಞಾನ ನಕ್ಷೆಯಲ್ಲಿ ಗುರುತಿಸುವಂತೆ ಮಾಡಿದ ದೂರದೃಷ್ಟಿಯ ನಾಯಕರು. ತಮ್ಮ ಆಡಳಿತಾವಧಿಯಲ್ಲಿ ನಗರದ ಆಧುನಿಕ ಮೂಲಸೌಕರ್ಯ ಮತ್ತು ತಂತ್ರಜ್ಞಾನದ ಬೆಳವಣಿಗೆಗೆ ಅವರು ಭದ್ರ ಬುನಾದಿ ಹಾಕಿದ್ದರು. ಬೆಂಗಳೂರಿನ ಅಭಿವೃದ್ಧಿಗೆ ಶ್ರಮಿಸಿದ ಅವರ ಹೆಸರನ್ನು ಈ ನೂತನ ದಶಪಥ ರಸ್ತೆಗೆ ಇಟ್ಟಿರುವುದು ನಮ್ಮ ಹೆಮ್ಮೆ. ಅವರ ಸಾಧನೆ ನಮಗೆ ಸದಾ ಪ್ರೇರಣೆ."
ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ.



