ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ ರಾಜಧಾನಿಯ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಪೆರೇಡ್ ಮೈದಾನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಷ್ಟ್ರೀಯ ತ್ರಿವರ್ಣ ಧ್ವಜ ಹಾರಿಸಿ, ನಾಡಿನ 7.5 ಕೋಟಿ ಕನ್ನಡಿಗರಿಗೆ ಶುಭಾಶಯ ಕೋರಿದರು.
ಬರ ಪರಿಸ್ಥಿತಿ ನಿವಾರಣೆ, ಉದ್ಯೋಗ ಸೃಷ್ಟಿ, ಪರಿಸರ ರಕ್ಷಣೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಹಲವು ಪ್ರಮುಖ ಯೋಜನೆಗಳನ್ನು ಅವರು ಈ ವೇಳೆ ಘೋಷಿಸಿದರು.
72,000 ಸರ್ಕಾರಿ ಹುದ್ದೆಗಳ ಭರ್ತಿ: ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 72,000 ಪ್ರಮುಖ ಹುದ್ದೆಗಳ ಭರ್ತಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಮುಂದಿನ 6 ತಿಂಗಳಲ್ಲಿ ಸಂಪೂರ್ಣ ಅಧಿಸೂಚನೆ ಹೊರಡಿಸಲಾಗುವುದು.
‘ಉದ್ಯೋಗ ನಿಧಿ’ ಹಾಗೂ ‘ಯುವ ಉದ್ಯೋಗ ಸೇತು’: ಖಾಸಗಿ ವಲಯದ ಉದ್ಯೋಗಗಳನ್ನು ತಲುಪಿಸಲು 'ಯುವ ಉದ್ಯೋಗ ಸೇತು' ತಂತ್ರಾಂಶ ಜಾರಿಗೆ ತರಲಾಗುವುದು. ಅಲ್ಲದೆ, ಹಿಂದುಳಿದ 10 ಜಿಲ್ಲೆಗಳಲ್ಲಿ ಹೊಸ ಉದ್ಯೋಗ ಸೃಷ್ಟಿಸುವ ಉದ್ಯಮಿಗಳಿಗೆ ‘ಉದ್ಯೋಗ ನಿಧಿ’ ಅಡಿಯಲ್ಲಿ ಪ್ರತಿ ಉದ್ಯೋಗಕ್ಕೆ ತಿಂಗಳಿಗೆ ₹2,500 ಪ್ರೋತ್ಸಾಹ ಧನ ನೀಡಲಾಗುವುದು.
ಶಾಲಾ ಮಟ್ಟದಲ್ಲೇ AI ಶಿಕ್ಷಣ: 6ನೇ ತರಗತಿಯಿಂದಲೇ ‘AI ಅಕ್ಷರ ಅಭಿಯಾನ’ ಮತ್ತು ‘ಕೋಡಿಂಗ್ ಗುರುಕುಲ’ ಮೂಲಕ ಕೃತಕ ಬುದ್ಧಿಮತ್ತೆ ಶಿಕ್ಷಣ ನೀಡಲಾಗುವುದು. ಜೊತೆಗೆ, ಬೆಂಗಳೂರಿನಲ್ಲಿ ಭಾರತದ ಮೊದಲ ಸಾರ್ವಜನಿಕ AI ವಿಶ್ವವಿದ್ಯಾಲಯ ಸ್ಥಾಪನೆಯಾಗಲಿದ್ದು, 2027ರ ಜನವರಿಯಿಂದ ಕೋರ್ಸ್ಗಳು ಆರಂಭವಾಗಲಿವೆ.
‘ವಿದ್ಯಾರ್ಥಿ ಸಹಾಯಹಸ್ತ’ ಮೀಸಲಾತಿ: ಗ್ರಾಮೀಣ ಸರ್ಕಾರಿ ಶಾಲೆಯಲ್ಲಿ (1ರಿಂದ 10ನೇ ತರಗತಿವರೆಗೆ) ಓದಿದ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್ಗಳ ಪ್ರವೇಶದಲ್ಲಿ ಹಾಲಿ ಇರುವ ಶೇ.15ರ ಗ್ರಾಮೀಣ ಮೀಸಲಾತಿಯೊಳಗೆ ಶೇ.7.5ರಷ್ಟು ಒಳಮೀಸಲಾತಿ ಕಲ್ಪಿಸಲಾಗುವುದು.
ಬೆಂಗಳೂರಿಗೆ 5 ಟ್ರೀ ಪಾರ್ಕ್ & 7 ಕೆರೆಗಳ ಅಭಿವೃದ್ಧಿ: ಮಾಲಿನ್ಯ ತಡೆಯಲು ತುರುಹಳ್ಳಿ, ತೊಟ್ಟಿಕಲ್ಲು ಫಾಲ್ಸ್ ಸೇರಿದಂತೆ 5 ಕಡೆ ಲಾಲ್ಬಾಗ್ ಮಾದರಿ ಟ್ರೀ ಪಾರ್ಕ್ ಹಾಗೂ ಹೆಸರಘಟ್ಟ, ಬನ್ನೇರುಘಟ್ಟ, ಹೊಸಕೋಟೆ ಸೇರಿದಂತೆ 7 ಪ್ರಮುಖ ಕೆರೆಗಳನ್ನು ಅಭಿವೃದ್ಧಿಪಡಿಸಲಾಗುವುದು.
5 ಪ್ರತ್ಯೇಕ ಪೊಲೀಸ್ ಕಮಿಷನರೇಟ್: ಬೆಂಗಳೂರು ನಗರದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ನಿರ್ವಹಣೆಯನ್ನು ಬಿಗಿಗೊಳಿಸಲು ಪೊಲೀಸ್ ಕಮಿಷನರೇಟ್ ಅನ್ನು 5 ವಿಭಾಗಗಳಾಗಿ ಪುನಾರಚಿಸಲಾಗುವುದು.
‘ಮುಖ್ಯಮಂತ್ರಿ ರೈತ ಚೈತನ್ಯ ಯೋಜನೆ’: ಕೃಷಿಯಲ್ಲಿ ಡ್ರೋನ್ ಹಾಗೂ ಉಪಗ್ರಹ ತಂತ್ರಜ್ಞಾನ ಬಳಸಿ ಬೆಳೆ, ಕೀಟ ಬಾಧೆ ಹಾಗೂ ಮಾರುಕಟ್ಟೆ ಕುರಿತು ರೈತರಿಗೆ ನೈಜ ಸಮಯದ ನಿಖರ ಮಾಹಿತಿ ನೀಡಲಾಗುವುದು.
ಜನಸ್ಪಂದನ ಸಭೆಗಳು: ಪ್ರತಿ ತಿಂಗಳ 1ನೇ ಮತ್ತು 3ನೇ ಶನಿವಾರದಂದು ಜಿಲ್ಲಾ ಉಸ್ತುವಾರಿ ಸಚಿವರು ಕ್ಷೇತ್ರ ಮಟ್ಟದಲ್ಲಿ ಜನಸ್ಪಂದನ ಸಭೆ ನಡೆಸಿ ಸಾರ್ವಜನಿಕರ ಕುಂದುಕೊರತೆ ಆಲಿಸಲಿದ್ದಾರೆ.



