ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಜಗದ್ವಿಖ್ಯಾತ ಸ್ವಾಮಿ ವಿವೇಕಾನಂದರ ಮೇಲೆ ಭಗವಾನ್ ಗೌತಮ ಬುದ್ಧ ಬೀರಿದ ಪ್ರಭಾವ ಅತ್ಯಂತ ಅದ್ಭುತವಾದದ್ದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ತಿಳಿಸಿದರು.
ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ "ಬುದ್ಧ ಪೂರ್ಣಿಮೆ"ಯ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು "ಗೌತಮ ಬುದ್ಧ"ನ ಬಗ್ಗೆ ಹಾಗೂ "ಆತ್ಮೋನ್ನತಿಗೆ ಸೋಪಾನ-ದುಖ" ಎಂಬ ವಿಷಯವಾಗಿ ವಿಶೇಷ ಪ್ರವಚನ ನೀಡಿದರು.
ಬುದ್ಧ ಹುಟ್ಟಿದ್ದು-ಅವನಿಗೆ ಜ್ಞಾನೋದಯವಾಗಿದ್ದು ಆತ ನಿರ್ವಾಣ ಹೊಂದಿದ್ದು ಬುದ್ಧ ಪೂರ್ಣಿಮೆಯ ವಿಶೇಷ ದಿನದಂದು, ಸ್ವಾಮಿ ವಿವೇಕಾನಂದರು ಮೊದಲ-ಕೊನೆಯ ತೀರ್ಥಯಾತ್ರೆಯನ್ನು ಕೈಗೊಂಡಿದ್ದು ಗಯಾಕ್ಷೇತ್ರಕ್ಕೆ, ಬುದ್ಧ ನೀಡಿದ ಆಸೆಯೇ ದುಃಖಕ್ಕೆ ಮೂಲ,ನಿಮಗೆ ನೀವೆ ಬೆಳಕಾಗಿ,ಆತನ ಸಮತ್ವ ಹಾಗೂ ಕಾರುಣ್ಯಪೂರ್ಣ ಸಂದೇಶಗಳು ನಮ್ಮ ಸಾರ್ಥಕ ಬದುಕಿಗೆ ಮಾರ್ಗದರ್ಶನ ನೀಡುತ್ತವೆ ಎಂದರು.
ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ವಿಶೇಷ ಭಜನೆ ಮತ್ತು ದಿವ್ಯತ್ರಯರಿಗೆ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು.
ವಿಶೇಷ ಸತ್ಸಂಗ ಸಭೆಯಲ್ಲಿ ಎಂ ಗೀತಾ ನಾಗರಾಜ್, ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ, ವನಜಾಕ್ಷಿ ಮೋಹನ್, ಗೀತಾ ವೆಂಕಟೇಶರೆಡ್ಡಿ, ಹನ್ವಿಕಾ, ಯತೀಶ್ ಎಂ ಸಿದ್ದಾಪುರ, ಕಾವೇರಿ ಸುರೇಶ್, ಮಾನ್ಯ, ಡಾ.ಭೂಮಿಕಾ, ಸುಮನಾ,ಶ್ರೀಜನಿ ಸೇರಿದಂತೆ ಸದ್ಭಕ್ತರು ಪಾಲ್ಗೊಂಡಿದ್ದರು.


