ಚಂದ್ರವಳ್ಳಿ ನ್ಯೂಸ್, ಹಿರಿಯೂರು:
"ಬೆಂಗಳೂರು ನಗರ ಇಂದು ಜಾಗತಿಕ ಮಟ್ಟದಲ್ಲಿ 'ಸಿಲಿಕಾನ್ ಸಿಟಿ'ಯಾಗಿ ಹೊರಹೊಮ್ಮಲು ಕಾರಣೀಕರ್ತರಾದ ನಾಡಪ್ರಭು ಕೆಂಪೇಗೌಡರು ಸಂಪೂರ್ಣ ಜಾತ್ಯಾತೀತ ವ್ಯಕ್ತಿಯಾಗಿದ್ದರು. ಅವರನ್ನು ಯಾವುದೇ ಒಂದು ನಿರ್ದಿಷ್ಟ ಜಾತಿ ಅಥವಾ ಜನಾಂಗಕ್ಕೆ ಸೀಮಿತಗೊಳಿಸಬಾರದು, ಅವರು ಸರ್ವ ಜನಾಂಗದ ಧೀಮಂತ ನಾಯಕರಾಗಿದ್ದಾರೆ" ಎಂದು ವಾಣಿ ಸಕ್ಕರೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಧರಣೇಂದ್ರಯ್ಯ ಅಭಿಪ್ರಾಯಪಟ್ಟರು.
ನಗರದ ನಗರಸಭೆ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ "ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ" ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ವಿಶೇಷ ಉಪನ್ಯಾಸ ನೀಡಿದರು.
ದೂರದೃಷ್ಟಿಯ ದಕ್ಷ ಆಡಳಿತಗಾರ-
ಕೆಂಪೇಗೌಡರ ಆಡಳಿತ ವೈಖರಿಯನ್ನು ಸ್ಮರಿಸಿದ ಡಾ. ಧರಣೇಂದ್ರಯ್ಯ, "ಅವರು ಅತ್ಯಂತ ದಕ್ಷ ಹಾಗೂ ದೂರದೃಷ್ಟಿಯುಳ್ಳ ನಾಯಕರಾಗಿದ್ದರು. ಸಮಾಜದ ಎಲ್ಲಾ ವರ್ಗದ ಜನರ ಹಿತವನ್ನು ಬಯಸಿ, ಸರ್ವರಿಗೂ ಸಮಪಾಲು ಎಂಬ ತತ್ವದಡಿ ವಿವಿಧ ಸಮುದಾಯಗಳ ಹೆಸರಿನಲ್ಲಿ ಪೇಟೆಗಳನ್ನು ನಿರ್ಮಿಸಿ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದರು.
ಸುಗಮ ಸಂಚಾರಕ್ಕೆ ರಸ್ತೆಗಳು, ಪರಿಸರ ಸಂರಕ್ಷಣೆಗಾಗಿ ಗಿಡ-ಮರಗಳು, ಕೃಷಿ ಮತ್ತು ಕುಡಿಯುವ ನೀರಿಗಾಗಿ ನೂರಾರು ಕೆರೆ-ಕಟ್ಟೆಗಳನ್ನು ನಿರ್ಮಿಸಿದ ಮಹಾ ಶಿಲ್ಪಿ ಅವರು. ಇಂದಿನ ಯುವಜನತೆ ಅವರ ತತ್ವ ಮತ್ತು ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು" ಎಂದರಲ್ಲದೆ, ಕೆಂಪೇಗೌಡರ ಸಮಾಧಿ ಸ್ಥಳವನ್ನು ಪುನಶ್ಚೇತನಗೊಳಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿದರು.
ಜಿ.ಪಂ ಮಾಜಿ ಅಧ್ಯಕ್ಷ ಪಿಲಾಜನಹಳ್ಳಿ ಜಯಣ್ಣ ಮಾತನಾಡಿ "ಕೆಂಪೇಗೌಡರು ಒಕ್ಕಲಿಗರಿಗಷ್ಟೇ ಸೀಮಿತವಲ್ಲ. ಎಲ್ಲಾ ಜಾತಿ ಜನಾಂಗದವರೂ ಒಗ್ಗಟ್ಟಾಗಿ ಅವರ ಜಯಂತಿ ಆಚರಿಸಬೇಕು. ನಮ್ಮ ಒಕ್ಕಲಿಗ ಸಮಾಜದವರು ತಾಲೂಕಿನ ನೊಂದವರ ಹಾಗೂ ದೀನರ ನೆರವಿಗೆ ಸದಾ ಧಾವಿಸಬೇಕು" ಎಂದು ಅವರು ಮನವಿ ಮಾಡಿದರು.
ಕೆಪಿಸಿಸಿ ಉಪಾಧ್ಯಕ್ಷ ಆರ್. ಮಂಜುನಾಥ್ ಮಾತನಾಡಿ, "ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಬೆಂಗಳೂರಿನ ಇತಿಹಾಸ ಪ್ರಸಿದ್ಧ 'ತಿಗಳರ ಕರಗ' ಮಹೋತ್ಸವವನ್ನು ಪರಿಚಯಿಸಿದ ಕೀರ್ತಿ ನಾಡಪ್ರಭು ಕೆಂಪೇಗೌಡರಿಗೆ ಸಲ್ಲುತ್ತದೆ" ಎಂದು ತಿಳಿಸಿದರು.
ಜೆಡಿಎಸ್ ಮುಖಂಡ ಡಿ. ಯಶೋಧರ್ ಮಾತನಾಡಿ "ಅಂದು ಕೋಟೆ, ಪೇಟೆ, ಕೆರೆಗಳನ್ನು ನಿರ್ಮಿಸುವ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿಸಿ ಬದುಕು ಕಟ್ಟಿಕೊಟ್ಟ ಕೆಂಪೇಗೌಡರ ದೂರದೃಷ್ಟಿಯಿಂದಾಗಿ ಇಂದು ಬೆಂಗಳೂರು ಇಡೀ ವಿಶ್ವದ ಗಮನ ಸೆಳೆದಿದೆ" ಎಂದು ಹೇಳಿದರು.
ಕೆಂಪೇಗೌಡ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಂದಿಕೆರೆ ಜಗದೀಶ್ ಮಾತನಾಡಿ "ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಕೆಂಪೇಗೌಡರ ಚರಿತ್ರೆ ಕುರಿತು ಭಾಷಣ, ಪ್ರಬಂಧ, ಚಿತ್ರಕಲೆ ಸ್ಪರ್ಧೆಗಳನ್ನು ನಡೆಸಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಾಲೂಕು ಆಡಳಿತದ ವತಿಯಿಂದ ಬಹುಮಾನ ವಿತರಿಸುವ ವ್ಯವಸ್ಥೆ ಈ ವರ್ಷದಿಂದಲೇ ಜಾರಿಗೆ ಬರಬೇಕು" ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಬಿ.ಎಚ್. ಮಂಜುನಾಥ್ ಹಾಗೂ ಪಾರ್ವತಮ್ಮ ರುದ್ರಮುನಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ನೃತ್ಯ ನಿರ್ದೇಶಕ ಅವಿರಾಜ್ ಮತ್ತು ತಂಡದವರಿಂದ ಕೆಂಪೇಗೌಡರ ಭವ್ಯ 'ನೃತ್ಯ ರೂಪಕ' ಪ್ರದರ್ಶನ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ತಹಶೀಲ್ದಾರ್ ಎಂ. ಸಿದ್ದೇಶ್ ವಹಿಸಿದ್ದರು. ವೇದಿಕೆಯಲ್ಲಿ ನಗರಸಭೆ ಪೌರಾಯುಕ್ತ ಎ. ವಾಸೀಂ, ಒಕ್ಕಲಿಗರ ಸಮಾಜದ ಅಧ್ಯಕ್ಷ ರಾಮಚಂದ್ರಪ್ಪ, ಕಾರ್ಯದರ್ಶಿ ಜಿ. ಏಕಾಂತಪ್ಪ, ಮುಖಂಡರಾದ ಸಾದತ್ ವುಲ್ಲಾ, ದಾದಾಪೀರ್, ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಸಿ. ಹೊರಕೇರಪ್ಪ, ಕೃಷಿಕ ಸಮಾಜದ ಅಧ್ಯಕ್ಷ ಚಿಗಳಿಕಟ್ಟೆ ಕಾಂತರಾಜ್, ರೈತ ಮುಖಂಡ ಎಚ್.ಆರ್. ತಿಮ್ಮಯ್ಯ, ಮನವಿ ಟ್ರಸ್ಟ್ ಅಧ್ಯಕ್ಷೆ ಶ್ರೀಮತಿ ಮಾನಸ ಮಂಜುನಾಥ್, ಒಕ್ಕಲಿಗರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಕೃಷ್ಣಮೂರ್ತಿ, ಪ್ರಮುಖರಾದ ಕಲ್ಪನಾ ಶೇಖರ್, ರಮ್ಯಾರಾಜು, ಜ್ಞಾನೇಶ್ವರಿ, ಎಚ್. ಹೇಮಲತಾ, ವಸಂತಾ, ಕುಸುಮ ಯೋಗೇಶ್ ಹಾಗೂ ಮುಖಂಡರಾದ ಜಯಕುಮಾರ್, ಜಲ್ದಣ್ಣ, ಶಂಕರಮೂರ್ತಿ, ನಿತಿನ್, ಮುಕುಂದ,
ಕಂದಿಕೆರೆ ರಂಗನಾಥ್, ಚಿಲ್ಲಹಳ್ಳಿ ಶಿವಣ್ಣ, ಧ್ರುವಕುಮಾರ್, ವಕೀಲರಾದ ಜೆ.ಪಿ. ಪ್ರಶಾಂತ್, ಶಿವಕುಮಾರ್, ಡಾ.ಕೆ.ಟಿ. ಪ್ರಕಾಶ್, ಆರ್. ಗೌಡ, ರೈತ ಮುಖಂಡ ಬ್ಯಾಡರಹಳ್ಳಿ ಶಿವಕುಮಾರ್, ಟಿಎಪಿಸಿಎಂಎಸ್ ಅಧ್ಯಕ್ಷ ಶ್ರವಣಗೆರೆ ಹನುಮಂತರಾಯಪ್ಪ, ಕೋವೇರಹಟ್ಟಿ ತಿಪ್ಪೇಸ್ವಾಮಿ, ಹಿರಿಯ ಪತ್ರಕರ್ತ ಆಲೂರು ಹನುಮಂತರಾಯಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪತ್ರಕರ್ತರು ಭಾಗವಹಿಸಿದ್ದರು.



