ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡತುಮಕೂರು ಗ್ರಾಮದ ಆದಿಶಕ್ತಿ ದೇವತೆಯಾದ ಶ್ರೀ ರೇಣುಕಾ ಎಲ್ಲಮ್ಮ ದೇವಿಯ ಹೂವಿನ ಕರಗ ಮಹೋತ್ಸವವು ಶುಕ್ರವಾರ ಬುದ್ಧ ಪೂರ್ಣಿಮೆಯಂದು ಅತಿ ವಿಜೃಂಭಣೆಯಿಂದ ನಡೆಯಿತು.
ದೊಡ್ಡ ತುಮಕೂರು ಗ್ರಾಮದಲ್ಲಿ 1977 ರಿಂದ ಸತತವಾಗಿ 3 ವರ್ಷಕೊಮ್ಮೆಗ್ರಾಮ ದೇವತೆ ಶ್ರೀ ರೇಣುಕಾದೇವಿ ಎಲ್ಲಮ್ಮ ದೇವಿಯ ಹೂವಿನ ಕರಗಮಹೋತ್ಸವ ಬುದ್ಧ ಪೌರ್ಣಿಮೆಯಂದು ವಿಜೃಂಭಣೆ ಯಿಂದ ನಡೆಯುತ್ತಿರುವುದು ವಿಶೇಷ.
ಪ್ರತಿ ಭಾರಿ ಯಂತೆ ಈ ಬಾರಿಯು ಕರಗದ ಪೂಜಾರಿ ನಿವೃತ್ತ ಪೊಲೀಸ್ ಅಧಿಕಾರಿ ಆರ್ ನಾಗರಾಜು ರವರು ದೇವಿಯ ಹೂವಿನ ಕರಗ ಹೊತ್ತು,ವಿಶೇಷ ನೃತ್ಯದಿಂದ ಗ್ರಾಮದ ಎಲ್ಲೆಡೆ ಸಂಚರಿಸಿ ಭಕ್ತಾದಿಗಳ ಪ್ರಶಂಸೆಗೆ ಪಾತ್ರರಾದರು. ಕರಗ ಮಹೋತ್ಸವ ಪ್ರಯುಕ್ತ ರೇಣುಕಾ ಎಲ್ಲಮ್ಮ ದೇವಿಯ ದೇಗುಲದಲ್ಲಿ ಬೆಳಗಿನಿಂದಲೇ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.ಗ್ರಾಮದ ದೇವರುಗಳಾದ ಆವಲ ಕೊಂಡರಾಯ ಸ್ವಾಮಿ, ಮುತ್ತುರಾಯಸ್ವಾಮಿ, ಚನ್ನಕೇಶವಸ್ವಾಮಿ, ಆಂಜನೇಯ ಸ್ವಾಮಿಗಳಿಗೆ ಹೂವಿನ ಆರತಿ ನಡೆದವು. ನಂತರ ಎಲ್ಲಮ್ಮ ದೇವಿ ಸೇರಿದಂತೆ ಉತ್ಸವ ಮೂರ್ತಿ ಗಳ ಮೆರವಣಿಗೆ ಗ್ರಾಮದಲ್ಲಿ ನಡೆಯಿತು. ಅಂದು ಸಂಜೆ 7.30 ಕ್ಕೆ ತಾಲೂಕು ಕಲಾವಿದ ಸಂಘ ದಿಂದ ಸಾಮಾಜಿಕ ನಾಟಕ, ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರಿಗೆ ಗ್ರಾಮದ ಪ್ರಮುಖ ಬೀದಿ ಗಳಲ್ಲಿ ಹೂವಿನ ಕರಗ ಮಹೋತ್ಸವ ಯಶಸ್ವಿಯಾಗಿ ನಡೆಯಿತು.
ಶನಿವಾರ ಬೆಳಿಗ್ಗೆ 8 ಗಂಟೆಗೆ ಗ್ರಾಮದ ಎಲ್ಲ ಮಹಿಳೆಯರಿಂದ ವರ್ಣರಂಜಿತ ಪುಷ್ಪ ಗಳ ದೀಪಾರತಿ ನಡೆಯಿತು.ದೊಡ್ಡತುಮಕೂರು ಗ್ರಾಮವಲ್ಲದೆ ಅಕ್ಕಪಕ್ಕದ ಗ್ರಾಮದ ಭಕ್ತಾದಿಗಳು ಆಗಮಿಸಿ ರೇಣುಕಾ ಎಲ್ಲಮ್ಮ ದೇವಿಯ ಕರಗದ ದರ್ಶನ ಮಾಡಿ ಭಕ್ತಿ ಭಾವದಿಂದ ಇಡೀ ರಾತ್ರಿ ಸಂಭ್ರಮಿಸಿದರು.ಕರಗ ಮಹೋತ್ಸವಕ್ಕೆ ಆಗಮಿಸಿದ ಎಲ್ಲಾ ಮಹಿಳಾ ಭಕ್ತ ರಿಗೆ ಭಾಗಿನ ನೀಡಿ ಗೌರವಿಸಲಾಯಿತು. ಎರಡು ದಿನಗಳ ಕಾಲ ನಡೆದ ಮಹೋತ್ಸವದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಪಕ್ಷಾತೀತವಾಗಿ, ಜಾತ್ಯಾತೀತವಾಗಿ ನಡೆದ ಕರಗ ಮಹೋತ್ಸವ ಕಾರ್ಯಕ್ರಮ ದೊಡ್ಡ ತುಮಕೂರು ಗ್ರಾಮದೆಲ್ಲೆಡೆ ಹಬ್ಬದ ವಾತಾವರಣವನ್ನು ಉಂಟು ಮಾಡಿತ್ತು.
“ಮೂರು ವರ್ಷಕ್ಕೊಮ್ಮೆ ನಡೆಯುವ ರೇಣುಕಾ ದೇವಿ ಎಲ್ಲಮ್ಮ ಕರಗ ಮಹೋತ್ಸವ ವರ್ಷ ದಾರೆಯ ನಡುವೆಯೂಯಾವುದೇ ಅಡಚಣೆ ಇಲ್ಲದೆ ಅತಿ ವಿಜೃಂಭಣೆಯಿಂದ ನಡೆಯಿತು. ದೊಡ್ಡ ತುಮಕೂರು ಗ್ರಾಮವಲ್ಲದೆ ಸುತ್ತಲಿನ ಎಲ್ಲಾ ಗ್ರಾಮಗಳ ಭಕ್ತಾದಿಗಳ ಆಗಮನದಿಂದ ಕರಗ ಮಹೋತ್ಸವ ವರ್ಷದಿಂದ ವರ್ಷಕ್ಕೆ ಸಾಕಷ್ಟು ಪ್ರಸಿದ್ದಿ ಪಡೆಯುತ್ತಿರುವುದು ಸಂತಸದ ವಿಚಾರ. ಈ ಸಂದರ್ಭದಲ್ಲಿ ಕರಗ ಮಹೋತ್ಸವ ಕಾರ್ಯಕ್ರಮಕ್ಕೆ ಅವಿರತ ಶ್ರಮಿಸಿದ ಗ್ರಾಮಸ್ಥರೆಲ್ಲರೂ ಅಭಿನಂದನಾರ್ಹರು”.
ಎಲ್ಐಸಿ ಮಂಜುನಾಥ್, ಮುಖಂಡರು, ದೊಡ್ಡತುಮಕೂರು ಗ್ರಾಮ.


