ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ರಾಜ್ಯದ ಯೋಜನೆ ಮತ್ತು ಸಾಂಖಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ (65) ಅವರ ಅಕಾಲಿಕ ನಿಧನದಿಂದಾಗಿ ಇಡೀ ಜಿಲ್ಲೆ ಶೋಕಸಾಗರದಲ್ಲಿ ಮುಳುಗಿದೆ. ಭಾನುವಾರ ಬೆಳಗಿನ ಜಾವ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ನೆಚ್ಚಿನ ನಾಯಕನ ಪಾರ್ಥಿವ ಶರೀರಕ್ಕೆ ಅಂತಿಮ ದರ್ಶನ ಪಡೆಯಲು ಹಿರಿಯೂರಿನಲ್ಲಿ ಸಾವಿರಾರು ಜನರು ಹರಿದುಬಂದರು.
ಗಣ್ಯರಿಂದ ಅಂತಿಮ ದರ್ಶನ-
ಹಿರಿಯೂರು ಮತ್ತು ಚಳ್ಳಕೆರೆ ಭಾಗದಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿರುವ ಸುಧಾಕರ್ ಅವರಿಗೆ ವಿವಿಧ ಪಕ್ಷಗಳ ಮುಖಂಡರು ಅಂತಿಮ ನಮನ ಸಲ್ಲಿಸಿದರು.
ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಅವರು ಆಗಮಿಸಿ, ಸುಧಾಕರ್ ಅವರೊಂದಿಗಿನ ಒಡನಾಟವನ್ನು ಸ್ಮರಿಸಿ ಭಾವಪೂರ್ಣವಾಗಿ ಗೌರವ ಸಲ್ಲಿಸಿದರು.
ಪ್ರಮುಖ ನಾಯಕರಾದ ವೀರೇಂದ್ರ ಪಪ್ಪಿ, ಕಾಂಗ್ರೆಸ್ ಮುಖಂಡರಾದ ಸೋಮಶೇಖರ್, ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರಾದ ಟಿ.ಡಿ ಶ್ರೀನಿವಾಸ್ ಹಾಗೂ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸೇರಿದಂತೆ ಅನೇಕ ಪ್ರಮುಖ ನಾಯಕರು ಅಂತಿಮ ದರ್ಶನ ಪಡೆದು ಕುಟುಂಬಕ್ಕೆ ಸಾಂತ್ವನ ಹೇಳಿದರು.
ಜನಸಾಗರ ಮತ್ತು ಅಂತಿಮ ವಿಧಿವಿಧಾನ-
ಮೃತರ ಪಾರ್ಥಿವ ಶರೀರವನ್ನು ಹಿರಿಯೂರಿನ ನೆಹರು ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಸಾವಿರಾರು ಜನರು ಕಣ್ಣೀರು ಹಾಕುತ್ತಾ ತಮ್ಮ ನಾಯಕನಿಗೆ ವಿದಾಯ ಹೇಳಿದರು. ಬಳಿಕ ಪಾರ್ಥಿವ ಶರೀರವನ್ನು ಚಳ್ಳಕೆರೆಗೆ ಕೊಂಡೊಯ್ಯಲಾಯಿತು.
ಸೋಮವಾರ (ಮೇ 11) ಸಂಜೆ 4 ಗಂಟೆಗೆ ಜೈನ ಸಂಪ್ರದಾಯದಂತೆ ಚಳ್ಳಕೆರೆಯ ಸುಧಾಕರ್ ಸ್ಟೇಡಿಯಂ ಆವರಣದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ಸಚಿವರ ನಿಧನದ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯಾದ್ಯಂತ ಸೋಮವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ರಾಜ್ಯಾದ್ಯಂತ ಮೂರು ದಿನಗಳ ಕಾಲ ಶೋಕಾಚರಣೆ ಆಚರಿಸಲಾಗುತ್ತಿದೆ.
ಯೋಜನೆ ಮತ್ತುಸಾಂಖಿಕಸಚಿವರು ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಂಚಿವರಾಗಿದ್ದ ಡಿ ಸುಧಾಕರ್ ಅವರ ಅಕಾಲಿಕ ನಿಧನ ತೀವ್ರ ನೋವು ತರುವಂಥ ಸಂಗತಿಯಾಗಿದೆ.
ಶಾಸಕರಾಗಿ, ಸಚಿವರಾಗಿ ಇದ್ದಷ್ಟು ಕಾಲ ಕ್ಷೇತ್ರದ ಜನರೊಂದಿಗೆ ಆಪ್ತಭಾವದ ಅವಿನಾಭಾವ ಸಂಬಂಧದ ಬೆಸುಗೆ ಹೊಂದಿದ್ದರು. ಜಾತಿ ಪ್ರಾಬಲ್ಯದ ಪ್ರಭಾವಳಿ ಇಲ್ಲದೇ ಜನ ನಾಯಕನಾಗಿ ಬೆಳೆದದ್ದು ಗೌರವಾರ್ಹ ನಡೆಯಾಗಿತ್ತು. ದಿವಂಗತರಿಗೆ ಸದ್ಗತಿ ದೊರೆಯಲೆಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಪ್ರಾರ್ಥಿಸಿದ್ದಾರೆ.


