ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ದೇವನಹಳ್ಳಿ ಮಾಜಿ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ ಅವರು, ಗೋಮಾಳದ ಭೂಮಿ ಒತ್ತುವರಿ ಮಾಡಲು ಪ್ರಯತ್ನಿಸಿ ರೈತನಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಮಾಜಿ ಗ್ರಾಮ ಪಂಚಾಯತಿ ಸದಸ್ಯ ಮಂಜುನಾಥ ಅವರು ತಿಳಿಸಿದರು.
ಮಾಜಿ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ ರವರು ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯ ಮೇಲಿನ ಜೂಗಾನಹಳ್ಳಿ ಗ್ರಾಮದ ಸ.ನಂ 34/4 ರಲ್ಲಿ 8 ಎಕರೆ 12 ಗುಂಟೆ ಭೂಮಿಯನ್ನು ಖರೀದಿ ಮಾಡಿದ್ದಾರೆ. ಆದರೆ, ಜಮೀನಿನ ಪಕ್ಕದ ಗೋಮಾಳ ಸ.ನಂ 38 ರಲ್ಲಿ ನಾಗೇಶ್ ಎಂಬುವವರಿಗೆ 1 ಎಕರೆ 20 ಗುಂಟೆ ಭೂಮಿ ಮಂಜೂರಾಗಿದೆ. ಹದ್ದುಬಸ್ತು ಮಾಡಿಸಿದಾಗ ಮಾಜಿ ಶಾಸಕರ 0.18 ಗುಂಟೆ ಹಿಡುವಳಿ ಜಮೀನನ್ನು ಗೋಮಾಳದ ಸ.ನಂ.38 ರಲ್ಲಿ ಇರುವವರು ಒತ್ತುವರಿ ಮಾಡಿರುವುದು ಕಂಡು ಬಂದಿದೆ. ಒತ್ತುವರಿ ಮಾಡಿರುವ ಭೂಮಿಯನ್ನು ಬಿಟ್ಟುಕೊಡುವಂತೆ ಮಾಜಿ ಶಾಸಕರು ನಾಗೇಶ್ ಅವರಲ್ಲಿ ಮನವಿ ಮಾಡಿದ್ದರು. ಅದನ್ನು ನಿರಾಕರಿಸಿದ ನಾಗೇಶ್ , ಹಾದಿ ಬೀದಿಯಲ್ಲಿ ನಿಸರ್ಗ ನಾರಾಯಣಸ್ವಾಮಿ ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮಾಜಿ ಶಾಸಕರಿಗೆ ಜಮೀನುಮಾರಾಟ ಮಾಡಿದ ಸಂಪಂಗಿರಾಮಯ್ಯ ಅವರುಮಾತನಾಡಿ, ನಾರಾಯಣಸ್ವಾಮಿ ಅವರು ಖರೀದಿ ಮಾಡಿರುವುದು ಹಿಡುವಳಿ ಭೂಮಿ, 1935 ರಲ್ಲಿ ಪೋಡಿಯಾಗಿದ್ದು 1995 ರವರೆಗೆ ಪರಭಾರೆ ಆಗಿರಲಿಲ್ಲ, 1995 ರಲ್ಲಿ ನಾವು ಖರೀದಿ ಮಾಡಿದ್ದೇವುಕಳೆದ ಎಂಟು ತಿಂಗಳ ಹಿಂದೆ ಮಾಜಿ ಶಾಸಕರಿಗೆ ಮಾರಾಟ ಮಾಡಿದ್ದೇವೆ. ನಾಗೇಶ್ ಅವರಿಗೆ ಗೋಮಾಳದಲ್ಲಿ ಮಂಜೂರಾಗಿದೆ. ಇನ್ನೂ ಪೋಡಿ ಹದ್ದುಬಸ್ತ್ ಆಗಿಲ್ಲ. ಗೋಮಾಳ ಒತ್ತುವರಿಯಾಗಿದೆ. ನನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಎಂದು ಸುಳ್ಳು ಸುದ್ದಿ ಹಬ್ಬಿಸುವುದು ಸರಿಯಲ್ಲ, ಮೊದಲು ಪೋಡಿ ಮಾಡಿಸಿಕೊಳ್ಳಲಿ ಎಂದು ಸಲಹೆ ನೀಡಿದರು.



