ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ನಗರದ ಹೊರ ವಲಯ ದಾವಣಗೆರೆ ರಸ್ತೆಯಲ್ಲಿರುವ ಛಲವಾದಿ ಗುರು ಪೀಠದ ಜಮೀನನ್ನು ಹೊಸ ತಿದ್ದುಪಡಿ ಮೂಲಕ ಛಲವಾದಿ ಮಹಾಸಭಾ ಛಲವಾದಿ ಗುರುಪೀಠದ ಟ್ರಸ್ಟ್ಗೆ ಹಸ್ತಾಂತರಿಸುವುದರ ಮೂಲಕ ಕಳೆದ ಹತ್ತು ವರ್ಷಗಳಿಂದ ಕಗ್ಗಂಟಾಗಿ ಉಳಿದಿದ್ದ ವಿವಾದಕ್ಕೆ ಬಸವನಾಗಿದೇವಸ್ವಾಮಿ ಅಂತ್ಯ ಹಾಡಿದರು.
ಪ್ರವಾಸಿ ಮಂದಿರದಲ್ಲಿ ನಡೆದ ಛಲವಾದಿ ಸಮಾಜದ ಮುಖಂಡರುಗಳ ಸಭೆಯಲ್ಲಿ ಗುರುಪೀಠದ ಜಮೀನನ್ನು ಟ್ರಸ್ಟ್ಗೆ ವರ್ಗಾಯಿಸಿ ನಂತರ ಮಾತನಾಡಿದ ಛಲವಾದಿ ಗುರುಪೀಠದ ಬಸವನಾಗಿದೇವಸ್ವಾಮಿ ಇದೊಂದು ಐತಿಹಾಸಕ ತೀರ್ಮಾನವಾಗಿದೆ. ಮನಃಪೂರ್ವಕವಾಗಿ ಜಮೀನನ್ನು ಟ್ರಸ್ಟ್ಗೆ ಹಸ್ತಾಂತರಿಸಿದ್ದೇನೆ. ಇನ್ನು ಮುಂದೆ ಮಠದ ಅಭಿವೃದ್ದಿ ಕಾರ್ಯಗಳು ಸುಸೂತ್ರವಾಗಿ ನಡೆಯಲು ನನ್ನದೇನು ತಕರಾರಿಲ್ಲ. ನೆಲಮಂಗಲದ ಬಳಿ ಸರ್ಕಾರ ೩೨ ಗುಂಟೆ ಜಮೀನನ್ನು ಗುರುಪೀಠಕ್ಕೆ ನೀಡಿದೆ. ಅಲ್ಲಿ ಶಾಖಾ ಮಠ ಕಟ್ಟಲು ನಿಮ್ಮೆಲ್ಲರ ಸಹಕಾರ ಮುಖ್ಯ. ಜಮೀನು ಹಸ್ತಾಂತರಕ್ಕೆ ಸಂಬಂಧಿಸಿದಂತೆ ಜನಾಂಗದ ಹಿರಿಯರಾದ ಮಾಜಿ ರಾಜ್ಯಸಭೆ ಸದಸ್ಯ ಹೆಚ್.ಹನಮಂತಪ್ಪ ಸೇರಿದಂತೆ ಅನೇಕರು ನನ್ನ ಜೊತೆ ಹಲವಾರು ಬಾರಿ ಚರ್ಚಿಸಿದ್ದರ ಪರಿಣಾಮವಾಗಿ ಸುದಿನ ಕೂಡಿ ಬಂದಿದೆ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಅನುದಾನ ತಂದು ಮಠದ ಅಭಿವೃದ್ದಿಗೆ ಕೈಜೋಡಿಸೋಣ ಎಂದು ವಿನಂತಿಸಿದರು.
ಛಲವಾದಿ ಮಹಾಸಭಾ ಗುರುಪೀಠದ ಟ್ರಸ್ಟ್ನ ಗೌರವಾಧ್ಯಕ್ಷ ಹೆಚ್.ಹನುಮಂತಪ್ಪನವರು ಮಾತನಾಡಿ ಡಿ.ವಿ.ಸದಾನಂದಗೌಡರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಹದಿನೇಳು ಮಠಗಳಿಗೆ ಹಣ ಮಂಜೂರು ಮಾಡಿಸಿದ್ದೆ. ನಮ್ಮ ಜನಾಂಗದ ಮಠ ಉಳಿದ ಎಲ್ಲಾ ಮಠಗಳಂತೆ ಅಭಿವೃದ್ದಿಯಾಗಬೇಕೆಂಬುದು ನನ್ನ ಆಸೆ. ಇನ್ನು ಮುಂದಾದರೂ ಮುನಿಸು, ಭಿನ್ನಾಭಿಪ್ರಾಯ ಬೇಡ. ಸರ್ಕಾರಕ್ಕೆ ವಾಪಸ್ ಹೋಗಿರುವ ಐದುವರೆ ಕೋಟಿ ರೂ. ಅನುದಾನವನ್ನು ಮರಳಿ ಪಡೆದುಕೊಂಡು ಮಠ ಕಟ್ಟೋಣ ಎಂದು ಹೇಳಿದರು.
ಛಲವಾದಿ ಮಹಾಸಭಾ ಗುರುಪೀಠದ ಟ್ರಸ್ಟ್ನ ಅಧ್ಯಕ್ಷ ಎನ್.ಲಕ್ಷ್ಮಿನರಸಯ್ಯ ಮಾತನಾಡುತ್ತ ಹತ್ತು ವರ್ಷಗಳ ಬಳಿಕ ಜಮೀನು ಹೊಸ ತಿದ್ದುಪಡಿಯೊಂದಿಗೆ ಟ್ರಸ್ಟ್ಗೆ ನೊಂದಣಿ ಮಾಡಿಸುತ್ತಿರುವುದು ಅತ್ಯಂತ ಸಂತೋಷವೆನಿಸುತ್ತಿದೆ. ಸರ್ಕಾರಕ್ಕೆ ಹಿಂದಿರುಗಿರುವ ಅನುದಾನವನ್ನು ಮರಳಿ ತರಲು ಜನಾಂಗದ ಹಿರಿಯರಾದ ಹೆಚ್.ಹನುಮಂತಪ್ಪನವರ ಪರಿಶ್ರಮ ಬೇಕು. ನೆಲಮಂಗಲದ ಬಳಿ ಸರ್ಕಾರ ಮಂಜೂರು ಮಾಡಿರುವ ೩೨ ಗುಂಟೆ ಜಮೀನಿನಲ್ಲಿ ಶಾಖಾ ಮಠ ಕಟ್ಟಲು ಸಮಾಜದ ಎಲ್ಲರೂ ಸಹಾಯ ಹಸ್ತ ಚಾಚುವಂತೆ ಮನವಿ ಮಾಡಿದರು.
ಟ್ರಸ್ಟ್ನ ಖಜಾಂಚಿ ಹೆಚ್.ಸಿ.ನಿರಂಜನಮೂರ್ತಿ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಹಿರಿಯರು ಎಷ್ಟು ಸಂತೋಷ ಪಟ್ಟರೋ ಅದಕ್ಕಿಂತಲೂ ಈಗ ಹೆಚ್ಚಿನ ಖುಷಿಯಾಗಿದೆ. ಬಸವನಾಗಿದೇವಸ್ವಾಮೀಜಿ ಗುರುಪೀಠದ ಹೆಸರಿನಲ್ಲಿದ್ದ ಜಮೀನನ್ನು ಟ್ರಸ್ಟ್ಗೆ ಹಸ್ತಾಂತರಿಸಿ ನೊಂದಾಯಿಸಿರುವುದು ನಮಗೆಲ್ಲರಿಗೂ ಸಮಾಧಾನ ತಂದಿದೆ.
ಸರ್ಕಾರದಿಂದ ಮಂಜೂರಾಗಿರುವ ಹಣ ಪಡೆದುಕೊಳ್ಳದಿದ್ದರೆ ನಮಗಿಂತಲೂ ನತದೃಷ್ಟರು ಮತ್ಯಾರು ಇಲ್ಲ. ಎಲ್ಲರೂ ಸೇರಿ ಒಮ್ಮತಕ್ಕೆ ಬಂದ ಮೇಲೆ ಮಠದ ಅಭಿವೃದ್ದಿಗೆ ಶ್ರಮಿಸೋಣ ಎಂದರು.
ಛಲವಾದಿ ಮಹಾಸಭಾ ಗುರುಪೀಠದ ಟ್ರಸ್ಟ್ನ ಕಾರ್ಯದರ್ಶಿ ಜಿ.ಹೆಚ್.ಮೋಹನ್ ಮಾತನಾಡಿ ಸ್ವಾಮೀಜಿ ಹೆಸರಿನಲ್ಲಿದ್ದ ಜಮೀನು ಹೊಸ ತಿದ್ದುಪಡಿಯೊಂದಿಗೆ ಟ್ರಸ್ಟ್ಗೆ ನೊಂದಣಿಯಾಗಿರುವುದು ಮುಂದೆ ಗುರುಪೀಠದ ಅಭಿವೃದ್ದಿಗೆ ದಾರಿ ಸುಗಮವಾಗಿದೆ. ಬಸವನಾಗಿದೇವಸ್ವಾಮಿರವರು ತೆಗೆದುಕೊಂಡಿರುವ ನಿರ್ಧಾರ ನಮಗೆಲ್ಲರಿಗೂ ಸಂತಸವನ್ನುಂಟು ಮಾಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಟ್ರಸ್ಟ್ನ ಉಪಾಧ್ಯಕ್ಷ ಡಾ.ಪಿ.ವಿ.ಶ್ರೀಧರಮೂರ್ತಿ, ಸಹ ಕಾರ್ಯದರ್ಶಿ ನಟರಾಜ್, ಟ್ರಸ್ಟಿಗಳಾದ ಗುರುಮೂರ್ತಿ, ಎಸ್.ಎನ್.ರವಿಕುಮಾರ್, ನಾಗರಾಜ್, ನ್ಯಾಯವಾದಿಗಳಾದ ಬಸವರಾಜ್, ಪರಮೇಶ್ ಹಾಗೂ ಲಕ್ಷ್ಮಣ, ಮಂಜುಳಮ್ಮ ಇನ್ನು ಅನೇಕರು ಸಭೆಯಲ್ಲಿ ಭಾಗವಹಿಸಿದ್ದರು.



