ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ, ಕಾಂಗ್ರೆಸ್ನ ಪ್ರಭಾವಿ ಮುಖಂಡ ಜಮೀರ್ ಅಹ್ಮದ್ ಖಾನ್ ಅವರದ್ದು ಎನ್ನಲಾದ ಆಡಿಯೋವೊಂದು ಭಾರಿ ಸಂಚಲನ ಸೃಷ್ಟಿಸಿದೆ. ಬುಧವಾರವಷ್ಟೇ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಹತ್ತರಿಂದ ಹನ್ನೆರಡು ಮಂದಿ ಶಾಸಕರು ಸಚಿವರಾಗಿ ಸಂಪುಟ ಸೇರಲಿದ್ದಾರೆ ಎಂಬ ಚರ್ಚೆಗಳು ದಟ್ಟವಾಗಿವೆ. ಈ ನಡುವೆ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಜಮೀರ್ ಅಹ್ಮದ್ ಖಾನ್ ಅವರನ್ನು ಗುರಿಯಾಗಿಸಿಕೊಂಡು ಈ ಆಡಿಯೋ ಬಾಂಬ್ ಸಿಡಿಸಿರುವುದು ರಾಜಕೀಯ ವಲಯದಲ್ಲಿ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಆಡಿಯೋ ವಿವಾದದ ಹಿನ್ನೆಲೆ: ದಾವಣಗೆರೆ ಉಪಸಮರದ ಅಸಮಾಧಾನ
ದಾವಣಗೆರೆ ಉಪ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ನೀಡದಿದ್ದಕ್ಕೆ ಭಾರಿ ಅಸಮಾಧಾನ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಪ್ರಮುಖ ಮುಸ್ಲಿಂ ನಾಯಕರು ದಾವಣಗೆರೆಯ ಪ್ರಚಾರದಿಂದ ದೂರ ಉಳಿದಿದ್ದರು. ಇದೀಗ ವೈರಲ್ ಆಗಿರುವ ಆಡಿಯೋ ಈ ಅಸಮಾಧಾನಕ್ಕೆ ಪೂರಕ ಸಾಕ್ಷಿಯಂತಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.
ವೈರಲ್ ಆಡಿಯೋದಲ್ಲೇನಿದೆ?:
ಸ್ಥಳೀಯ ಕಾಂಗ್ರೆಸ್ ಮುಖಂಡ ಮುಹಮ್ಮದ್ ಸಿರಾಜ್ ಜೊತೆ ಜಮೀರ್ ಅಹಮ್ಮದ್ ಮಾತನಾಡಿದ್ದಾರೆ ಎನ್ನಲಾದ ಸಂಭಾಷಣೆಯ ಮುಖ್ಯಾಂಶಗಳು ಹೀಗಿವೆ.
ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಅವರಿಗೆ ಹೆಚ್ಚಿನ ಮತಗಳು ಬೀಳದಂತೆ ನೋಡಿಕೊಳ್ಳಬೇಕು.
ಟಿಕೆಟ್ ಸಿಗದೆ ಬಂಡಾಯ ಎದ್ದು, ನಂತರ ಕಣದಿಂದ ಹಿಂದೆ ಸರಿದಿದ್ದ ಸಾದಿಕ್ ಪೈಲ್ವಾನ್ ಅವರ ವಾರ್ಡ್ನಲ್ಲಿ ಕಾಂಗ್ರೆಸ್ಗೆ ಮತಗಳು ಕಡಿಮೆ ಬರುವಂತೆ ತಂತ್ರ ರೂಪಿಸಬೇಕು.
ಮತದಾರರನ್ನು ಬಲವಂತವಾಗಿ ಮನೆಯಿಂದ ಕರೆತಂದು ಮತದಾನ ಮಾಡಿಸುವ ಅಗತ್ಯವಿಲ್ಲ. ಕಾಂಗ್ರೆಸ್ ಬದಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷೇತರ ಅಭ್ಯರ್ಥಿಗಳಿಗೆ ಮತ ಹಾಕಿಸಬೇಕು ಎಂದು ಆಡಿಯೋದಲ್ಲಿ ಪ್ರಚೋದಿಸಲಾಗಿದೆ ಎನ್ನಲಾಗಿದೆ.
"ಇದು ಎಐ ಸೃಷ್ಟಿಸಿದ ನಕಲಿ ಆಡಿಯೋ": ಜಮೀರ್ ಸವಾಲು:
ತಮ್ಮ ಸಚಿವ ಸ್ಥಾನದ ನಿರೀಕ್ಷೆಗೆ ತಣ್ಣೀರೆರಚಲು ನಡೆದಿರುವ ರಾಜಕೀಯ ಷಡ್ಯಂತ್ರ ಇದಾಗಿದೆ ಎಂದು ಆಕ್ರೋಶ ಹೊರಹಾಕಿರುವ ಜಮೀರ್ ಅಹ್ಮದ್ ಖಾನ್, ಮಾಧ್ಯಮ ಪ್ರಕಟಣೆ ಮೂಲಕ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಜಮೀರ್ ಅಹಮ್ಮದ್ ಖಾನ್ ಅವರ ಪ್ರಕಟಣೆ:
"ರಾಜ್ಯದ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ನನ್ನ ಕುರಿತ ಆಡಿಯೋ ಸಂಪೂರ್ಣ ನಕಲಿಯಾಗಿದೆ. ಪ್ರಸ್ತುತ ಲಭ್ಯವಿರುವ ಅತ್ಯಾಧುನಿಕ ಎಐ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ಕಿಡಿಗೇಡಿಗಳು ನನ್ನ ಧ್ವನಿಯನ್ನು ಸೃಷ್ಟಿಸಿದ್ದಾರೆ. ಮುಂಬರುವ ಸಂಪುಟ ರಚನೆ ಹೊತ್ತಿನಲ್ಲಿ ಗೊಂದಲ ಮೂಡಿಸಲು ನಡೆಸಿರುವ ರಾಜಕೀಯ ಪಿತೂರಿ ಇದಾಗಿದ್ದು, ಸಾರ್ವಜನಿಕರು ಇದನ್ನು ನಂಬಬಾರದು."
ಸೈಬರ್ ಪೊಲೀಸ್ ಠಾಣೆಗೆ ದೂರು, ತನಿಖೆಗೆ ಸಿದ್ಧ:
ತಮ್ಮ ರಾಜಕೀಯ ತೇಜೋವಧೆಗೆ ಯತ್ನಿಸಿರುವವರ ವಿರುದ್ಧ ಕಾನೂನು ಸಮರ ಸಾರಿರುವ ಜಮೀರ್, "ಈ ನಕಲಿ ಆಡಿಯೋವನ್ನು ವೈರಲ್ ಮಾಡಿರುವವರ ಪತ್ತೆಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಲಾಗುವುದು. ಈ ಆಡಿಯೋ ಸತ್ಯಾಸತ್ಯತೆ ಕುರಿತು ಸರ್ಕಾರ ಯಾವುದೇ ಮಟ್ಟದ ತನಿಖೆ ನಡೆಸಿದರೂ ಎದುರಿಸಲು ನಾನು ಸಿದ್ಧನಿದ್ದೇನೆ" ಎಂದು ಸವಾಲು ಹಾಕಿದ್ದಾರೆ.
ಒಟ್ಟಾರೆಯಾಗಿ, ಹೊಸ ಸರ್ಕಾರದ ಸಂಪುಟ ಸಹೋದ್ಯೋಗಿಗಳ ಪಟ್ಟಿ ಫೈನಲ್ ಆಗುವ ಸೂಕ್ಷ್ಮ ಕ್ಷಣದಲ್ಲೇ ಜಮೀರ್ ಅವರ ಮುನಿಸು ಮತ್ತು ಪಕ್ಷ ವಿರೋಧಿ ಚಟುವಟಿಕೆಯ ಆರೋಪ ಹೊತ್ತ ಆಡಿಯೋ ಹೊರಬಂದಿರುವುದು ಕೈ ಪಾಳಯದಲ್ಲಿ ತಲ್ಲಣ ಮೂಡಿಸಿರುವುದಂತೂ ಸುಳ್ಳಲ್ಲ.



