ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ಪಕ್ಷದಲ್ಲಿ ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಅವರು ರಾಜ್ಯ ರಾಜಕಾರಣಕ್ಕೆ ಬರುವುದರಲ್ಲಿ ತಪ್ಪೇನಿಲ್ಲ. ಯಾರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ತೀರ್ಮಾನ ಮಾಡುವವರು ಎಐಸಿಸಿ ಅಧ್ಯಕ್ಷರು. ಹಾಗಾಗಿ ಅವರು ರಾಜ್ಯ ರಾಜಕಾರಣಕ್ಕೆ ಬರುತ್ತೇನೆ ಅಂತ ಹೇಳಿದರೆ, ತಪ್ಪು ಅಂತ ಯಾರೂ ಅರ್ಥೈಸಬಾರದು ಎಂದು ಡಾ. ಜಿ. ಪರಮೇಶ್ವರ್ ಕಿಳಿಸಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಷ್ಟ್ರ ರಾಜಕಾರಣದಲ್ಲಿ ಖರ್ಗೆಯವರು ಅತ್ಯಂತ ಹಿರಿಯ ಮುಖಂಡರು. ಅದನ್ನು ಪರಿಗಣಿಸಬೇಕಾಗುತ್ತದೆ. ಅವರ ಹೇಳಿಕೆಯ ಮೇಲೆ ಟೀಕೆ ಮಾಡುವುದು ಅಷ್ಟೊಂದು ಸರಿಯಲ್ಲ. ಎಲ್ಲ ಹುದ್ದೆಗಳಿಗೂ ಅವರು ಸಮರ್ಥರಿದ್ದಾರೆ ಎಂದು ತಿಳಿಸಿದರು.
ಖರ್ಗೆ ಅವರು 50 ವರ್ಷ ಸುದೀರ್ಘವಾದ ರಾಜಕಾರಣ ಮಾಡಿರುವುದರಿಂದ ಅಪಾರ ಅನುಭವವಿದೆ. ಅವರ ಹೇಳಿಕೆಯನ್ನು ತಪ್ಪಾಗಿ ಭಾವಿಸುವುದು ಸರಿಯಲ್ಲ. ಅವರ ಬಗ್ಗೆ ಈವರೆಗೆ ಮಾತನಾಡಿರುವವರು, ಅವರ ಹಂತಕ್ಕೆ ತಲುಪಿಲ್ಲ ಎಂದು ತಿಳಿಸಿದರು.
ಮುಂದಿನ ಎರಡೂವರೆ ವರ್ಷಗಳಲ್ಲಿ ಕ್ಷೇತ್ರವಾರು ಏನೆಲ್ಲ ಅಭಿವೃದ್ಧಿ ಮಾಡಲು ಸಾಧ್ಯವಿದೆ ಎಂಬುದರ ಕುರಿತು ಮುಖ್ಯಮಂತ್ರಿಯವರು ಕರೆದಿರುವ ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಪರಮೇಶ್ವರ್ ತಿಳಿಸಿದರು. ಇಂದಿನಿಂದ ನಮ್ಮ ಪಕ್ಷದ ಶಾಸಕರುಗಳ ಜೊತೆ ಮುಖ್ಯಮಂತ್ರಿಯವರು ಜಿಲ್ಲಾವಾರು ಸಭೆ ನಡೆಸಲಿದ್ದಾರೆ.
ಶಾಸಕರುಗಳಿಗೆ 50 ಕೋಟಿ ರೂ. ಅನುದಾನ ನೀಡಲು ತೀರ್ಮಾನ ಮಾಡಿದ್ದಾರೆ. ಬೇರೆ ಅಭಿವೃದ್ಧಿ ಕಾರ್ಯಗಳು, ಪಕ್ಷದ ಸಂಘಟನೆಯ ಬಗ್ಗೆ ಮಾತನಾಡುತ್ತಾರೆ. ಇದು ಹೊಸದೇನೂ ಅಲ್ಲ. ಹಿಂದೆಯೂ ಕೂಡ 2013 ರಿಂದ 2018ರವರೆಗೆ ಕೆಪಿಸಿಸಿ ಕಚೇರಿಯಲ್ಲಿ ಸಭೆ ಮಾಡಿದ್ದರು. ನಾನು ಆಗ ಅಧ್ಯಕ್ಷನಾಗಿದ್ದೆ. ನಾವೆಲ್ಲ ಶಾಸಕರುಗಳ ಜೊತೆ ಸಮಸ್ಯೆಗಳನ್ನು ಆಲಿಸಿದ್ದೆವು ಎಂದು ತಿಳಿಸಿದರು.
ಸಭೆಯಲ್ಲಿ ಡಿ. ಕೆ. ಶಿವಕುಮಾರ್ ಅವರು ಇರುತ್ತಾರೆ ಎಂದಿದ್ದಾರೆ. ಸಭೆ ನಡೆಸುವ ಕುರಿತು ಎಐಸಿಸಿ ಅಧ್ಯಕ್ಷರು ನಮ್ಮ ಪಕ್ಷದ ಸಂಘಟನೆಯ ಬಗ್ಗೆ ಹೇಳದಿದ್ದರೆ ಮತ್ತೇನು ಹೇಳುತ್ತಾರೆ. ಸಭೆ ನಡೆಸಲು ಅವರು ಸೂಚನೆ ಕೊಟ್ಟಿದ್ದರೆ ತಪ್ಪೇನೂ ಇಲ್ಲ. ಚುನಾವಣೆ ಸಂದರ್ಭದಲ್ಲಿ ಪಕ್ಷ ಎಂದುಕೊಂಡು ಜನಗಳ ಮುಂದೆ ಹೋಗಿದ್ದೇವೆ. ಆಗ ಜನಗಳಿಗೆ ಭರವಸೆಗಳನ್ನು ಕೊಟ್ಟಿದ್ದೇವೆ. ಅದೆಲ್ಲವನ್ನು ಪಕ್ಷ ರೆಗ್ಯೂಲೆಟ್ ಮಾಡಬೇಕಲ್ಲವೆ. ಕೇಳುವುದರಲ್ಲಿ ತಪ್ಪೇನಿದೆ? ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದರು.


