ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಭಾರತೀಯ ಚಿತ್ರರಂಗ ಖ್ಯಾತ ಗಾಯಕಿ ಗಾನ ಕೋಗಿಲೆ ಎಸ್. ಜಾನಕಿ ಅವರಿಗೆ ನುಡಿನಮನ ಕಾರ್ಯಕ್ರಮ ನಡೆಯಿತು.
ನಗರದ ಕನ್ನಡ ಜಾಗೃತಿ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಜಾಗೃತ ಪರಿಷತ್ತು ಮತ್ತು ಸುಸ್ವರ ಟ್ರಸ್ಟ್ ಸಹಯೋಗದಲ್ಲಿ ನಡೆದ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್.ಜಾನಕಿ ಅಭಿಮಾನಿಗಳು ಮತ್ತು ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಎಸ್.ಜಾನಕಿ ಅವರು ಭಾರತೀಯ ಚಿತ್ರರಂಗದ ಹೆಮ್ಮೆಯ ಗಾಯಕಿ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ 17 ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಹಾಡುಗಳನ್ನು ಹಾಡಿ ಬಹುಭಾಷಾ ಗಾಯಕಿಯಾಗಿ ದಾಖಲೆ ಬರೆದಿದ್ದಾರೆ ಎಂದರು.
ಎಸ್.ಜಾನಕಿ ಅವರು ಹಾಡಿರುವ ಭಕ್ತಿಗೀತೆ, ಭಾವಗೀತೆ, ಜಾನಪದ ಮತ್ತು ಚಿತ್ರಗೀತೆಗಳು ಕೇಳುಗರ ಮನಗೆದ್ದಿವೆ. ಪ್ರೀತಿ, ವಿರಹ, ಸಂತೋಷ, ದುಃಖ, ಕೋಪ ಹೀಗೆ ಎಲ್ಲಾ ಭಾವನೆಗಳನ್ನೂ ತಮ್ಮ ಧ್ವನಿಯಲ್ಲೇ ಅತ್ಯಂತ ಸುಂದರವಾಗಿ ಜೀವಂತಗೊಳಿಸುತ್ತಿದ್ದರು. ಜಾನಕಿಯವರ ಧ್ವನಿಯ ಬಹುದೊಡ್ಡ ವೈಶಿಷ್ಟ್ಯವೆಂದರೆ ಅವರು ಚಿಕ್ಕ ಮಕ್ಕಳ ಧ್ವನಿಯನ್ನು ಅನುಕರಿಸಿ ಹಾಡುತ್ತಿದ್ದ ರೀತಿ. ಅನೇಕ ಚಿತ್ರಗಳಲ್ಲಿ ಅವರು ಹಾಡಿದ ತುಂಟಾಟದ ಮತ್ತು ಮಕ್ಕಳ ಹಾಡುಗಳು ಅತ್ಯಂತ ಜನಪ್ರಿಯವಾಗಿವೆ ಎಂದರು.
ಗಮನ ಸೆಳೆದ ಗಾನ ನಮನ :
ಎಸ್.ಜಾನಕಿ ನುಡಿ ನಮನ ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಕಲಾವಿದರುಗಳು ನಡೆಸಿಕೊಟ್ಟ ಎಸ್.ಜಾನಕಿ ಹಾಡಿರುವ ಮಧುರ ಚಲನಚಿತ್ರಗಳ ಗಾಯನ ಪ್ರೇಕ್ಷಕರ ಗಮನ ಸೆಳೆಯಿತು.
ಕಲಾವಿದರಾದ ನಾಗರತ್ನ ಮಹಾಬಲೇಶ್ವರ್, ರಾಮಕೃಷ್ಣ, ರವಿರಾಜ್, ಚಂದ್ರಶೇಖರ್, ಸಿ.ನಟರಾಜ್, ಮಲ್ಲೇಶ್, ನಾಗರತ್ನ, ಪುಷ್ಪ, ಜಯಮ್ಮ ಮತ್ತು ಸುಸ್ವರ ಬಳಗದ ಕಲಾವಿದರು ಎಸ್.ಜಾನಕಿ ಅವರ ಹಾಡಿರುವ ಹಾಡುಗಳನ್ನು ಹಾಡುವ ಮೂಲಕ ನೆರೆದಿದ್ದ ಕಲಾ ರಸಿಕರಿಗೆ ಜಾನಕಿ ಅವರ ಗಾನರಸದೌತಣ ಬಡಿಸಿದರು.
ಈ ಕಾರ್ಯಕ್ರಮದಲ್ಲಿ ಕನ್ನಡಪರ ಹಿರಿಯ ಹೋರಾಟಗಾರರಾದ ತ.ನ.ಪ್ರಭುದೇವ್, ಸಂಜೀವ್ ನಾಯಕ್, ಕನ್ನಡ ಜಾಗೃತ ಪರಿಷತ್ತು ಟ್ರಸ್ಟಿಗಳಾದ ಡಾ.ಎ.ಓ.ಆವಲಮೂರ್ತಿ, ಎಸ್.ಮಹಾಬಲೇಶ್ವರ್, ಕಾರ್ಯದರ್ಶಿ ಡಿ.ಪಿ.ಆಂಜನೇಯ, ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ್, ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾ ಮಹಾದೇವ್, ಗೌರವ ಕಾರ್ಯದರ್ಶಿ ಎ.ಜಯರಾಮ್, ಕೋಶಾಧ್ಯಕ್ಷ ಜಿ.ಸುರೇಶ್, ಕನ್ನಡಪರ ಸಂಘಟನೆಗಳ ಮುಖಂಡರುಗಳಾದ ಡಿ.ವೆಂಕಟೇಶ್, ನಾಗರಾಜ್, ಬಿ.ಜಿ.ಅಮರನಾಥ್, ಕನ್ನಡ ಜಾಗೃತ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು, ಸುಸ್ವರ ಟ್ರಸ್ಟ್ ಪದಾಧಿಕಾರಿಗಳು ಮತ್ತು ಎಸ್.ಜಾನಕಿ ಅಭಿಮಾನಿಗಳು ಭಾಗವಹಿಸಿದ್ದರು.



