ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ಬಿಡದಿ ಟೌನ್ಶಿಪ್ ಯೋಜನೆಯ ಹೆಸರಿನಲ್ಲಿ ರೈತರ ಭೂಮಿ ಕಿತ್ತುಕೊಂಡು ಸರ್ಕಾರವೇ ಅಧಿಕೃತವಾಗಿ ರಿಯಲ್ ಎಸ್ಟೇಟ್ ದಂಧೆಗೆ ಇಳಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನೀವು ರಿಯಲ್ ಎಸ್ಟೇಟ್ ದಲ್ಲಾಳಿಯಾಗಬೇಡಿ" ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಜೆ.ಪಿ. ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಡದಿ ಟೌನ್ಶಿಪ್ ಮತ್ತು ಸರ್ಕಾರದ ಇತ್ತೀಚಿನ ನಿರ್ಧಾರಗಳ ವಿರುದ್ಧ ಅವರು ಹರಿಹಾಯ್ದರು.
ರೈತರ ಭೂಮಿ ಹರಾಜು ಹಾಕುವ ಸಂಚು:
ಬಿಡದಿ ಸುತ್ತಮುತ್ತಲಿನ 8 ಹಳ್ಳಿಗಳ ರೈತರನ್ನು ಒಕ್ಕಲೆಬ್ಬಿಸಲು ಸರ್ಕಾರ ಸಂಚು ರೂಪಿಸಿದೆ ಎಂದು ಆರೋಪಿಸಿದ ಎಚ್ಡಿಕೆ, "ನಾನು ಸಿಎಂ ಆಗಿದ್ದಾಗ ರೈತರು ಕೇಳಿದ ಪ್ರಶ್ನೆ ಇಂದಿಗೂ ನನ್ನ ಮನಸ್ಸಲ್ಲಿದೆ. ಈಗ ಸರ್ಕಾರ ಕೃಷಿ ಮತ್ತು ರೇಷ್ಮೆ ಬೆಳೆಯುವ ಫಲವತ್ತಾದ ಭೂಮಿಯನ್ನು ವಶಪಡಿಸಿಕೊಳ್ಳಲು ಹೊರಟಿದೆ. ಈಗಲ್ಟನ್ ರೆಸಾರ್ಟ್ ಬಳಿ ಎಕರೆಗೆ 12 ಕೋಟಿ ರೂ. ನಿಗದಿಪಡಿಸಿ, ರೈತರ ಭೂಮಿಗೆ ಕೇವಲ 2 ಕೋಟಿ ರೂ. ನೀಡುವುದು ಎಷ್ಟು ನ್ಯಾಯ?" ಎಂದು ಪ್ರಶ್ನಿಸಿದರು.
ಭೂ ಹಗರಣದ ಆರೋಪ:
ಬಿಡದಿ ಟೌನ್ಶಿಪ್ ವ್ಯಾಪ್ತಿಯಲ್ಲಿ ಮೊದಲು 2,320 ಎಕರೆ ಸರ್ಕಾರಿ ಭೂಮಿ ಇತ್ತು ಎಂದು ವರದಿಯಾಗಿತ್ತು. ಆದರೆ ಈಗ ಕೇವಲ 700 ಎಕರೆ ಇದೆ ಎಂದು ಹೇಳಲಾಗುತ್ತಿದೆ. ಉಳಿದ ಭೂಮಿ ಎಲ್ಲಿ ಹೋಯಿತು? ಯಾರಿಗೆ ಹಂಚಿಕೆಯಾಗಿದೆ? ಇದರ ಬಗ್ಗೆ ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆಯಾಗಲಿ ಎಂದು ಅವರು ಸವಾಲು ಹಾಕಿದರು.
"ಸಂಪುಟ ಸಭೆ ಹರಾಜು ಪ್ರಕ್ರಿಯೆಯಂತೆ":
ರಾಜ್ಯ ಸರ್ಕಾರದ ಸಂಪುಟ ಸಭೆಗಳ ವಿರುದ್ಧ ವ್ಯಂಗ್ಯವಾಡಿದ ಕುಮಾರಸ್ವಾಮಿ, "ಕ್ಯಾಬಿನೆಟ್ ಎನ್ನುವುದು ಇಂದು ಹರಾಜು ಹಾಕುವ ವೇದಿಕೆಯಂತಾಗಿದೆ. ಅಲ್ಲಿ ಹೇಳುವವರು ಇಲ್ಲ, ಕೇಳುವವರು ಇಲ್ಲ. ಕೇವಲ ಹಣ ಲೂಟಿ ಮಾಡುವ ಯೋಜನೆಗಳಿಗೆ ಅಲ್ಲಿ ಮುದ್ರೆ ಬೀಳುತ್ತಿದೆ," ಎಂದು ಟೀಕಿಸಿದರು.
ಎ ಖಾತಾ-ಬಿ ಖಾತಾ ಗ್ಯಾರಂಟಿ ನಂಬಬೇಡಿ:
ಬೆಂಗಳೂರಿನ ಜನತೆಗೆ ಮನವಿ ಮಾಡಿದ ಹೆಚ್ಡಿಕೆ, "ಬಿ ಖಾತೆಯಿಂದ ಎ ಖಾತೆಗೆ ಬದಲಾಯಿಸುವ ಸರ್ಕಾರದ 'ಆರನೇ ಗ್ಯಾರಂಟಿ' ನಂಬಿ ಯಾರೂ ಸಾಲ ಮಾಡಿ ಹಣ ಕಟ್ಟಬೇಡಿ. ಇದು ಕೇವಲ ಚುನಾವಣೆಗಾಗಿ ಹಣ ಸಂಗ್ರಹಿಸುವ ತಂತ್ರ. ಇನ್ನು ಎರಡು ವರ್ಷ ಸುಮ್ಮನಿರಿ, ನಮ್ಮ ಸರ್ಕಾರ ಬಂದ ಮೇಲೆ ಜನರಿಗೆ ಹೊರೆಯಾಗದಂತೆ ಸಕ್ರಮ ಮಾಡುತ್ತೇವೆ," ಎಂದು ಭರವಸೆ ನೀಡಿದರು.
ಹಿಜಾಬ್ ವಿಚಾರ: ಮುಸ್ಲಿಂ ಸಮುದಾಯದ ಓಲೈಕೆ:
ಹಿಜಾಬ್ ನಿಷೇಧ ತೆರವು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ಈ ಪ್ರಕರಣ ನ್ಯಾಯಾಲಯದಲ್ಲಿದೆ. ಇಷ್ಟು ದಿನ ಸುಮ್ಮನಿದ್ದ ಸರ್ಕಾರ, ಈಗ ದಾವಣಗೆರೆ ಉಪಚುನಾವಣೆ ಹಾಗೂ ಮುಸ್ಲಿಂ ಮುಖಂಡರ ಸಮಾವೇಶಕ್ಕೆ ಹೆದರಿ ಈ ನಿರ್ಧಾರ ಕೈಗೊಂಡಿದೆ. ಇದು ಕೇವಲ ಒಂದು ಸಮುದಾಯವನ್ನು ಓಲೈಸುವ ರಾಜಕೀಯ ಅಷ್ಟೇ," ಎಂದರು.
"ಗ್ಯಾರಂಟಿ ಕಾರ್ಡ್ಗಳನ್ನು ನೀಡಿ ಜನರು ಮತ ಹಾಕುತ್ತಾರೆ ಎಂದು ಭ್ರಮಿಸಬೇಡಿ. ಸಿದ್ದರಾಮಯ್ಯನವರೇ, ಹೋಗುವಾಗ ಗೌರವಯುತವಾಗಿ ಒಳ್ಳೆಯ ಹೆಸರು ತೆಗೆದುಕೊಂಡು ಹೋಗಿ," ಎಂದು ಹೆಚ್.ಡಿ. ಕುಮಾರಸ್ವಾಮಿ ಸಲಹೆ ನೀಡಿದರು.


