ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
"ಶಿಕ್ಷಣ ವೃತ್ತಿಯು ಅತ್ಯಂತ ಪವಿತ್ರವಾದದ್ದು. ನಾವು ಈ ವೃತ್ತಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳಿಗೆ ನಿಜವಾದ ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ" ಎಂದು ನಿವೃತ್ತ ಪ್ರಾಚಾರ್ಯ ಕೆ.ಎನ್. ವಸಂತ್ ಕುಮಾರ್ ಅವರು ಅಭಿಪ್ರಾಯಪಟ್ಟರು.
ಚಳ್ಳಕೆರೆ ತಾಲೂಕಿನ ತಳಕಿನ ಸರ್ಕಾರಿ ಎಸ್. ಜಿ. ಟಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ತಮ್ಮ ವಯೋ ನಿವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಭಾವನಾತ್ಮಕವಾಗಿ ಮಾತನಾಡಿದರು.
ತಾಯಿಯ ಆಶೀರ್ವಾದವೇ ನನ್ನ ಪ್ರಗತಿಗೆ ಕಾರಣ
"ನಾನು ಸಣ್ಣ ಹಳ್ಳಿಯ ಬಡ ಕುಟುಂಬದಲ್ಲಿ ಜನಿಸಿದವನು. ಎಸ್ಸೆಸ್ಸೆಲ್ಸಿ ಮುಗಿದ ನಂತರ ಆರ್ಥಿಕ ತೊಂದರೆಯಿಂದಾಗಿ ಒಂದು ವರ್ಷ ವಿದ್ಯಾಭ್ಯಾಸ ಮುಂದುವರಿಸಲು ಕಷ್ಟವಾಗಿ, ಸೈನಿಕ ಸೇವೆಗೆ ಸೇರಲು ಮುಂದಾಗಿದ್ದೆ. ಆದರೆ, ನಮ್ಮ ತಾಯಿ ಅದಕ್ಕೆ ಒಪ್ಪದೆ ಕಷ್ಟಪಟ್ಟು ನನಗೆ ಉನ್ನತ ವಿದ್ಯಾಭ್ಯಾಸ ಕೊಡಿಸಿದರು. ಇಂದು ನನ್ನ ಈ ಎಲ್ಲಾ ಪ್ರಗತಿಗೆ ತಾಯಿಯ ಆಶೀರ್ವಾದವೇ ಕಾರಣ. ಜೊತೆಗೆ ನನ್ನ ವೃತ್ತಿಜೀವನದ ಯಶಸ್ಸಿಗೆ ಧರ್ಮಪತ್ನಿ ಶ್ರೀಮತಿ ವಾಣಿ ಹಾಗೂ ಕುಟುಂಬಸ್ಥರ ಸಹಕಾರ ದೊಡ್ಡದಾಗಿದೆ."
ಕೆ.ಎನ್. ವಸಂತ್ ಕುಮಾರ್, ನಿವೃತ್ತ ಪ್ರಾಚಾರ್ಯರು.
ಮುಂದುವರಿದು ಮಾತನಾಡಿದ ಅವರು, "ಹಿಂದಿನ ದಿನಗಳಲ್ಲಿ 'ಪಾಠ ಮಾಡಿ ಫಲಿತಾಂಶ ಕೊಡಿ' ಎಂಬ ವಾತಾವರಣವಿತ್ತು. ಆದರೆ ಇಂದಿನ ದಿನಗಳಲ್ಲಿ 'ಮಾಹಿತಿ ಕೊಡಿ, ಫಲಿತಾಂಶ ಕೊಡಿ' ಎನ್ನುವಂತಾಗಿದೆ" ಎಂದು ಇಲಾಖೆಯ ಇಂದಿನ ನೀತಿ-ನಿಯಮಗಳ ಕುರಿತು ಬೇಸರ ಹಂಚಿಕೊಂಡರು.
ವಿದ್ಯಾರ್ಥಿಗಳು ಸಂಸ್ಕಾರವಂತರಾಗಬೇಕು: ಪಿ.ಎನ್. ಕೃಷ್ಣ ಪ್ರಸಾದ್
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಪಿ.ಎನ್. ಕೃಷ್ಣ ಪ್ರಸಾದ್ ಮಾತನಾಡಿ, "ನಾನು ಚಳ್ಳಕೆರೆ ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರಾಚಾರ್ಯನಾಗಿದ್ದಾಗ ವಸಂತ್ ಕುಮಾರ್ ನನ್ನ ಬೆನ್ನೆಲುಬಾಗಿ ನಿಂತಿದ್ದರು. ಅವರಲ್ಲಿನ ಮೌನ ಸ್ವಭಾವ ಮತ್ತು ಪ್ರೀತಿ-ವಿಶ್ವಾಸ ಎಲ್ಲರಿಗೂ ಮಾದರಿ. ವಿದ್ಯಾರ್ಥಿ ಜೀವನವು ಅತ್ಯಂತ ಅದ್ಭುತವಾದದ್ದು, ಅದನ್ನು ಯಾರೂ ಹಾಳು ಮಾಡಿಕೊಳ್ಳಬಾರದು. ವಿದ್ಯಾರ್ಥಿಗಳಿಗೆ ಕೇವಲ ಓದು-ಬರಹ ಅಷ್ಟೇ ಮುಖ್ಯವಲ್ಲ, ಜೀವನದಲ್ಲಿ ಸಂಸ್ಕಾರವಂತರಾಗುವುದು ಮುಖ್ಯ" ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
30 ವರ್ಷಗಳ ಗಣನೀಯ ಸೇವೆ ಶ್ಲಾಘನೀಯ
ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್. ಲಕ್ಷ್ಮಣ ಮಾತನಾಡಿ, "ಸರ್ಕಾರಿ ಸೇವೆಗೆ ಸೇರಿದ ಮೇಲೆ ನಿವೃತ್ತಿ ಸಹಜ. ಆದರೆ ನಿವೃತ್ತಿಯ ನಂತರವೇ ಹೊಸ ಬದುಕು ಆರಂಭವಾಗುತ್ತದೆ. ವಸಂತ್ ಕುಮಾರ್ ಅವರು ಸುದೀರ್ಘ 30 ವರ್ಷಗಳ ಕಾಲ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ, ತಾಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಹಾಗೂ ಜಿಲ್ಲಾ ಪ್ರಾಚಾರ್ಯರ ಸಂಘದ ಕಾರ್ಯದರ್ಶಿಯಾಗಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಸದಾ ಹಸನ್ಮುಖಿ ಹಾಗೂ ರೈತಾಪಿ ಹಿನ್ನೆಲೆಯ ಮೃದು ಸ್ವಭಾವದ ಇವರು ನಿಜಕ್ಕೂ ಅಜಾತಶತ್ರು" ಎಂದು ಶ್ಲಾಘಿಸಿದರು.
ಮೊಳಕಾಲ್ಮೂರು ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಗೋವಿಂದಪ್ಪ ಮಾತನಾಡಿ, "ನಮ್ಮ 35 ವರ್ಷಗಳ ಗೆಳೆತನದಲ್ಲಿ ಅವರ ಅಪರೂಪದ ವ್ಯಕ್ತಿತ್ವ, ರೈತಾಪಿ ಮತ್ತು ಆದರ್ಶ ಗುಣಗಳನ್ನು ಕಂಡಿದ್ದೇನೆ. ಇಲಾಖೆಯಲ್ಲಿ ಅವರು 'ಏಕೈಕ ಚಲಾವಣೆ ನಾಣ್ಯ'ದಂತಿದ್ದರು" ಎಂದು ಬಣ್ಣಿಸಿದರು.
ಸಮಾರಂಭದಲ್ಲಿ ಪ್ರಾಚಾರ್ಯರಾದ ಭೀಮರೆಡ್ಡಿ, ಲಲಿತಮ್ಮ, ದೇವೇಂದ್ರಪ್ಪ, ಕಾಲೇಜಿನ ಪ್ರಭಾರ ಪ್ರಾಚಾರ್ಯ ಜಾನ್ ಬಾಷಾ, ಹಾಗೂ ಉಪನ್ಯಾಸಕರಾದ ಕರಿಯಪ್ಪ, ಈಶ್ವರಪ್ಪ ಮತ್ತು ಶಾಂತಕುಮಾರಿ ಅವರು ನಿವೃತ್ತ ಪ್ರಾಚಾರ್ಯರ ಸೇವೆ ಹಾಗೂ ಸಾಧನೆಯನ್ನು ಸ್ಮರಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕೆ.ಎನ್. ವಸಂತ್ ಕುಮಾರ್ ಮತ್ತು ಅವರ ಧರ್ಮಪತ್ನಿ ಶ್ರೀಮತಿ ವಾಣಿ ವಸಂತ್ ಕುಮಾರ್ ದಂಪತಿಯನ್ನು ಸಹೋದ್ಯೋಗಿಗಳು ಹಾಗೂ ಗಣ್ಯರು ಭವ್ಯವಾಗಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಉದ್ಯಮಿ ಎಂ. ಎಸ್. ದಯಾನಂದ, ಪ್ರಾಚಾರ್ಯ ಡಾ. ತಿಮ್ಮಣ್ಣ, ಎರಿಸ್ವಾಮಿ, ಮಂಜುನಾಥ್ ರೆಡ್ಡಿ, ಜಗನ್ನಾಥ್, ವೇದಮೂರ್ತಿ, ಉಪನ್ಯಾಸಕರುಗಳಾದ ಚಂದ್ರಪ್ಪ, ಶೋಭಾ, ಕೋಮಲ, ನಾಗರಾಜ್, ನರಸಿಂಹಪ್ಪ, ಸಾಹಿತಿ ನಾಗರಾಜ್ ಬೆಳಗಟ್ಟ, ಎಂ.ಎಸ್. ಶ್ರೀನಿವಾಸ್, ಕುಮಾರಸ್ವಾಮಿ, ಡಾ. ಚಾರುಲತಾ, ಪುಟ್ಟರಂಗಪ್ಪ, ಹೆಚ್.ಆರ್. ಜಬಿವುಲ್ಲಾ ಸೇರಿದಂತೆ ವಸಂತ್ ಕುಮಾರ್ ಅವರ ಕುಟುಂಬಸ್ಥರು, ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



