ವಿಶೇಷ ವರದಿ:
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
"ಅಪಾಯ ಯಾರಿಗಾದರೂ ಕಾಯ್ದಿಟ್ಟ ಬುತ್ತಿ..." ಎನ್ನುವ ಮಾತು ಹಿರಿಯೂರು ನಗರದ ಲಕ್ಕವ್ವನಹಳ್ಳಿ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರ ದಿನನಿತ್ಯದ ಆತಂಕಕ್ಕೆ ಕನ್ನಡಿ ಹಿಡಿದಂತಿದೆ.
ಇಲ್ಲಿನ ವಾಗ್ದೇವಿ ಶಾಲೆಯ ತಿರುವಿನಲ್ಲಿ ಸೃಷ್ಟಿಯಾಗಿರುವ ಬೃಹತ್ ಗಾತ್ರದ ಗುಂಡಿ ಕೇವಲ ರಸ್ತೆ ಹದಗೆಟ್ಟಿರುವುದನ್ನು ತೋರಿಸುತ್ತಿಲ್ಲ, ಬದಲಾಗಿ ದಿನನಿತ್ಯ ನೂರಾರು ಜೀವಗಳ ಜೊತೆ ಚೆಲ್ಲಾಟವಾಡುತ್ತಿದೆ.
ಚಿತ್ರದಲ್ಲಿ ಸ್ಪಷ್ಟವಾಗಿ ಕಾಣುವಂತೆ, ರಸ್ತೆಯ ಒಂದು ಬದಿಯಲ್ಲಿ ದೊಡ್ಡದಾದ ಕಂದಕವೇ ನಿರ್ಮಾಣವಾಗಿದೆ. ಕಾಂಕ್ರೀಟ್ ಸ್ಲ್ಯಾಬ್ಗಳು ಒಡೆದು, ಮಣ್ಣು ಕುಸಿದು, ತೆರೆದುಕೊಂಡಿರುವ ಈ ಅಪಾಯಕಾರಿ ಗುಂಡಿ ಯಾವುದೇ ಮುನ್ನೆಚ್ಚರಿಕೆ ಫಲಕಗಳಿಲ್ಲದೆ ಹಾಗೇ ಬಾಯಿ ಬಿಟ್ಟು ನಿಂತಿದೆ.
ಹತ್ತಾರು ಹಳ್ಳಿಗಳ ಸಂಪರ್ಕ ಕೊಂಡಿ ಈ ರಸ್ತೆ:
ಇದು ಕೇವಲ ನಗರದ ಒಂದು ಗಲ್ಲಿಯ ರಸ್ತೆಯಲ್ಲ. ಈ ಮಾರ್ಗದ ಮೂಲಕವೇ ಪ್ರತಿನಿತ್ಯ ವಾಗ್ದೇವಿ ಶಾಲೆ, ಸಿಎಂ ಲೇಔಟ್ ಸೇರಿದಂತೆ ವಿವಿಧ ಬಡಾವಣೆಗಳು ಹಾಗೂ ಕೂನಿಕೆರೆ, ಲಕ್ಕವ್ವನಹಳ್ಳಿ, ದೊಡ್ಡಘಟ್ಟ, ಕುರುಬರಹಳ್ಳಿ, ಪರಮೇನಹಳ್ಳಿ ಸೇರಿದಂತೆ ಹತ್ತಾರು ಹಳ್ಳಿಗಳ ಸಾವಿರಾರು ಜನರು ಸಂಪರ್ಕ ಸಾಧಿಸುಲ ಮಾರ್ಗವಾಗಿದೆ.
ಶಾಲಾ ಮಕ್ಕಳು, ನಗರವಾಸಿಗಳು, ರೈತರು, ದ್ವಿಚಕ್ರ ವಾಹನ ಸವಾರರು, ದಿನಗೂಲಿ ನೌಕರರು ಇದೇ ರಸ್ತೆಯನ್ನು ನೆಚ್ಚಿಕೊಂಡು ಜೀವ ಭಯದಲ್ಲಿ ಸಂಚರಿಸುತ್ತಿದ್ದಾರೆ.

ಶಾಲಾ ಮಕ್ಕಳ ಜೀವಕ್ಕೆ ನಿರಂತರ ಆತಂಕಛ
ಈ ತಿರುವಿನಲ್ಲಿಯೇ ವಾಗ್ದೇವಿ ಶಾಲೆ ಇರುವುದರಿಂದ ಪ್ರತಿದಿನ ನೂರಾರು ಪುಟ್ಟ ಮಕ್ಕಳು ಹಾಗೂ ಶಾಲಾ ಬಸ್ಗಳು, ಆಟೋಗಳು, ಬೈಕ್ ಗಳು ಇದೇ ಮಾರ್ಗದಲ್ಲಿ ಸಂಚರಿಸಿ ಶಾಲೆಗೆ ಹೋಗಬೇಕಿದೆ. ಈ ರಸ್ತೆ ಈಗಾಗಲೇ ಕಿರಿದಾಗಿದ್ದು, ವಾಹನಗಳು ಒಂದನ್ನೊಂದು ದಾಟಬೇಕಾದರೆ ಅಥವಾ ಎದುರುಗಡೆ ವಾಹನ ಬಂದರೆ ಈ ಗುಂಡಿಯ ಪಕ್ಕದಲ್ಲೇ ಸಾಗಬೇಕು. ಆಕಸ್ಮಿಕವಾಗಿ ನಿಯಂತ್ರಣ ತಪ್ಪಿದರೆ ಶಾಲಾ ಬಸ್ಸುಗಳಾಗಲಿ ಅಥವಾ ಸಾರ್ವಜನಿಕರಾಗಲಿ ಈ 'ಮೃತ್ಯುಕೂಪ'ಕ್ಕೆ ಬೀಳುವುದು ಗ್ಯಾರಂಟಿ. ರಾತ್ರಿ ವೇಳೆಯಲ್ಲಂತೂ ಇಲ್ಲಿ ಸಂಚರಿಸುವುದು ಸಾಹಸವೇ ಸರಿ.
ಸಾರ್ವಜನಿಕರ ತೀವ್ರ ಆಕ್ರೋಶ: ಅಧಿಕಾರಿಗಳೇ ಇನ್ನಾದರೂ ಎಚ್ಚೆತ್ತುಕೊಳ್ಳಿ!"ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳದ ಅಧಿಕಾರಿಗಳು, ಅಪಘಾತ ನಡೆದು ಜೀವ ಹೋದ ಮೇಲೆ ಪರಿಹಾರ ಕೊಡುವುದರಲ್ಲಿ ಬ್ಯುಸಿಯಾಗುತ್ತಾರೆ" ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಾರ್ವಜನಿಕರ ಆಗ್ರಹ:
ಹಿರಿಯೂರು ನಗರದಿಂದ ಲಕ್ಕವ್ವನಹಳ್ಳಿ ಮಾರ್ಗವಾಗಿ ವಿವಿಪುರಕ್ಕೆ ಹೋಗುವ ಪ್ರಮುಖ ರಸ್ತೆಯಾಗಿದ್ದು ಲೋಕೋಪಯೋಗಿ ಇಲಾಖೆಗೆ ಸೇರುವ ಸಾಧ್ಯತೆ ಹೆಚ್ಚಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾಗಲಿ ಅಥವಾ ನಗರಸಭೆಯ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ಈ ಬೃಹತ್ ಗುಂಡಿಯನ್ನು ಮುಚ್ಚಿ, ಶಾಶ್ವತವಾಗಿ ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕು. ಶಾಲಾ ಮಕ್ಕಳು ಮತ್ತು ಸಾರ್ವಜನಿಕರ ಪ್ರಾಣ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕಿದೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ರಸ್ತೆಗೆ ಕಾಯಕಲ್ಪ ನೀಡುತ್ತಾರಾ? ಅಥವಾ ದೊಡ್ಡ ಅನಾಹುತಕ್ಕೆ ಕಾಯುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.



