ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಾಡಪ್ರಭು ಕೆಂಪೇಗೌಡರು ದೂರದೃಷ್ಟಿ ಮತ್ತು ಪ್ರಜಾಹಿತ ಚಿಂತನೆಯ ಮೂಲಕಜನಸ್ನೇಹಿಆಡಳಿತ ನೀಡಿದವರು ಎಂದು ಇಂಡಿಯನ್ ಪ್ರೈಡ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಜಯಭಾರತಿ ಅರವಿಂದ್ ತಿಳಿಸಿದರು.
ಅವರು ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಇಂಡಿಯನ್ ಪ್ರೈಡ್ ವಿದ್ಯಾಸಂಸ್ಥೆಯಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು..ಕೆಂಪೇಗೌಡ ಅವರ ಆಡಳಿತ ವ್ಯವಸ್ಥೆ ಮತ್ತು ಅಭಿವೃದ್ಧಿ ಕಾರ್ಯಗಳು ಇತಿಹಾಸದಲ್ಲಿ ಸದಾ ಸ್ಮರಣೀಯವಾಗಿವೆ. ಸಮಾನತೆ ಮತ್ತು ಜನಸ್ನೇಹಿ ಆಡಳಿತ ಮಾದರಿಯು ಇಂದಿಗೂ ಆದರ್ಶವಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಕಸಬಾ ಹೋಬಳಿ ಘಟಕದ ಕೋಶಾಧ್ಯಕ್ಷ ಜಿ.ಸುರೇಶ್ ಮಾತನಾಡಿ, ಬೆಂಗಳೂರನ್ನು ಶತಮಾನಗಳ ಹಿಂದೆಯೇ ಮಾದರಿಯ ನಗರವಾಗಿಸಲು ಯೋಜನೆಯನ್ನು ರೂಪಿಸಿದ ಕೆಂಪೇಗೌಡ, ಕೃಷಿ ಮತ್ತು ವ್ಯಾಪಾರ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಬೆಂಗಳೂರಿನಲ್ಲಿ ನಿರ್ಮಾಣವಾಗಿರುವ ಹಲವಾರು ಕೆರೆಗಳು, ಕೋಟೆಗಳು ಹಾಗೂ ವ್ಯಾಪಾರಕ್ಕೆ ಪ್ರತ್ಯೇಕ ಪೇಟೆಗಳು ಕೆಂಪೇಗೌಡ ಅವರ ಅಭಿವೃದ್ಧಿ ಜಾರ್ಯಗಳಿಗೆ ಸಾಕ್ಷಿಯಾಗಿವೆ. ಬೆಂಗಳೂರು ನಗರದ ಜಾಗತಿಕ ಮಟ್ಟದಲ್ಲಿ ಹೆಸರು ಪಡೆಯಲು ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯ ಯೋಜನೆಗಳು ಪ್ರಮುಖ ಕಾರಣವಾಗಿದೆ. ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಸಾಸಲು ಹೋಬಳಿ ಘಟಕದ ಅಧ್ಯಕ್ಷ ಜಿ.ಎಂ.ನಾಗರಾಜು ಮಾತನಾಡಿ, ಕೆಂಪೇಗೌಡ ಅವರ ಆಡಳಿತದಲ್ಲಿದ್ದ ಜನಪರ ಕಾಳಜಿ, ಸಾಮಾಜಿಕ ನ್ಯಾಯ ಮತ್ತು ಪರಿಸರ ಪ್ರೀತಿ ಅನನ್ಯವಾದದ್ದು. ಅವರು ಹಂಪಿಯಂತಹ ನಾಡು ಕಟ್ಟಬೇಕೆಂದು ಕನಸು ಕಂಡವರು. ಬೆಂಗಳೂರನ್ನು ದಕ್ಷಿಣ ಭಾರತದ ವ್ಯಾಪಾರ ಕೇಂದ್ರ ಮಾಡಿದರು. ಕೆಂಪೇಗೌಡ ಅವರು ಸರ್ವಧರ್ಮ ಸಮನ್ವಯ ಸಾಧಿಸಿದವರು ಎಂದರು.
ಇದೇ ಸಂದರ್ಭದಲ್ಲಿ ಕೆಂಪೇಗೌಡರ ಕುರಿತು ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಎಸ್.ಸೃಜನ, ಗಾನವಿ, ಯಶಿಕ, ನಾಗಲಕ್ಷ್ಮಿ ಹಾಗೂ ಕೆಂಪೇಗೌಡರ ಛದ್ಮವೇಷ ಧರಿಸಿದ ಪ್ರಜ್ವಲ್ ಗೌಡ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿಪತ್ರ ನೀಡಿ ಅಭಿನಂದಿಸಿದರು.
ಈ ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ್, ಗೌರವ ಕಾರ್ಯದರ್ಶಿ ಎ.ಜಯರಾಮ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ ಸಹಾಯಕ ಆಯುಕ್ತ ವೆಂಕಟರಾಜು, ಕನ್ನಡ ಜಾಗೃತ ವೇದಿಕೆ ಅಧ್ಯಕ್ಷ ನಾಗರಾಜು, ನಿಲಯ ಮೇಲ್ವಿಚಾರಕ ಸಿ.ಅಣ್ಣಯ್ಯ, , ಕಲಾವಿದರುಗಳಾದ ದರ್ಗಾಜೋಗಿಹಳ್ಳಿ ಮಲ್ಲೇಶ್, ರಂಗಸ್ವಾಮಯ್ಯ, ಹಾಡೋನಹಳ್ಳಿ ಗೋವಿಂದರಾಜು ಮುಂತಾದವರು ಭಾಗವಹಿಸಿದ್ದರು.



