ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಭಗವಾನ್ ವಿಶ್ವಕರ್ಮ ಜಯಂತಿ ಕಾರ್ಯುಕ್ರಮ ಆಚರಿಸಲಾಯಿತು.
ಭಗವಾನ್ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಶಾಸಕ ಧೀರಜ್ ಮುನಿರಾಜು ಮಾತನಾಡಿ, ಶಿಲ್ಪಕಲೆ, ಲೋಹದ ಕಲೆ ಮೊದಲಾಗಿ ಪಂಚ ಕಸುಬುಗಳ ವಿಶಿಷ್ಟಕಲೆಗಳ ಮೂಲಕ ದೇಶದ ಶ್ರೀಮಂತ ಪರಂಪರೆಗೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ. ಕಲಾತ್ಮಕವಾಗಿ, ಸಾಂಸ್ಕೃತಿಕವಾಗಿ ತಮ್ಮ ಕಲೆಗೆ ಮೆರುಗು ನೀಡುತ್ತಿರುವ ವಿಶ್ವಕರ್ಮರು ಶ್ರಮಜೀವಿಗಳೂ ಆಗಿದ್ದಾರೆ.
ಜಗತ್ತಿನ ಎಲ್ಲಾ ವಸ್ತುಗಳಿಗೂ ಸೃಷ್ಟಿಎನ್ನುವುದು ಇರಬೇಕು. ಅಂತೆಯೇ ಬ್ರಹ್ಮಾಂಡದ ಸೃಷ್ಟಿಕರ್ತ ವಿಶ್ವಕರ್ಮರಾಗಿದ್ದು, ಅವರ ಕಾಯಕ ನಿಷ್ಠೆ ನಮಗೆಲ್ಲಾ ಮಾದರಿಯಾಗಬೇಕಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವೂ ಆಗಿದೆ. ಮೋದಿ ಅವರು ಜಾರಿಗೆ ತಂದ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯು, ಕುಶಲ ಕರ್ಮಿ ಗಳಿಗೆ ವರದಾನವಾಗಿದೆ ಎಂದರು.
ನಿವೃತ್ತ ಶಿಕ್ಷಕ ಈಶ್ವರಾಚಾರ್ ಮಾತನಾಡಿ, ಬ್ರಹ್ಮನ ಮುಖದಿಂದ ಐದು ಜನ ಋಷಿಗಳಾದ ಮನು, ಮಯ, ತ್ವಷ್ಟ್ರ, ಶಿಲ್ಪಿ ಮತ್ತು ವಿಶ್ವಜ್ಞ ಜನಿಸಿದರೆಂದು ಪುರಾಣಗಳು ಹೇಳುತ್ತಿವೆ. ಇವರಿಂದ ಪಂಚ ಕಲೆಗಳು ಅಥವಾ ಕಸುಬುಗಳು ಹುಟ್ಟಿಕೊಂಡಿವೆ. ಕಬ್ಬಿಣದ ಕೆಲಸದ ಕಮ್ಮಾರ, ಮರದ ಕೆಲಸ ಮಾಡುವ ಬಡಗಿ, ಕಂಚು, ತಾಮ್ರ ಮತ್ತು ಹಿತ್ತಾಳೆ ಲೋಹಗಳ ಕೆಲಸ ಮಾಡುವ ಕಂಸಾಳಿಕೆ, ಕಲ್ಲಿನ ಕೆಲಸ ಮಾಡುವ ಶಿಲ್ಪಕಲೆ, ಚಿನ್ನ ಮತ್ತು ಬೆಳ್ಳಿಯ ಕೆಲಸ ಮಾಡುವ ಅಕ್ಕಸಾಲಿಗತನ ಕಸುಬುಗಳನ್ನು ಮಾಡುವ ಮೂಲಕ ವಿಶ್ವಕರ್ಮರು ಸಮಾಜದಲ್ಲಿ ತಮ್ಮದೇ ಆದ ಅಸ್ತಿತ್ವ ಹೊಂದಿದ್ದಾರೆ. ಇಂತಹ ಸಮುದಾಯಕ್ಕೆ ಸಮಾಜದಲ್ಲಿ ಮನ್ನಣೆ ದೊರೆಯಬೇಕು. ವಿಶ್ವಕರ್ಮ ಜನಾಂಗದ ಏಳಿಗೆಗೆ ಸರ್ಕಾರಗಳು ಅಗತ್ಯ ನೆರವು ಹಾಗು ಸಹಕಾರ ನೀಡಬೇಕಿದೆ ಎಂದರು.
ಇದೇ ವೇಳೆ ವಿಶ್ವಕರ್ಮ ಜನಾಂಗದ ವಿವಿಧ ಕ್ಷೇತ್ರದ ಗಣ್ಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜದ ಅಧ್ಯಕ್ಷ ಷಣ್ಮುಖಾಚಾರ್, ಕರ್ನಾಟಕ ವಿಶ್ವಕರ್ಮ ಮಹಾಸಭಾದ ತಾಲೂಕು ಅಧ್ಯಕ್ಷ ಕೇಶವಾಚಾರ್,ನಗರ ಅಧ್ಯಕ್ಷೆ ರಾಜಲಕ್ಷ್ಮೀ ರಾಜಗೋಪಾಲ್ ಸಮುದಾಯದ ಮುಖಂಡರಾದ ಮುಖಂಡರಾದ ನಾಗರತ್ನಮ್ಮ, ಗಜಲಕ್ಷ್ಮಿ,ಹೇಮ ಭಾಸ್ಕರಾಚಾರ್, ಚಂದ್ರಶೇಖರಾಚಾರ್, ಕನ್ನಡ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ನಾಗರಾಜ್ ಸೇರಿದಂತೆ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಘಟಕ ಮತ್ತು ಶ್ರೀ ವಿಶ್ವಕರ್ಮ ಸಮಾಜ ಯುವಕರ ಸಂಘ ಹಾಗೂ ವಿಶ್ವಕರ್ಮ ಸಮುದಾಯದ ಮುಖಂಡರು ಹಾಜರಿದ್ದರು.




