ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಲೇರಿಯಾ ನಿರ್ಮೂಲನೆ ನಮ್ಮೆಲ್ಲರ ಜವಾಬ್ದಾರಿ. ನೀರು ನಿಲ್ಲದಂತೆ ನಿಗಾವಹಿಸಿ, ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸಿ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಕಾಶಿ ಹೇಳಿದರು.
ಇಲ್ಲಿನ ನೆಹರು ನಗರ ಆರೋಗ್ಯ ಕೇಂದ್ರದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಚೇರಿ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ವತಿಯಿಂದ ಖಾಸಗಿ ಆಸ್ಪತ್ರೆ ವೈದ್ಯಾಧಿಕಾರಿಗಳು ಮತ್ತು ಪ್ರಯೋಗ ಶಾಲಾ ತಂತ್ರಜ್ಞರಿಗೆ ಆಯೋಜಿಸಿದ ಮಲೇರಿಯಾ ಕುರಿತು ಅಡ್ವೋಕೆಸಿ ಕಾರ್ಯಾಗಾರದಲ್ಲಿ ವಿಶ್ವ ಸೊಳ್ಳೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಲೇರಿಯಾ ಚಿಕಿತ್ಸೆ ಬಿತ್ತಿಪತ್ರ ಮತ್ತು ಗಪ್ಪಿ ಗಂಬ್ಯೂಸಿಯ ಲಾರ್ವಹಾರಿ ಮೀನುಗಳ ಪ್ರದರ್ಶಿಸಿ ಅವರು ಮಾತನಾಡಿದರು.
1897ರಂದು ಬ್ರಿಟಿಷ್ ವೈದ್ಯ ರೊನಾಲ್ಡ್ ರಾಸ್ ಹೆಣ್ಣು ಅನಾಪಿಲಿಸ್ ಸೊಳ್ಳೆಯಿಂದ ಮಲೇರಿಯಾ ರೋಗ ಮನುಷ್ಯರಿಗೆ ಹರಡುತ್ತದೆ ಎಂದು ಕಂಡುಹಿಡಿದರು. ಈ ಮಹತ್ವದ ಆವಿಷ್ಕಾರದ ನೆನಪಿಗಾಗಿ ವಿಶ್ವ ಸೊಳ್ಳೆ ದಿನಾಚರಣೆಯನ್ನು ಪ್ರತಿ ವರ್ಷ ಆಗಸ್ಟ್ 20ರಂದು ಆಚರಿಸುತ್ತಾ, ಸೊಳ್ಳೆಗಳಿಂದ ಹರಡುವ ರೋಗಗಳ ವಿರುದ್ಧ ಜಾಗೃತಿ ಮೂಡಿಸಲು, ಇತಿಹಾಸ ಮತ್ತು ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಿಶ್ವ ಸೊಳ್ಳೆ ದಿನಾಚರಣೆ ಆಚರಿಸಲಾಗುತ್ತದೆ ಎಂದು ಹೇಳಿದರು.
ಎರಡರಿಂದ ಎರಡುವರೆ ಮಿಲಿ ಗ್ರಾಂ ತೂಕದ ಸೊಳ್ಳೆ ಕಚ್ಚುವುದರಿಂದ ತಗಲುವ ರೋಗಕ್ಕೆ ಜಗತ್ತಿನಲ್ಲಿ ಪ್ರತಿ ವರ್ಷ ಲಕ್ಷಾಂತರ ಜೀವ ಬಲಿಯಾಗುತ್ತಿದ್ದಾರೆ, “ಸೊಳ್ಳೆ ಚಿಕ್ಕದಾದರೂ ಕಾಟ ದೊಡ್ಡದು” ಕೆರೆ, ಕಟ್ಟೆ ಬಾವಿಗಳಲ್ಲಿ ಮತ್ತು ಜಾನುವಾರು ಹೆಜ್ಜೆಗಳಲ್ಲಿ ಹುಟ್ಟಿದ ಹೆಣ್ಣು ಆನಪಿಲೀಸ್ ಸೊಳ್ಳೆ ರಾತ್ರಿ ವೇಳೆ ಮನುಷ್ಯರನ್ನು ಕಚ್ಚುವುದರಿಂದ ಮಲೇರಿಯಾ ರೋಗ ಒಬ್ಬರಿಂದ ಒಬ್ಬರಿಗೆ ಹರಡುತ್ತಿದ್ದು, ಪರಿಸರ ಸ್ವಚ್ಛತೆ, ನೀರಿನ ತಾಣಗಳ ಸ್ವಚ್ಛತೆ ಮತ್ತು ಸ್ವಯಂ ರಕ್ಷಣಾ ವಿಧಾನಗಳನ್ನು ಸಾರ್ವಜನಿಕರು ಅನುಸರಿಸುವುದು ಒಳಿತು. ಸೊಳ್ಳೆಗಳ ನಿಯಂತ್ರಣಕ್ಕೆ ಅಗತ್ಯವಿರುವ ಕಡೆ ಗಪ್ಪಿ ಗಂಬ್ಯೂಸಿಯ ಲಾರ್ವಹಾರಿ ಮೀನುಗಳನ್ನು ನೀರಿನ ತಾಣಗಳಲ್ಲಿ ಆರೋಗ್ಯ ಇಲಾಖೆಯಿಂದ ಬಿಡುವ ಮುಖಾಂತರ ಸೊಳ್ಳೆ ನಿಯಂತ್ರಣ ಕ್ರಮ ವಹಿಸಲಾಗಿದೆ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡಿ, ಖಾಸಗಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮತ್ತು ಪ್ರಯೋಗ ಶಾಲಾ ತಂತ್ರಜ್ಞಾಧಿಕಾರಿಗಳ ಪಾತ್ರ ಬಹುಮುಖ್ಯವಾಗಿದ್ದು, ಎಂಡಮಿಕ್ ಪ್ರದೇಶದಲ್ಲಿ ಭೇಟಿ ನೀಡಿ ಹಿಂತಿರುಗಿದ ವ್ಯಕ್ತಿಗೆ ಜ್ವರ ಇದೆ ಎಂದು ಆಸ್ಪತ್ರೆಗೆ ಬಂದರೆ ರೋಗಿಗೆ ಸಂಶಯಾಸ್ಪದ ಮಲೇರಿಯಾ ಎಂದು ಪರಿಗಣಿಸಿ ರಕ್ತ ಪರೀಕ್ಷೆ ತಪ್ಪದೇ ಮಾಡುವುದು, ರೋಗ ದೃಢಪಟ್ಟರೆ ರಾಷ್ಟ್ರೀಯ ಮಾರ್ಗಸೂಚಿಯಂತೆ ನಿಗದಿತ ಔಷಧೋಪಚಾರ ಮಾಡಿ ಕೀಟಜನ್ಯ ರೋಗಗಳಿಗೆ ಸಂಬಂಧಿಸಿದಂತೆ ಪರೀಕ್ಷೆಗಳಿಗೆ ಸರ್ಕಾರದ ಮಾರ್ಗಸೂಚಿಯಂತೆ ಶುಲ್ಕ ವಿಧಿಸಬೇಕೆಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣ ನಾಯಕ್ ಮಾತನಾಡಿ, ಕೀಟಜನ್ಯ ರೋಗಗಳು ದೃಢಪಟ್ಟಲ್ಲಿ ತಕ್ಷಣವೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಗೆ ವಿಳಾಸ ಮತ್ತು ದೂರವಾಣಿ ಸಂಖ್ಯೆ ನಮೂದಿಸಿ ತಪ್ಪದೇ ಮಾಹಿತಿ ನೀಡಬೇಕು. ರೋಗ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ ಎಂದರು.
ಕಾರ್ಯಾಗಾರದಲ್ಲಿ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸೈಯದ್ ಬಿಲಾಲ್, ನಮ್ಮ ಕ್ಲಿನಿಕ್ ವೈದ್ಯಾಧಿಕಾರಿ ಕಿರಣ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ವೆಂಕಟೇಶ್, ಹನುಮಂತಪ್ಪ, ರೇಖಾ, ಆಶಾ ಮೆಂಟರ್ ತಬಿತ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳಾದ ಮಂಜುಷಾ, ಮೀನಾಕ್ಷಿ, ವೀಣಾ, ಫಾರ್ಮಸಿ ಅಧಿಕಾರಿ ಆಶಿಯ, ಶುಶ್ರೂಷಾಧಿಕಾರಿಗಳಾದ ಮನು, ಪದ್ಮ, ಖಾಸಗಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮತ್ತು ಪ್ರಯೋಗಶಾಲಾ ತಂತ್ರಜ್ಞಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಮತ್ತು ಸಾರ್ವಜನಿಕರು ಹಾಜರಿದ್ದರು.


