ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕೆಂಪೇಗೌಡರು ಕೇವಲ ಒಬ್ಬ ರಾಜನಷ್ಟೇ ಅಲ್ಲ, ಉತ್ತಮ ಆಡಳಿತಗಾರ, ಸಮಾಜಮುಖಿ ನಾಯಕ ಮತ್ತು ದೂರದೃಷ್ಟಿಯ ನಗರ ನಿರ್ಮಾಣಕಾರರಾಗಿದ್ದರು, ಕರ್ನಾಟಕದ ಹೆಮ್ಮೆಯ ನಾಯಕ, ದೂರದೃಷ್ಟಿಯ ಆಡಳಿತಗಾರ ಎಂದು ಎನ್. ಎಸ್. ಎಸ್ ಅಧಿಕಾರಿ ಡಾ.ಎಂ ಚಿಕ್ಕಣ್ಣ ಹೇಳಿದರು.
ನಗರದ ಹೊರವಲಯದ ದೇವರಾಜ್ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯ, ದೇವರಾಜ್ ಅರಸ್ ಪ್ರಥಮ ದರ್ಜೆ ಸಂಜೆ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ ನೇತೃತ್ವದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೆಂಪೇಗೌಡ ಅವರು ಬೆಳೆಸಿದ ಬೆಂಗಳೂರು ಇಂದು ವಿಶ್ವದ ಪ್ರಮುಖ ತಂತ್ರಜ್ಞಾನ ನಗರಗಳಲ್ಲಿ ಒಂದಾಗಿ ಬೆಳೆದಿದೆ, ಕೆರೆಗಳು, ಉದ್ಯಾನಗಳು, ದೇವಾಲಯಗಳು ಹಾಗೂ ಜನಸ್ನೇಹಿ ಆಡಳಿತಕ್ಕೆ ಅವರು ನೀಡಿದ ಮಹತ್ವ ಇಂದಿಗೂ ನಮಗೆ ಆದರ್ಶವಾಗಿದೆ,ಕೆಂಪೇಗೌಡರ ಜೀವನವು ನಮಗೆ ಶಿಸ್ತು, ಪ್ರಾಮಾಣಿಕತೆ, ಜನಸೇವೆ ಮತ್ತು ದೇಶಪ್ರೇಮದ ಮೌಲ್ಯಗಳನ್ನು ಕಲಿಸುತ್ತದೆ. ಅಭಿವೃದ್ಧಿಯ ಜೊತೆಗೆ ಪರಿಸರ ಸಂರಕ್ಷಣೆ ಮತ್ತು ಜನರ ಕಲ್ಯಾಣಕ್ಕೂ ಅವರು ಸಮಾನ ಆದ್ಯತೆ ನೀಡಿದರು. ಅವರ ದೂರದೃಷ್ಟಿಯ ಫಲವನ್ನು ನಾವು ಇಂದಿಗೂ ಅನುಭವಿಸುತ್ತಿದ್ದೇವೆ ಎಂದರು. ಉಪಪ್ರಾಂಶುಪಾಲ ಕೆ. ದಕ್ಷಿಣ ಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥ ಸಿ.ಪಿ ಪ್ರಕಾಶ್, ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಮಧುಶ್ರೀ ಸಂಶೋಧನಾ ವಿಭಾಗದ ಸಂಚಾಲಕ ನೀರಜ್, ಸಹಾಯಕ ಎನ್.ಎಸ್.ಎಸ್ ಅಧಿಕಾರಿಗಳಾದ ರಮ್ಯಶ್ರೀ, ವೆಂಕಟೇಶ್ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತಿತರರು ಹಾಜರಿದ್ದರು.



