ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದಲ್ಲಿ ಗುಂಡಿಗಳಿಂದ ಕೂಡಿದ ರಸ್ತೆ ಹಾಳು ಬಿದ್ದ ಚರಂಡಿ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳ ನ್ನು ಶೀಘ್ರ ಸರಿಪಡಿಸುವಂತೆ ಒತ್ತಾಯಿಸಿ ತಾಲೂಕು ಕನ್ನಡ ಪಕ್ಷದ ವತಿಯಿಂದ ನಗರಸಭೆ ಪೌರಯುಕ್ತರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಪತ್ರ ಸಲ್ಲಿಸಿ ರಾಜ್ಯ ಉಪಾಧ್ಯಕ್ಷರಾದ ಸಂಜೀವ್ ನಾಯಕ್ ಮಾತನಾಡಿ ನಗರದ 14ನೇ ವಾರ್ಡ್ ವಿಶ್ವೇಶ್ವರಯ್ಯ ವೃತ್ತದ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಸಮೀಪ ಕಳೆದ ಯುಗಾದಿ ಹಬ್ಬದಂದು ರಸ್ತೆ ಬದಿಯ ಮರವೊಂದು ಬಿದ್ದು ದೇವಾಲಯ ಪಕ್ಕದ ಚರಂಡಿ ಸಂಪೂರ್ಣ ಹಾಳಾಗಿದೆ. ಜೊತೆಗೆ ಇಲ್ಲಿನ ರಸ್ತೆಯೂ ಸಹಾ ಗುಂಡಿ ಬಿದ್ದು ಅವ್ಯವಸ್ಥೆಯುoಟಾಗಿದೆ. ಈ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಿದ್ಯಾರ್ಥಿಗಳು, ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರು ಸಂಚರಿಸುತ್ತಾರೆ. ರಸ್ತೆ ಹಾಗೂ ಚರಂಡಿ ದುರಸ್ಥಿಗಾಗಿ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಜೊತೆಗೆ ಸಂಬಂಧ ಪಟ್ಟವರು. ಅವ್ಯವಸ್ಥೆಯನ್ನು ನೋಡಿಯೂ ನೋಡದಂತಿರುವುದು ಬೇಸರದ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಂಗಪ್ಪ ವೃತ್ತದಿಂದ ಗಾಂಧಿ ಚೌಕದ ಮೂಲಕ ಅಯ್ಯಪ್ಪ ಸ್ವಾಮಿ ದೇವಾಲಯದ ವರೆಗಿನ ಒಳಚರಂಡಿ ಕಾಮಗಾರಿ ಆಮೇಗತಿಯಲ್ಲಿ ನಡೆಯುತ್ತಿದೆ. ಸುಮಾರು ಹತ್ತು ತಿಂಗಳದರೂ ಕಾಮಗಾರಿ ಪೂರ್ಣ ಗೊಂಡಿಲ್ಲ. ಈ ರಸ್ತೆಯಲ್ಲಿ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ನೆಲಮಂಗಲ, ಹಿಂದೂಪುರ ಸೇರಿದಂತೆ ಹಲವು ಜಿಲ್ಲಾ ತಾಲೂಕುಗಳ ಸರ್ಕಾರಿ ಹಾಗೂ ಖಾಸಗಿ ವಾಹನ ಗಳ ಸಂಚಾರವಿದ್ದು ಸಾರ್ವಜನಿಕರಿಗೆ ವಾಹನಗಳ ಸಂಚಾರದಿಂದಾಗಿ ಅಪೂರ್ಣಗೊಂಡ ಕಾಮಗಾರಿಯ ದೂಳಿನಿಂದಾಗಿ ತುಂಬಾ ತೊಂದರೆಯಾಗಿದೆ. ಈ ರಸ್ತೆಯಲ್ಲಿ ಹತ್ತಾರು ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಸಂಚರಿಸಲಿದ್ದು ರಸ್ತೆಯ ದೂಳಿನ ಅವಾಂತರದಿಂದಾಗಿ ಕಿರಿಕಿರಿ ಉಂಟಾಗುತ್ತಿದೆ. ಈ ಕೂಡಲೇ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಇದಲ್ಲದೆ ನಗರದ ಹಲವಾರು ವಾರ್ಡ್ ಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಯಿಂದಾಗಿ ನಾಗರಿಕರು ಪರದಾಡುವಂತಾಗಿದೆ. ನಗರಸಭೆ ಅಧಿಕಾರಿಗಳು ಸಾರ್ವಜನಿಕರ ತೊಂದರೆಯನ್ನು ತುರ್ತಾಗಿ ಸರಿಪಡಿಸಬೇಕು ಎಂದು ಹೇಳಿದರು.
ಕನ್ನಡಪಕ್ಷದ ರಾಜ್ಯ ಕಾರ್ಯದರ್ಶಿ ಡಿ. ಪಿ. ಆಂಜನೇಯ, ತಾಲೂಕು ಅಧ್ಯಕ್ಷ ವೆಂಕಟೇಶ್, ಗೌರವಾಧ್ಯಕ್ಷ ರಂಗನಾಥ್, ವಿ. ಪರಮೇಶ್, ಮುನಿಪಾಪಯ್ಯ, ಮುನಿಸ್ವಾಮಿ, ಚುರ್ಚಪ್ಪ, ಮುರುಗೇಶ್, ನಾಗರಾಜ್, ಜೀವನಗೌಡ, ಪ್ರಭಾಕರ್, ರಾಮಣ್ಣ, ನರಸಿಂಹಮೂರ್ತಿ, ರವಿ ಮುಂತಾದವರು ಹಾಜರಿದ್ದರು.



