ಅಂತರಗಳು ಕಥೆ ಭಾಗ-8: ಕುಮಾರ್ ಬಡಪ್ಪ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಂದಾಚಾರದ ಕಟ್ಟುಪಾಡುಗಳು, ಸಂಪ್ರದಾಯದ ಸಂಕೋಲೆಗಳು, ನಾನೇಕೆ ಇವುಗಳಿಗೆ ಬದ್ಧನಾಗಬೇಕು, ತಲೆ ತಗ್ಗಿಸಬೇಕಾಗಿರುವುದು ಅವರೇ......ನಾನಲ್ಲ. ಲಲಿತೇ ನಾನು ಸ್ವಪ್ರಯತ್ನದಿಂದ ದಾಟದ ಹೊರತು, ಬಾವಿಯೊಳಗಿನ ಕಪ್ಪೆಗಳಾಗಿ ಜೀವನವಿಡೀ ಕತ್ತಲಲ್ಲಿಯೇ ಸವೆಯಬೇಕಾಗುತ್ತೆ ವಿನಹಃ ಸ್ವೇಚ್ಛೆಯ ಸಾಗರವಾಗಲಿಕ್ಕಂತೂ ಸಾಧ್ಯವಿಲ್ಲ.
ಕಡಲದಂಡೆಗೆ ಅಪ್ಪಳಿಸುವ ಅಲೆಗಳಂತಾಗಿದ್ದ ವೀರೇಶ್ ನ ಮನಸ್ಸು, ದೃಡತೆಯನ್ನು ಕಂಡುಕೊಂಡಂತಾಗಿ,ನಿರಾಳತೆಯಿಂದ ಸಮಸ್ಥಿತಿಗೆ ಮುಂದಾಗಿತ್ತು.
ಕೆಲವು ದಿನ ಆಡಿಕೊಳ್ಳುವವರು ಆಡಿಕೊಳ್ಳಲಿ ಬಿಡಿ, ಬಿದ್ದರೆ ತುಳಿಯುವ, ಎದ್ದರೆ ಮುದುಡಿಕೊಳ್ಳುವ, ಈ ನೀಚ ಸಮಾಜಕ್ಕೇಕೆ ಅಂಜಬೇಕು.
ಇದರಲ್ಲಿ ಲಲಿತೆಯ ತಪ್ಪಾದ್ರೂ ಏನಿದೆ, ವ್ಯವಸ್ತೆಯದೇ ತಪ್ಪು. ಅವಳ ಬದುಕಿನ ನಾವಿಕ ನಾನೇ ಆಗಬೇಕು ಅಸಂಬದ್ಧ ಸಂಪ್ರದಾಯದ ತೆರೆ ಮರೆಯ ಮಾತುಗಳಿಗೆ ತಿಲಾಂಜಲಿ ಇಟ್ಟು, ಅವಳ ಹಣೆಯ ಸಿಂಧೂರ ನಾನಾಗಿಯೇ ಹೊರ ಹೊಮ್ಮಬೇಕು, ಒಬ್ಬ ದಿಟ್ಟೆಯ ಬದುಕಿಗೆ ಗಟ್ಟಿಯಾಗಿ ನಿಲ್ಲುವ ಸಂಸಾರಿಕನಾಗಬೇಕು.
ಯಾರೂ ಏನಾದರೂ ಅರ್ಥೈಸಿಕೊಳ್ಳಲಿ ಚಿಂತೆಯಿಲ್ಲ, ನನ್ನ ಲಲಿತೆಯ ನಿರ್ಧಾರ ಸರಿಯೇ ಇದೆ.
ನನಗಾಗಿ ನೋಡಿದ್ದ ಹೆಣ್ಣವಳು, ಭಾರತಿ ನನ್ನೊಂದಿಗೆ ಅದೆಷ್ಟು ಬಾರಿ ಗೋಗರೆದಿದ್ದು.
ಅಣ್ಣಾ ಅವ್ಳು ಬಡವರು ಅಂತ ನಿರಾಕರಿಸಬೇಡ, ತುಂಬಾ ಮುದ್ದಾದ ಹುಡುಗಿ, ಸಂಪನ್ನೆ, ನನ್ಗೆ ಅತ್ತಿಗೆ ಅಂತ ಆದ್ರೆ ಅವ್ಳೇ ಆಗಬೇಕು ನೋಡು.
ಹೌದು ಭಾರತಿ ಹೇಳಿದ ಹಾಗೆ ಅವಳಿಗೆ ಅನ್ಯಾಯವಾದ್ರೆ ಆ ಪಾಪಕ್ಕೆ ನಾನು ಸಹ ಕಾರಣನೇ, ಅವಳ ಗರತಿಯ ರೂಪ ನನ್ನಲ್ಲಿ ಪರಿಪರಿಯಾಗಿ ಬೇಡಿಕೊಂಡಿದೆ, ತಪ್ಪು ಮಾಡುವಂತವಳಾಗಿದ್ರೆ, ನನ್ನ ಅವಶ್ಯಕತೆಯೇ ಅವಳಿಗಿರಲಿಲ್ಲ.
ಅದೆಷ್ಟು ಬುದ್ಧಿವಂತೆ ಅವಳು, ಆದ ತಪ್ಪನ್ನ ಅದೆಷ್ಟು ವಿಧದಲ್ಲಿ ತಿಳಿ ಹೇಳಿದಳೆಂದರೇ ! ಅಬ್ಬಾ..ಪ್ರತಿ ಮಾತುಗಳೂ ನನ್ನೊಟ್ಟಿಗೆ ಓಟಕ್ಕೆ ನಿಂತ ಕುದುರೆಗಳೇ. ದೇಹವೆಲ್ಲಾ ಹಗುರವಾಗಿ,ಗಾಳಿಯಲ್ಲಿ ತೇಲಾಡಿದಂತಿತ್ತು ವೀರೇಶ್ ಗೆ, ಕನಸಿನ ಬದುಕು ವಾಸ್ತವಕ್ಕೆ ಹತ್ತಿರವಾಗುತ್ತಿರುವ ಸಂಭ್ರಮ.
ರಂಗು ರಂಗಿನ ಚಿತ್ತಾರದ ಕಾಮನಬಿಲ್ಲು ಮೂಡಿದಂತೆ ಬಾಸವಾಗಿ ಮುಗುಳು ನಗೆಯೊಡನೆ ಮನೆಯ ಕಡೆ ನಡೆಯತೊಡಗಿದ.
ಲೇಖನ: ಕುಮಾರ ಬಡಪ್ಪ, ಚಿತ್ರದುರ್ಗ. ನಾಳೆಗೆ.......


