ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಂಗಾರು ಆರಂಭದಲ್ಲೇ ಕೈಕೊಟ್ಟಿರುವುದು ಮತ್ತು ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿರುವುದನ್ನು ಉಲ್ಲೇಖಿಸಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೇವಲ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮತ್ತು ಪೋಸ್ ನೀಡುವುದರಿಂದ ಬೆಂಗಳೂರಿನ ದಾಹ ತೀರುವುದಿಲ್ಲ ಎಂದು ಅವರು ಸಚಿವ ಕೃಷ್ಣ ಬೈರೇಗೌಡ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿರುವ ಅವರು, ರಾಜಧಾನಿಯ ಕುಡಿಯುವ ನೀರಿನ ಭೀಕರ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಜಲಮಂಡಳಿಯ ಆತಂಕ: ಅರ್ಧಕ್ಕೆ ಕುಸಿದ ನೀರಿನ ಸಂಗ್ರಹ
"ಕೆಆರ್ಎಸ್ ಮತ್ತು ಕಬಿನಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಳೆದ ವರ್ಷಕ್ಕಿಂತ ಅರ್ಧದಷ್ಟು ಕುಸಿದಿದೆ. ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂದರೆ, ಬೆಂಗಳೂರು ಜಲಮಂಡಳಿಯೇ ಈಗ ಆತಂಕಗೊಂಡು ಕಾವೇರಿ ನಿಗಮಕ್ಕೆ 9.56 ಟಿಎಂಸಿ ನೀರು ಕಾಯ್ದಿರಿಸುವಂತೆ ಪತ್ರ ಬರೆಯುತ್ತಿದೆ. ರಾಜಧಾನಿಗೆ ಮುಂದಿನ ದಿನಗಳಲ್ಲಿ ಕಾದಿರುವ ಕುಡಿಯುವ ನೀರಿನ ಭೀಕರ ಪರಿಸ್ಥಿತಿಯ ಅರಿವು ಸರ್ಕಾರಕ್ಕೆ ಇದೆಯೇ?" ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ಟ್ಯಾಂಕರ್ ಮಾಫಿಯಾಗೆ ಜನಸಾಮಾನ್ಯರ ಬಲಿ?
ಕಳೆದ ವರ್ಷದ ಪರಿಸ್ಥಿತಿಯನ್ನು ನೆನಪಿಸಿದ ಅವರು, "ಕಳೆದ ಬಾರಿಯೂ ಸರ್ಕಾರ ಕಣ್ಣುಮುಚ್ಚಿ ಕುಳಿತಿದ್ದರಿಂದ ಇಡೀ ಬೆಂಗಳೂರು ಟ್ಯಾಂಕರ್ ಮಾಫಿಯಾ ಕೈಗೆ ಸಿಲುಕಿ ಜನಸಾಮಾನ್ಯರು ಲೂಟಿಯಾಗಿದ್ದರು. ಈ ಬಾರಿಯೂ ಯಾವುದೇ ಪೂರ್ವಸಿದ್ಧತೆ ಮಾಡಿಕೊಳ್ಳದೆ ಕಾಲಹರಣ ಮಾಡುತ್ತಿರುವುದನ್ನು ನೋಡಿದರೆ, ಮತ್ತೊಮ್ಮೆ ಟ್ಯಾಂಕರ್ ಮಾಫಿಯಾದ ಜೇಬು ತುಂಬಿಸಲು ಬೆಂಗಳೂರಿಗರನ್ನು ಬಲಿಪಶು ಮಾಡಲು ಹೊರಟಿದ್ದೀರಾ?" ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಸರ್ಕಾರಕ್ಕೆ ಆರ್. ಅಶೋಕ್ ನೇರ ಪ್ರಶ್ನೆಗಳು:
ಬೆಂಗಳೂರು ಅಭಿವೃದ್ಧಿ ಸಚಿವರನ್ನು ಉಲ್ಲೇಖಿಸಿ ಆರ್. ಅಶೋಕ್ ಅವರು ಪ್ರಮುಖವಾಗಿ ಎರಡು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಜಲಮಂಡಳಿಯ ಈ ಗಂಭೀರ ಆತಂಕಕ್ಕೆ ಮತ್ತು ನೀರಿನ ಕೊರತೆಗೆ ಸರ್ಕಾರದ ಪೂರ್ವಸಿದ್ಧತೆ ಏನು?. ಸುಮಾರು 1.50 ಕೋಟಿ ಜನಸಂಖ್ಯೆ ಇರುವ ಬೆಂಗಳೂರಿಗೆ ಪರ್ಯಾಯ ನೀರಿನ ವ್ಯವಸ್ಥೆ ಮಾಡಲು ರೂಪಿಸಿರುವ ಯೋಜನೆಗಳೇನು?.
"ಕ್ಯಾಮೆರಾ ನಾಟಕ ನಿಲ್ಲಿಸಿ, ಮುನ್ನೆಚ್ಚರಿಕೆ ವಹಿಸಿ"
"ಕ್ಯಾಮೆರಾ ಮುಂದೆ ಬಿಲ್ಡಪ್ ನಾಟಕ ಆಡುವುದನ್ನು ನಿಲ್ಲಿಸಿ. ಇಡೀ ಬೆಂಗಳೂರು ನೀರಿಲ್ಲದೆ ತತ್ತರಿಸುವ ಮುನ್ನವೇ ಎಚ್ಚೆತ್ತುಕೊಂಡು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಿ. ಜನಸಾಮಾನ್ಯರನ್ನು ಮತ್ತೊಮ್ಮೆ ಟ್ಯಾಂಕರ್ ಮಾಫಿಯಾದ ದಬ್ಬಾಳಿಕೆಗೆ ತಳ್ಳಿದರೆ, ಸಾರ್ವಜನಿಕರು ನಿಮ್ಮ ಮನೆ ಹಾಗೂ ಕಚೇರಿಗಳಿಗೆ ಮುತ್ತಿಗೆ ಹಾಕುವುದು ನಿಶ್ಚಿತ," ಎಂದು ಆರ್. ಅಶೋಕ್ ಅವರು ಸರ್ಕಾರಕ್ಕೆ ಕಠಿಣ ಎಚ್ಚರಿಕೆ ನೀಡಿದ್ದಾರೆ.



