ಶೈಕ್ಷಣಿಕ ಹಣತೆ ಬೆಳಗುವ ಡಿ.ಸುಧಾಕರ್ ರವರು...
ಡಿ.ಸುಧಾಕರ್ ರವರು ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುವ 1999-2000 ನೆ ವರ್ಷಗಳ ಸಂದರ್ಭದಲ್ಲಿ ಚಳ್ಳಕೆರೆ ತಾಲ್ಲೂಕಿನಲ್ಲಿ ಭೀಕರ ಬರಗಾಲ ತಲೆದೋರಿತ್ತು .ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಹಾಗೂ ದನಕರುಗಳಿಗೆ ಮೇವಿನ ಅಭಾವದಿಂದ ರೈತರು ಕಂಗಾಲಾಗಿದ್ದ ಸಮಯವದು.ಆಗ ಶ್ರೀಯುತರು ತಾಲ್ಲೂಕಿನಾದ್ಯಂತ ಜಾನುವಾರುಗಳಿಗೆ ನೂರಾರು ಲಾರಿಗಳ ಮೇವು ಒದಗಿಸಿ, ಜನರಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡುವ ಮಹತ್ಕಾರ್ಯದ ಮುಖೇನ ರಾಜಕೀಯದ ಒಲವು ನಿಲುವುಗಳನ್ನು ಅರಿಯುತ್ತಾ, ಜನ ಸ್ನೇಹಿಯಾಗಿ ಬಂದವರು.
ಚಳ್ಳಕೆರೆಯ ಹೆಚ್ ಪಿ ಪಿ ಸಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಣಕ ವಿಜ್ಞಾನ ವಿಷಯ ಪ್ರಾರಂಭಿಸಲು 23 ಗಣಕ ಯಂತ್ರಗಳನ್ನು ಕೊಡುಗೆಯಾಗಿ ನೀಡುವುದರ ಮೂಲಕ 2001-2002 ನೆ ಶೈಕ್ಷಣಿಕ ಸಾಲಿನಿಂದ ಆರಂಭವಾಗಲು ಕಾರಣೀಭೂತರಾದವರು.
ಚಳ್ಳಕೆರೆಯ ಹೆಚ್.ಪಿ.ಪಿ.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಮತ್ತು ನಗರಕ್ಕೆ ಘನತೆವೆತ್ತ ಕಾರ್ಯವಾದ ಸುಸಜ್ಜಿತವಾದ ಕ್ರೀಡಾಂಗಣವನ್ನು ನೆರವೇರಿಸುವಲ್ಲಿ ಸಂಪೂರ್ಣ ನೆರವಿಗೆ ನಿಂತವರು ಡಿ. ಸುಧಾಕರ್ ರವರು. ಈ ಹಿನ್ನೆಲೆಯಲ್ಲಿ ಕಾಲೇಜಿನ ಪ್ರಾಚಾರ್ಯರಾಗಿದ್ದಡಾ. ಮೀರಾಸಾಬಿಹಳ್ಳಿ ಶಿವಣ್ಣನವರು ಕಾಲೇಜು ಶಿಕ್ಷಣ ಇಲಾಖೆಯ ಅನುಮೋದನೆಯೊಂದಿಗೆ ಡಿ.ಸುಧಾಕರ್ ಕ್ರೀಡಾಂಗಣವೆಂದು ನಾಮಾಂಕಿತವಾಗಿ ಜನಪ್ರಿಯವಾಯಿತು.ಇಂದು ವಾಯು ವಿಹಾರಿಗಳ ಚೈತನ್ಯ ಧಾಮವಾಗಿ ಮತ್ತು ವಿದ್ಯಾರ್ಥಿಗಳಿಗೆ ಕ್ರೀಡಾ ಸ್ಫೂರ್ತಿ ಕೇಂದ್ರವಾಗಿ ಕ್ರಿಯಾಶೀಲವಾಗಿದೆ.
ಕಾಲೇಜಿನ ಸುತ್ತಲ ಒಂದು ಕಿ.ಮೀ ಉದ್ದದ ಕಲ್ಲಿನಕಾಂಪೌಂಡ್ ನಿರ್ಮಾಣದಲ್ಲಿ ಎನ್.ಎಸ್ ಎಸ್ ಮತ್ತು ನಮ್ಮೆಲ್ಲರ ಜೊತೆ ನಿಂತು ಸಾಕಾರಗೊಳಿಸಿದವರು.
2003-2004 ರಲ್ಲಿ ಚಳ್ಳಕೆರೆ ಶಾಸಕರಾಗಿದ್ದಾಗ ಕುವೆಂಪು ವಿ.ವಿ.ದಿಡೀರನೆ ಹೆಚ್ಚಳಮಾಡಿದ ಕಾಲೇಜು ವಿದ್ಯಾರ್ಥಿಗಳ 2 ಲಕ್ಷದ ಶುಲ್ಕವನ್ನು ಸ್ವಂತವಾಗಿ ಭರಿಸಿದವರು.
ನಿರಂತರ ಬರಗಾಲಕ್ಕೆ ತುತ್ತಾಗುತ್ತಿದ್ದ ಚಳ್ಳಕೆರೆ ತಾಲೂಕಿನಲ್ಲಿ ಶಾಶ್ವತ ಬೆಳೆವಣಿಗೆ ಎಂದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಅರಿತು ಸುಧಾಕರ್ ರವರು ಶಿಕ್ಷಣಕ್ಕೆ ಮಹತ್ವ ಕೊಟ್ಟು ವಿದ್ಯಾದೀವಿಗೆಯನ್ನು ಬೆಳಗುತ್ತಾ ಹೊರಟವರು. ಚಳ್ಳಕೆರೆಯ ಸ್ಮಾಮಿ ವಿವೇಕಾನಂದ ವಿದ್ಯಾಸಂಸ್ಥೆ, ನಾರಾಯಣಪುರದ ವಿದ್ಯಾಸಂಸ್ಥೆಯ ವತಿಯಿಂದ ಅಕ್ಷರ ದಾಸೋಹವನ್ನು ನೀಡುತ್ತಲೇ ಬಂದವರು ಡಿ.ಸುಧಾಕರ್ ರವರು.
ಹಿರಿಯೂರು ಕ್ಷೇತ್ರದ ಶಾಸಕರಾಗಿ ಹಾಗೂ ಮಂತ್ರಿಗಳಾಗಿ ಮತ್ತು ಉಸ್ತುವಾರಿ ಸಚಿವರಾಗಿ ಸಲ್ಲಿಸಿದ ಶೈಕ್ಷಣಿಕ ಸೇವೆ ಅಪೂರ್ವವಾದುದು.
ಹಿರಿಯೂರು ತಾಲ್ಲೂಕಿನ ಮತ್ತು ನಗರದ ವಾಣಿ ಹಾಗೂ ವೇದಾ ಪ್ರಥಮ ದರ್ಜೆ ಕಾಲೇಜುಗಳಭೌತಿಕ ಮತ್ತು ಬೌದ್ಧಿಕವಾಗಿ ಉನ್ನತಿಗಾಗಿ ನಿಜ ಅರ್ಥದಲ್ಲಿ ಶ್ರಮಿಸಿದವರು.ಪ್ರತಿ ವರ್ಷ ಶಾಲಾ ಕಾಲೇಜು ವಿದ್ಯಾರ್ಥಿಗಳು ವಿಶ್ವ ವಿದ್ಯಾಲಯ ಮತ್ತು ರಾಜ್ಯ ಮಟ್ಟದಲ್ಲಿ ಅಧಿಕ ಅಂಕ ಗಳಿಸಿದ ತಲಾ ವಿದ್ಯಾರ್ಥಿಗಳಿಗೆ 1ಲಕ್ಷದಿಂದ ಐವತ್ತು ಸಾವಿರದವರೆಗೆ ಪ್ರೋತ್ಸಾಹ ಹಣನೀಡುವುದರ ಜೊತೆಗೆ ಪ್ರತಿವಾರಸಹಾಯ ಕೋರಿ ಬಂದ ವಿದ್ಯಾರ್ಥಿಗಳಿಗೆನೀಡಿದ ನೆರವು ಸೇರಿ ಒಂದು ವರ್ಷಕ್ಕೆ ಒಂದು ಕೋಟಿ ರೂಪಾಯಿ ಗಿಂತಲೂ ಮೀಗಿಲು ಎಂದರೆ ಅತಿಶಯೋಕ್ತಿಯಲ್ಲ.
ಸಹಾಯ ಬಯಸಿ ಬಂದವರಿಗೆ ದಣಿವರಿಯದೆ ಸಹಾಯ ಹಸ್ತ ನೀಡುತ್ತಲೆ ಬಂದವರು ಹಾಗೂ ಮದುವೆಕಾರ್ಯನೆರವೇರಿಸಲು ಸಹಕಾರ ಕೋರಿದವರಿಗೆ ಮೂರು ದಶಕದಿಂದ ನೀಡುತ್ತಾ ಬಂದಿರುವ ನೆರವು ನದಿಯಲ್ಲಿ ಹರಿಯುವ ನೀರಿನ ತೆರದಿ ಹರಿಯುತ್ತಲೇ ಬಂದಿದೆ.
ಶೂನ್ಯ ಜಾತಿ ಬಲದ ಒಬ್ಬ ವ್ಯಕ್ತಿ, ತನ್ನ ವ್ಯಕ್ತಿತ್ವ, ಸಾಮರ್ಥ್ಯ ಹಾಗೂ ಕ್ರಿಯಾಶೀಲತೆಯ ಚಾಣಾಕ್ಷತೆಯಿಂದ ಸ್ನೇಹಶೀಲ ರಾಜಕಾರಣಿಯಾಗಿ, ಸದಾ ಸಹಾಯ ಮಾಡುತ್ತಲೇ ತೃಪ್ತಿ ಕಾಣುತ್ತಿದ್ದ ಡಿ.ಸುಧಾಕರ್ ರವರ ಅಗಲಿಕೆಯಿಂದ ಸಹೃದಯರೆಲ್ಲರಿಗೂ ಅತೀವ ನೋವಾಗಿದೆ.

ಶ್ರೀಯುತರ ಆತ್ಮಕ್ಕೆ ಚಿರ ಶಾಂತಿಯನ್ನು ಕೋರುವ ದುಃಖ ತಪ್ತರು.ಶೈಕ್ಷಣಿಕ ದೃಷ್ಟಿಯಿಂದ ಮಾತ್ರ ನನ್ನ ಈ ಮಾತುಗಳು.
ಲೇಖನ-ಡಾ.ಸಿ.ಶಿವಲಿಂಗಪ್ಪ ಮೀರಾಸಾಬಿಹಳ್ಳಿ.


