ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಕೋಟಿ ಕೋಟಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಆದರೆ, ಈ ಮಹಾ ಸಂಭ್ರಮದ ನಡುವೆಯೇ ಕಳೆದ ವರ್ಷದ ವಿಜಯೋತ್ಸವದ ವೇಳೆ ನಡೆದ ಕರಾಳ ದುರಂತವನ್ನು ನೆನೆದು, ಮೃತಪಟ್ಟ ಅಭಿಮಾನಿಗಳ ಕುಟುಂಬಗಳಿಗೆ ನ್ಯಾಯ ಒದಗಿಸಬೇಕೆಂದು ಅವರು ಕಳಕಳಿಯ ಮನವಿ ಮಾಡಿದ್ದಾರೆ.
ಆರ್ಸಿಬಿ ಐತಿಹಾಸಿಕ ಗೆಲುವಿನ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಸಂದೇಶ ಹಂಚಿಕೊಂಡಿರುವ ಅವರು, ಬೆಂಗಳೂರಿನಾದ್ಯಂತ ಮನೆಮಾಡಿರುವ ಕೆಂಪು ಸಾಗರದ ಸಂಭ್ರಮ ಶ್ಲಾಘಿಸುತ್ತಲೇ, ವ್ಯವಸ್ಥೆಯ ಬೇಜವಾಬ್ದಾರಿಯ ವಿರುದ್ಧ ಧ್ವನಿ ಎತ್ತಿದ್ದಾರೆ.
ಆರ್ಸಿಬಿ ಮ್ಯಾನೇಜ್ಮೆಂಟ್ಹಾಗೂ ಸರ್ಕಾರಕ್ಕೆ ಕಳಕಳಿಯ ವಿನಂತಿ:
ಕಳೆದ ವರ್ಷ ಆರ್ಸಿಬಿ ತಂಡದ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ದುರದೃಷ್ಟವಶಾತ್ 11 ಜನ ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದರು. ಈ ಕರಾಳ ಘಟನೆಯನ್ನು ಪ್ರಸ್ತಾಪಿಸಿರುವ ನಿಖಿಲ್, ಆರ್ಸಿಬಿ ಮ್ಯಾನೇಜ್ಮೆಂಟ್, ಕೆಎಸ್ಸಿಎ ಮತ್ತು ರಾಜ್ಯ ಸರ್ಕಾರಕ್ಕೆ ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ.
ಗೆಲುವಿನ ಸಮರ್ಪಣೆ: ಈ ಬಾರಿಯ ಐತಿಹಾಸಿಕ ಗೆಲುವು ಮತ್ತು ಕಪ್ಪನ್ನು ಆರ್ಸಿಬಿ ತಂಡಕ್ಕಾಗಿ ಪ್ರಾಣ ಕಳೆದುಕೊಂಡ ಆ 11 ಅಭಿಮಾನಿಗಳಿಗೆ ಮುಡಿಪಾಗಿಡಬೇಕು.
ಖಾಲಿ ಕುರ್ಚಿಗಳಷ್ಟೇ ಸಾಲದು: "ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೇವಲ 11 ಖಾಲಿ ಕುರ್ಚಿಗಳನ್ನು ಕಾಯ್ದಿರಿಸುವುದು ಕೇವಲ ಸಾಂಕೇತಿಕ ಆಚರಣೆಯಷ್ಟೇ ಆದೀತು. ಆ ಬಡ ಅಭಿಮಾನಿಗಳ ಪ್ರಾಣಕ್ಕೆ ಅದಕ್ಕಿಂತ ಹೆಚ್ಚಿನ ಬೆಲೆಯಿದೆ," ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಡ ಕುಟುಂಬಗಳಿಗೆ ಸಿಗದ ನ್ಯಾಯ: ದುರಂತ ನಡೆದು ಇಷ್ಟು ದಿನಗಳಾದರೂ ಇಂದಿನವರೆಗೂ ಸಂತ್ರಸ್ತ ಬಡ ಕುಟುಂಬಗಳಿಗೆ ಯಾವುದೇ ನ್ಯಾಯವಾಗಲಿ, ಸೂಕ್ತ ಆಸರೆಯಾಗಲಿ ಸಿಕ್ಕಿಲ್ಲ. ಯಾರೂ ಅವರ ಪರವಾಗಿ ನಿಂತಿಲ್ಲ ಎಂದು ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಅಭಿಮಾನಿಗಳಲ್ಲಿ ನಿಖಿಲ್ ಮನವಿ:
"ನನ್ನ ಪ್ರೀತಿಯ ಆರ್ಸಿಬಿ ಅಭಿಮಾನಿ ಬಂಧುಗಳೇ, ಕೊನೆಯ ಕ್ಷಣದವರೆಗೂ ಆರ್ಸಿಬಿಯನ್ನು ಉಸಿರಾಡಿ, ಇಂದು ನಮ್ಮೊಂದಿಗೆ ಸಂಭ್ರಮಿಸಲು ಇರಬೇಕಾಗಿದ್ದ ಆ 11 ಜನರಿಗೆ ಈ ವಿಜಯವನ್ನು ಸಮರ್ಪಿಸೋಣ. ನಮ್ಮವರ ತ್ಯಾಗವನ್ನು ನಾವು ಎಂದಿಗೂ ಮರೆಯದಿರೋಣ," ಎಂದು ನಿಖಿಲ್ ಕುಮಾರಸ್ವಾಮಿ ಆರ್ಸಿಬಿ ಅಭಿಮಾನಿ ಬಳಗಕ್ಕೆ ಕರೆ ನೀಡಿದ್ದಾರೆ.
ಈ ವರ್ಷದ ವಿಜಯೋತ್ಸವವು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸುಸೂತ್ರವಾಗಿ ಮತ್ತು ಸುರಕ್ಷಿತವಾಗಿ ಮುಕ್ತಾಯಗೊಳ್ಳಲಿ ಎಂದು ಹಾರೈಸುವ ಜೊತೆಗೆ, ತಂಡಕ್ಕಾಗಿ ಕೊನೆಯುಸಿರೆಳೆದ ಅಭಿಮಾನಿಗಳಿಗೆ ನಿಜವಾದ ಗೌರವ ಹಾಗೂ ನ್ಯಾಯ ಸಿಗಬೇಕಿರುವುದು ಅತ್ಯಂತ ಅನಿವಾರ್ಯ ಎಂದು ಅವರು ಒತ್ತಿ ಹೇಳಿದ್ದಾರೆ.



