ಚಂದ್ರವಳ್ಳಿ ನ್ಯೂಸ್, ನವದೆಹಲಿ:
ದೇಶದಲ್ಲಿ ಜೈವಿಕ ಹಾಗೂ ಸ್ವಚ್ಛ ಇಂಧನ ಬಳಕೆಗೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬಿಗ್ ಆಫರ್ ಘೋಷಿಸಿದೆ. ಇಥೆನಾಲ್ ಮಿಶ್ರಿತ ಪೆಟ್ರೋಲ್ನ ಆಯ್ದ ಮಾದರಿಗಳ ಮೇಲಿನ ಅಬಕಾರಿ ಸುಂಕವನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಅಧಿಸೂಚನೆ ಹೊರಡಿಸಿದೆ.
ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ಪರಿಸರಸ್ನೇಹಿ ಇಂಧನ ಬಳಕೆ ಹೆಚ್ಚಾಗಲಿದ್ದು, ವಿದೇಶಿ ಕಚ್ಚಾತೈಲದ ಮೇಲಿನ ಭಾರತದ ಅವಲಂಬನೆ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ.
ಅಬಕಾರಿ ಸುಂಕ ’ಶೂನ್ಯ’ಕ್ಕಿಳಿದ ಇಂಧನ ಮಾದರಿಗಳು:
ಹಣಕಾಸು ಸಚಿವಾಲಯದ ಆದೇಶದ ಪ್ರಕಾರ, ಇನ್ನು ಮುಂದೆ ಈ ಕೆಳಗಿನ ಇಥನಾಲ್ ಮಿಶ್ರಿತ ಪೆಟ್ರೋಲ್ಗಳ ಮೇಲೆ ಯಾವುದೇ ಅಬಕಾರಿ ಸುಂಕ ಇರುವುದಿಲ್ಲ.
ಇ೨೨ (ಶೇ. ೨೨ ಇಥನಾಲ್ ಮಿಶ್ರಣ)
ಇ೨೫ (ಶೇ. ೨೫ ಇಥನಾಲ್ ಮಿಶ್ರಣ)
ಇ೨೭ (ಶೇ. ೨೭ ಇಥನಾಲ್ ಮಿಶ್ರಣ)
ಇ೩೦ (ಶೇ. ೩೦ ಇಥನಾಲ್ ಮಿಶ್ರಣ)
ರೈತರಿಗೂ ಸಿಗಲಿದೆ ಪರೋಕ್ಷ ಲಾಭ!:
ಇಥನಾಲ್ ಅನ್ನು ಪ್ರಮುಖವಾಗಿ ಕಬ್ಬು, ಜೋಳ ಸೇರಿದಂತೆ ವಿವಿಧ ಕೃಷಿ ತ್ಯಾಜ್ಯ ಹಾಗೂ ಉತ್ಪನ್ನಗಳಿಂದ ತಯಾರಿಸಲಾಗುತ್ತದೆ. ಹೀಗಾಗಿ ದೇಶದಲ್ಲಿ ಇಥನಾಲ್ ಮಿಶ್ರಿತ ಇಂಧನಕ್ಕೆ ಬೇಡಿಕೆ ಹೆಚ್ಚಾದಂತೆಲ್ಲಾ ಕೃಷಿ ಕ್ಷೇತ್ರಕ್ಕೆ ಹೊಸ ಮಾರುಕಟ್ಟೆ ಸೃಷ್ಟಿಯಾಗಲಿದ್ದು, ಇದು ನೇರವಾಗಿ ದೇಶದ ರೈತರ ಆದಾಯ ವೃದ್ಧಿಗೆ ಸಹಕಾರಿಯಾಗಲಿದೆ.
ಗ್ರಾಹಕರ ಮೇಲಿನ ಹೊರೆ ಇಳಿಸಲು ಕಸರತ್ತು:
ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ಹಾಗೂ ಜಾಗತಿಕ ಮಾರುಕಟ್ಟೆಯ ಏರಿಳಿತದಿಂದಾಗಿ ಇತ್ತೀಚೆಗೆ ಇಂಧನ ದರಗಳು ಗಗನಕ್ಕೇರಿದ್ದವು. ಮೇ ತಿಂಗಳ ದ್ವಿತೀಯಾರ್ಧದಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ದರ ಲೀಟರ್ಗೆ ಸುಮಾರು ರೂ. ೭.೫೦ ರಷ್ಟು ಏರಿಕೆಯಾಗಿತ್ತು.
ಈ ಹಿಂದೆ ಜಾಗತಿಕ ತೈಲ ಬೆಲೆ ಏರಿಕೆಯಾದಾಗಲೂ ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಲೀಟರ್ಗೆ ರೂ. ೧೦ ರಷ್ಟು ಕಡಿತಗೊಳಿಸಿತ್ತು. ಇದರಿಂದ ಸರ್ಕಾರಕ್ಕೆ ವಾರ್ಷಿಕವಾಗಿ ರೂ. ೧ ಲಕ್ಷ ಕೋಟಿಗೂ ಅಧಿಕ ಆದಾಯ ನಷ್ಟ ಉಂಟಾಗಿದ್ದರೂ ಗ್ರಾಹಕರ ಹಿತದೃಷ್ಟಿಯಿಂದ ಆ ನಿರ್ಧಾರ ಕೈಗೊಳ್ಳಲಾಗಿತ್ತು. ಇದೀಗ ಇಥನಾಲ್ ಮೇಲಿನ ಸುಂಕ ಮನ್ನಾ ಮಾಡುವ ಮೂಲಕ ಗ್ರಾಹಕರಿಗೆ ಪರ್ಯಾಯ ಇಂಧನದ ಆಯ್ಕೆ ನೀಡಲಾಗುತ್ತಿದೆ.
ಒಂದೇ ಕಲ್ಲಿಗೆ ನಾಲ್ಕು ಹಕ್ಕಿ!:
ಇಥನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಸುಂಕವನ್ನು ಸಂಪೂರ್ಣವಾಗಿ ಮನ್ನಾ ಮಾಡುವ ಮೂಲಕ ಮೋದಿ ಸರ್ಕಾರ ಒಟ್ಟಿಗೆ ನಾಲ್ಕು ಪ್ರಮುಖ ಗುರಿಗಳನ್ನು ಸಾಧಿಸಲು ಮುಂದಾಗಿದೆ.
ಸ್ವಚ್ಛ ಇಂಧನ ಬಳಕೆ ಮತ್ತು ಪರಿಸರ ಮಾಲಿನ್ಯಕ್ಕೆ ಬ್ರೇಕ್.
ಕಚ್ಚಾತೈಲ ಆಮದು ವೆಚ್ಚ ತಗ್ಗಿಸಿ ಇಂಧನ ಭದ್ರತೆ ಸಾಧಿಸುವುದು.
ಕೃಷಿ ಉತ್ಪನ್ನಗಳಿಗೆ ಬೇಡಿಕೆ ಸೃಷ್ಟಿಸಿ ರೈತರ ಆದಾಯ ಹೆಚ್ಚಿಸುವುದು.
ಇಂಧನ ಕ್ಷೇತ್ರದಲ್ಲಿ ’ಆತ್ಮನಿರ್ಭರ ಭಾರತ’ ನಿರ್ಮಾಣ ಮಾಡುವುದು.



