ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲನಜೋಗಿಹಳ್ಳಿ ಗ್ರಾಮದಲ್ಲಿ ಶಾಲೆ, ಅಂಗನವಾಡಿ, ದೇವಸ್ಥಾನ, ಅಂಗಡಿಗಳು ಹಾಗೂ ವಸತಿ ಪ್ರದೇಶದ ಸಮೀಪದಲ್ಲೇ ಕಸ ಹಾಕಲಾಗುತ್ತಿದೆ. ಇದು ನಿರಂತರವಾಗಿ ನಡೆದಿದ್ದು, ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ತ್ಯಾಜ್ಯದ ರಾಶಿ ಹೊರ ಸೂಸುವ ದುರ್ವಾಸನೆ ಸಾರ್ವಜನಿಕರನ್ನು ಶಾಲಾ ಮಕ್ಕಳನ್ನು ಸ್ವಾಗತಿಸುತ್ತಿದೆ.
ಯಾವುದೇ ಭಯವಿಲ್ಲದೆ ಎಲ್ಲೆಂದರಲ್ಲಿ ಅಸಮರ್ಪಕವಾಗಿ ಕಸ ಹಾಕುತ್ತಿರುವ ಕೆಲ ನಿವಾಸಿಗಳಿಂದ ಸ್ಥಳೀಯ ನಿವಾಸಿಗಳು, ವಾಹನ ಸವಾರರು ಹಾಗೂ ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.ಈ ಕಸದ ರಾಶಿಯಿಂದ ಬರುವ ವಾಸನೆ, ನೊಣ ಮತ್ತು ಸೊಳ್ಳೆಗಳಿಂದ ಮಕ್ಕಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಮಂಜುನಾಥ್.
ಪಾಲನಜೋಗಿ ಹಳ್ಳಿ ಮುಖ್ಯರಸ್ತೆ ಪ್ರಮುಖ ವಾಣಿಜ್ಯ ತಾಣವಾಗಿದ್ದು ಇಲ್ಲಿನ ಮಾಂಸದ ಅಂಗಡಿ ಕೋಳಿ ಅಂಗಡಿ, ಹೋಟೆಲ್ ಗಳ ಆಹಾರ ತ್ಯಾಜ್ಯ ಹಾಗೂ ಮಾಂಸದಂಗಡಿಗಳ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯಲಾಗುತ್ತಿರುವುದರಿಂದ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಕಸದ ರಾಶಿಯ ಸುತ್ತಮುತ್ತ ನಾಯಿಗಳು ಗುಂಪುಗೂಡುತ್ತಿರುವುದರಿಂದ ಸಾರ್ವಜನಿಕರು, ವಿಶೇಷವಾಗಿ ಮಕ್ಕಳು, ಆತಂಕದಲ್ಲೇ ಓಡಾಡುವಂತಾಗಿದೆ.
ತ್ಯಾಜ್ಯ ಸುರಿಯುವ ಕುರಿತು ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಗಾಯತ್ರಿ ಮಂಜುನಾಥ್ ಮಾತನಾಡಿ, ಕಸದ ಸಮಸ್ಯೆ ನಿವಾರಣೆಗೆ ಹಲವು ಬಾರಿ ಪಂಚಾಯಿತಿಗೆ ಮನವಿ ಸಲ್ಲಿಸಿದ್ದೇವೆ ಆದರೆ ಯಾವುದೇ ಪ್ರಯೋಜನವಾಗಿಲ್ಲ, ಸಿಸಿಟಿವಿ ಅಳವಡಿಸಿ ಕಸ ಎಸೆಯುವವರಿಗೆ ದಂಡ ವಿಧಿಸುವಂತೆ ಮನವಿ ಮಾಡಿದ್ದೇವೆ. ಆದರೆ ಪಂಚಾಯತಿ ಈವರೆಗೂ ಯಾವುದೇ ಶಾಶ್ವತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಪಂಚಾಯಿತಿ ಸಿಬ್ಬಂದಿ ಪ್ರತಿದಿನ ಮನೆಮನೆಗೆ ತೆರಳಿ ಕಸ ಸಂಗ್ರಹಿಸಬೇಕು. ಆದರೆ ವಾರಕ್ಕೊಮ್ಮೆ ಕಸ ಸಂಗ್ರಹಿಸಲು ಟ್ರ್ಯಾಕ್ಟರ್ ಬರುತ್ತದೆ. ಇದರಿಂದ ದೈನಂದಿನ ತ್ಯಾಜ್ಯವನ್ನು ಜನರು ಎಲ್ಲೆಂದರಲ್ಲಿ ಎಸೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಕಸದ ಸಮಸ್ಯೆಯಿಂದಾಗಿ ಪಾಲನಜೋಗಿಹಳ್ಳಿಯ ಹಲವು ಚರಂಡಿಗಳು ಮುಚ್ಚಿಹೋಗಿವೆ. ರಸ್ತೆ ಬದಿ ಕಸ ಎಸೆಯುವ ಕೆಲವರು ಮನಸ್ಸಿಗೆ ಬಂದ ಕಡೆಯಲ್ಲಾ ಎಸೆಯುತ್ತಾರೆ ಅವರಿಗೆ ದಂಡಹಾಕಿದಾಗ ಮಾತ್ರ ಈ ಸಮಸ್ಯೆಗೆ ಪರಿಹಾರ ಸಿಗಬಹುದು.ಅಲ್ಲದೆ ಪ್ರತಿ ನಿತ್ಯ ಕಸ ಸಂಗ್ರಹಣೆ ಈ ಸಮಸ್ಯೆಯಿಂದ ಸಾರ್ವಜನಿಕರನ್ನು ಪಾರುಮಾಡಬಹುದು. ಇದರ ಬಗ್ಗೆ ಗ್ರಾಮ ಪಂಚಾಯ್ತಿ ಸಿಬ್ಬಂದಿ ಬೇಕಾ ಬಿಟ್ಟಿ ಕಸ ಎಸೆದು ಪರಿಸರ ಮಾಲಿನ್ಯಕ್ಕೆ ಕಾರಣರಾಗುವ ವರಿಗೆ ದಂಡ ವಿಧಿಸುವ ಮೂಲಕ ಸೂಕ್ತ ಕ್ರಮ ಕೈಗೊಳ್ಳುವುದರ ಜೊತೆಗೆ ನಾಗರಿಕರಲ್ಲಿ ತ್ಯಾಜ್ಯದ ಅಡ್ಡ ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.



