ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯಲ್ಲಿ 2026-27ನೇ ಸಾಲಿನ ಮುಂಗಾರು ಹಂಗಾಮಿಗೆ ‘ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ'ಯನ್ನು ಜಾರಿಗೊಳಿಸಿ ಅಧಿಸೂಚಿಸಲಾಗಿದ್ದು, ನೋಂದಣಿ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಗ್ರಾಮ ಪಂಚಾಯಿತಿ ಮಟ್ಟದ ವಿಮಾ ಘಟಕಕ್ಕೆ ಚಳ್ಳಕೆರೆ ತಾಲ್ಲೂಕಿಗೆ ಶೇಂಗಾ (ಮಳೆಯಾಶ್ರಿತ), ಚಿತ್ರದುರ್ಗ ತಾಲ್ಲೂಕಿಗೆ ಮುಸುಕಿನ ಜೋಳ (ಮಳೆಯಾಶ್ರಿತ), ಹಿರಿಯೂರು ತಾಲ್ಲೂಕಿಗೆ ನೆಲಗಡಲೆ (ಶೇಂಗಾ-ಮಳೆಯಾಶ್ರಿತ) ಮತ್ತು ಸೂರ್ಯಕಾಂತಿ (ಮಳೆಯಾಶ್ರಿತ), ಹೊಳಲ್ಕೆರೆ ತಾಲ್ಲೂಕಿಗೆ ಮುಸುಕಿನ ಜೋಳ (ಮಳೆಯಾಶ್ರಿತ) ಮತ್ತು ರಾಗಿ (ಮಳೆಯಾಶ್ರಿತ), ಮೊಳಕಾಲ್ಕೂರು ತಾಲ್ಲೂಕಿಗೆ ನೆಲಗಡಲೆ (ಶೇಂಗಾ-ಮಳೆಯಾಶ್ರಿತ) ಹಾಗೂ ಹೊಸದುರ್ಗ ತಾಲ್ಲೂಕಿಗೆ ರಾಗಿ (ಮಳೆಯಾಶ್ರಿತ) ಬೆಳೆಗಳನ್ನು ಮುಂಗಾರು ಹಂಗಾಮಿನ ಬೆಳೆ ವಿಮೆಗೆ ಅಧಿಸೂಚಿಸಲಾಗಿದೆ. ಇದರೊಂದಿಗೆ ಹೋಬಳಿ ಮಟ್ಟದಲ್ಲಿ ಹತ್ತಿ, ಹೆಸರು, ಹುರುಳಿ, ಈರುಳ್ಳಿ, ಭತ್ತ, ಸಜ್ಜೆ, ತೊಗರಿ, ಕೆಂಪು ಮೆಣಸಿನಕಾಯಿ, ಟೊಮ್ಯಾಟೊ ಸೇರಿದಂತೆ ಹಲವು ನೀರಾವರಿ ಹಾಗೂ ಮಳೆಯಾಶ್ರಿತ ಬೆಳೆಗಳನ್ನು ವಿಮೆಗೆ ಒಳಪಡಿಸಲಾಗಿದೆ. ತಮ್ಮ ಹೋಬಳಿ ಮಟ್ಟದ ಬೆಳೆಯ ವಿವರವನ್ನು ಸಂಬಂಧಪಟ್ಟ ಕೃಷಿ ಅಧಿಕಾರಿಗಳು, ರೈತ ಸಂಪರ್ಕ ಕೇಂದ್ರ ಹಾಗೂ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ.
ಬೆಳೆ ಸಾಲ ಪಡೆದ ಮತ್ತು ಬೆಳೆ ಸಾಲ ಪಡೆಯದ ಆಸಕ್ತ ರೈತರು ಬೆಳೆ ವಿಮೆಗೆ ನೋಂದಣಿ ಮಾಡಲು ಹೆಸರು (ಮಳೆಯಾಶ್ರಿತ) ಮತ್ತು ಈರುಳ್ಳಿ (ನೀರಾವರಿ) ಬೆಳೆಗಳಿಗೆ ಇದೇ ಜುಲೈ 15 ಕೊನೆಯ ದಿನವಾಗಿದೆ. ಹತ್ತಿ, ಮೆಕ್ಕೆಜೋಳ, ಶೇಂಗಾ, ಜೋಳ, (ನೀರಾವರಿ, ಮಳೆಯಾಶ್ರಿತ) ಹುರಳಿ, ಈರುಳ್ಳಿ, ಸಜ್ಜೆ, ತೊಗರಿ, ಕೆಂಪು ಮೆಣಸಿನಕಾಯಿ, ಸಾವೆ, ಎಳ್ಳು, ಸೂರ್ಯಕಾಂತಿ (ಮಳೆಯಾಶ್ರಿತ) ಹಾಗೂ ಟೊಮ್ಯಾಟೋ ಬೆಳೆಗಳಿಗೆ ಜುಲೈ 31 ಕೊನೆಯ ದಿನ. ನವಣೆ (ಮಳೆಯಾಶ್ರಿತ), ಭತ್ತ (ನೀರಾವರಿ), ರಾಗಿ (ಮಳೆಯಾಶ್ರಿತ ಮತ್ತು ನೀರಾವರಿ) ಬೆಳೆಗಳಿಗೆ ಆಗಸ್ಟ್ 14 ಕೊನೆಯ ದಿನವಾಗಿದೆ. ಬ್ಯಾಂಕುಗಳಲ್ಲಿ ಬೆಳೆ ಸಾಲ ಪಡೆದ ಎಲ್ಲಾ ರೈತರನ್ನು ಕಡ್ಡಾಯವಾಗಿ ಈ ಯೋಜನೆಯಡಿ ಒಳಪಡಿಸಲಾಗುತ್ತದೆ. ಒಂದು ವೇಳೆ ಸಾಲ ಪಡೆದ ರೈತರು ವಿಮೆಯಿಂದ ಹೊರಗುಳಿಯಲು ಇಚ್ಛಿಸಿದರೆ, ನೋಂದಣಿ ಅಂತಿಮ ದಿನಾಂಕಕ್ಕಿಂತ 7 ದಿನ ಮುಂಚಿತವಾಗಿ ಬ್ಯಾಂಕ್ ವ್ಯವಸ್ಥಾಪಕರಿಗೆ ಲಿಖಿತವಾಗಿ ಮುಚ್ಚಳಿಕೆ ಪತ್ರ ನೀಡಬೇಕು. ಇನ್ನು ಸಾಲ ಪಡೆಯದ ರೈತರು ಬೆಳೆ ಸಾಲ ಪಡೆಯದೇ ಇರುವ ಬಗ್ಗೆ ಸ್ವಯಂ ಘೋಷಣೆ ನೀಡುವುದು ಕಡ್ಡಾಯವಾಗಿದೆ.
ಚಿತ್ರದುರ್ಗ ಜಿಲ್ಲೆಗೆ ‘ಇಫ್ಕೋ ಟೋಕಿಯೋ ಜನರಲ್ ಇನ್ಶೂರೆನ್ಸ್ ಕಂಪನಿ' ಅನುಷ್ಠಾನ ಸಂಸ್ಥೆಯಾಗಿದ್ದು, ರೈತರು ನೋಂದಣಿಗಾಗಿ ಕಡ್ಡಾಯವಾಗಿ FRUITS ID (FID) ಹೊಂದಿರಬೇಕು. ಆಸಕ್ತ ರೈತರು ತಮ್ಮ ವ್ಯಾಪ್ತಿಯ ಬ್ಯಾಂಕುಗಳಲ್ಲಿ ಅಥವಾ ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ ವಿಮೆ ನೋಂದಾಯಿಸಿಕೊಳ್ಳಬಹುದು.
ಆರ್ಥಿಕ ಸಂಸ್ಥೆಗಳು, ಬ್ಯಾಂಕ್, ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ ರೈತರನ್ನು ಬೆಳೆ ವಿಮೆಗೆ ನೋಂದಾಯಿಸಿದಾಗ ಬೆಳೆ ವಿಮೆ ಪ್ರಸ್ತಾವನೆಯನ್ನು ಹಾಗೂ ವಿಮಾ ಕಂತನ್ನು ನಿಗಧಿತ ಸಮಯದೊಳಗೆ ನಿಯಮಾನುಸಾರ ಅನುಷ್ಠಾನ ವಿಮಾ ಸಂಸ್ಥೆಗಳಿಗೆ ವರ್ಗಾಯಿಸಲು ಕ್ರಮಕೈಗೊಳ್ಳಬೇಕು. ನೋಂದಣಿ ಪ್ರಕ್ರಿಯೆಯ ಹಂತದಲ್ಲಿ ಸಂಸ್ಥೆಗಳ ನಿರ್ಲಕ್ಷದಿಂದ ಯಾವುದೇ ಲೋಪ-ದೋಷಗಳು ಉಂಟಾದಲ್ಲಿ ಅದರಿಂದಾಗುವ ಬೆಳೆ ವಿಮೆ ಪರಿಹಾರ ವ್ಯಾಜ್ಯಗಳಿಗೆ ಸಂಬಂಧಿಸಿದ ಸಂಸ್ಥೆಗಳೇ ನೇರ ಹೊಣೆಗಾರರಾಗಿರುತ್ತಾರೆ.
ಆಸಕ್ತ ರೈತರು ನಿಗಧಿತ ದಿನಾಂಕದೊಳಗೆ ಬೆಳೆ ವಿಮೆಗೆ ನೋಂದಾವಣಿ ಮಾಡಲು ವಿನಂತಿಸಿದೆ. ಅಂತಿಮ ಸಮಯದಲ್ಲಿ ಜನದಟ್ಟಣೆಯಿಂದಾಗಿ ನೋಂದಾಣಿಯಲ್ಲಿ ತಪ್ಪುಗಳು ಸಂಭವಿಸಿ, ವಿಮೆ ಪರಿಹಾರ ಬಾರದಿರುವ ಸಂಭವವಿರುತ್ತದೆ. ಇದಕ್ಕೆ ಅವಕಾಶ ಕೊಡದೇ ಸಕಾಲದಲ್ಲಿ ನೋಂದಾವಣೆ ಮಾಡಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್ ಕೋರಿದ್ದಾರೆ.



