ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದರ್ಗಾಜೋಗಹಳ್ಳಿ - ನಾಗಸಂದ್ರ ಮುಖ್ಯ ರಸ್ತೆಗೆ ಛೇರ್ಮನ್ ಎಸ್ ಯಲ್ಲಪ್ಪ ಮುಖ್ಯರಸ್ತೆ ಎಂದು ನಾಮಕರಣ ಮಾಡಿ ಇಂದು ನಾಮಫಲಕ ಅನಾವರಣ ಮಾಡಲಾಯಿತು.
ದರ್ಗಾಜೋಗಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿರಂತರ ಅನ್ನದಾಸೋಹ ಕಾರ್ಯಕ್ರಮದ ಸಹಭಾಗಿತ್ವದಲ್ಲಿ ಪೂಜಾ ಕಾರ್ಯಕ್ರಮ ನೆರವೇರಿತು. ನೂತನ ನಾಮಫಲಕ್ಕೆ ಗ್ರಾಮದ ಪ್ರಮುಖರು ಪೂಜೆ ಸಲ್ಲಿಸುವ ಮೂಲಕ ನಾಮಫಲಕ ಅನಾವರಣ ಮಾಡಿದರು. ಈ ವೇಳೆ ನಿರ್ಗತಿಕ ಕಡುಬಡವರಿಗೆ ವಯೋವೃದ್ದರಿಗೆ ಆಹಾರ ವಿತರಣೆ ಮಾಡುವ ಮೂಲಕ ಸಾರ್ವಜನಿಕರಿಗೆ ಶಾಲಾಮಕ್ಕಳಿಗೆ ಸಿಹಿ ಹಂಚುವ ಮೂಲಕ ಸಂಭ್ರಮ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಸದಾಸ್ಯರಾದ ಜೆ ವೈ ಮಲ್ಲಣ್ಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ನಮ್ಮ ತಂದೆಯವರು ಗ್ರಾಮ ಪಂಚಾಯತಿ ಸದಸ್ಯರಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂರಾರು ಕುಟುಂಬಗಳು ತಮ್ಮ ಜೀವನ ಕಟ್ಟಿಕೊಳ್ಳಲು ಉಚಿತ ನಿವೇಶನ ಕಲ್ಪಿಸಿ ಸಹಾಯ ಮಾಡಿದ್ದಾರೆ. ಅವರ ಜನ ಸೇವೆಯನ್ನು ಇಂದಿಗೂ ಗ್ರಾಮಸ್ಥರು ನೆನೆಯುತ್ತಾರೆ.
ಗ್ರಾಮಸ್ಥರಿಂದಲೇ ದರ್ಗಾ ಜೋಗಿಹಳ್ಳಿ ಹಾಗೂ ನಾಗಸಂದ್ರ ಮುಖ್ಯ ರಸ್ತೆಗೆ ದಿವಂಗತ ಛೇರ್ಮನ್ ಎಸ್ ಯಲ್ಲಪ್ಪನವರ ಹೆಸರಿಡಬೇಕೆಂಬ ಮನವಿ ಸಲ್ಲಿಸಲಾಗಿದ್ದು ಮನವಿಯ ಮೇರೆಗೆ ಪಂಚಾಯಿತಿ ಸದಸ್ಯರೆಲ್ಲ ಒಮ್ಮತದಿಂದ ಒಪ್ಪಿ ಈ ಮುಖ್ಯ ರಸ್ತೆಗೆ ಛೇರ್ಮನ್ ಎಸ್ ಯಲ್ಲಪ್ಪ ಮುಖ್ಯ ರಸ್ತೆ ಎಂಬ ಹೆಸರನ್ನು ಇಡಲಾಗಿದೆ. ಅವರ ಜನ ಸೇವೆಗೆ ಸಿಕ್ಕ ಪ್ರತಿಫಲ ಎಂದು ಭಾವಿಸುತ್ತೇವೆ. ಕಾಡಿನಂತಿದ್ದ ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ತಮ ಮೂಲಭೂತ ಸೌಲಭ್ಯಗಳು ಒದಗಿಸಲು ನಮ್ಮ ತಂದೆಯವರ ಶ್ರಮ ಬಹಳಷ್ಟಿದೆ. ಅವರ ಜೀವನವೇ ನಮಗೆ ಆದರ್ಶ ಎಂದರು.
ಮುಖಂಡರಾದ ಅಶ್ವತಪ್ಪ ಮಾತನಾಡಿ ಈ ಗ್ರಾಮವು ಮೊದಲು ಗಿಡ ಮುಳ್ಳುಗಳಿಂದ ತುಂಬಿದ್ದ ಕಾಡಿನಂತಿತ್ತು. ಪ್ರತಿ ಸೋಮವಾರ ಛೇರ್ಮನ್ ಎಸ್ ಯಲ್ಲಪ್ಪನವರ ಜೊತೆಗೂಡಿ ಎಲ್ಲಾ ಗ್ರಾಮಸ್ಥರು ಗ್ರಾಮದ ನಿರ್ಮಾಣಕ್ಕೆ ಶ್ರಮಿಸುತ್ತಿದ್ದೆವು. ಆಸರೆ ಅರಸಿ ಬಂದ ಪ್ರತಿಯೊಬ್ಬರಿಗೂ ಉಚಿತ ನಿವೇಶನ ನೀಡಿದ್ದೇವೆ. ಛೇರ್ಮನ್ ಎಸ್ ಯಲ್ಲಪ್ಪನವರು ಕೊಡುಗೈದಾನಿ. ಉಚಿತವಾಗಿ ಬಡವರಿಗೆ ನಿರ್ಗತಿಕರಿಗೆ ನಿವೇಶಗಳನ್ನು ಹಂಚಿದ್ದಾರೆ.
ಅಷ್ಟೇ ಅಲ್ಲದೆ ವಸತಿ ನಿರ್ಮಿಸಿಕೊಳ್ಳಲು ಕಷ್ಟ ಎಂದವರಿಗೆ ಅಗತ್ಯ ಪರಿಕರಗಳನ್ನು ಒದಗಿಸುವ ಮೂಲಕ ಜೀವನ ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ . ಇಂದು ಈ ಮುಖ್ಯರಸ್ತೆಗೆ ಅವರ ಹೆಸರಿಟ್ಟಿರುವುದು ಅವರಿಗೆ ನಾವು ನೀಡುತ್ತಿರುವ ಗೌರವವಾಗಿದೆ.ಇಂತಹ ಉತ್ತಮ ನಿರ್ಧಾರ ಕೈಗೊಂಡ ದರ್ಗಾ ಜೋಗಹಳ್ಳಿ ಗ್ರಾಮ ಪಂಚಾಯಿತಿ ಎಲ್ಲಾ ಸದಸ್ಯರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ನಾಗರತ್ನಮ್ಮ ಮಾತನಾಡಿ ಇಂದು ನಾವು ಸಂತೋಷವಾಗಿ ನಮ್ಮ ಮನೆಯಲ್ಲಿ ಇದ್ದೇವೆ ಎಂದರೆ ಅದಕ್ಕೆ ಮುಖ್ಯ ಕಾರಣ ಛೇರ್ಮನ್ ಎಸ್ ಯಲ್ಲಪ್ಪನವರು. ನಮ್ಮ ಸಂಕಷ್ಟ ದಿನಗಳಲ್ಲಿ ನಮಗೆ ಸಹಾಯವಾಗಿ ನಿಂತ ಏಕೈಕ ವ್ಯಕ್ತಿ ಅವರು. ನಾವು ಇಂದಿಗೂ ಅವರನ್ನು ಪ್ರತಿನಿತ್ಯ ಸ್ಮರಿಸುತ್ತೇವೆ. ಗ್ರಾಮದ ಮುಖ್ಯ ರಸ್ತೆಗೆ ಅವರ ಹೆಸರನ್ನು ಇಟ್ಟಿರುವುದು ಸಂತಸ ತಂದಿದೆ ಎಂದರು.
ಗ್ರಾಮದ ಮುಖಂಡರು ಮಾತನಾಡಿ ಗ್ರಾಮದ ಮಕ್ಕಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ತಮ್ಮ ಸ್ವರ್ಣಾರ್ಥವಾಗಿ ಶಾಲಾ ಕೊಠಡಿ ನಿರ್ಮಾಣ ಮಾಡಿಕೊಟ್ಟಿದ್ದರು ಇಂದು ಗ್ರಾಮದ ಎಲ್ಲಾ ಸಾರ್ವಜನಿಕರು ಒಟ್ಟಾಗಿ ಮುಖ್ಯರಸ್ತೆಗೆ ಅವರ ಹೆಸರನ್ನು ನಾಮಕರಣ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಿದ್ದಾರೆ. ಗ್ರಾಮದ ಇತಿಹಾಸ ,ಗ್ರಾಮದ ಅಭಿವೃದ್ಧಿಗೆ ಶ್ರಮಿಸಿದವರ ಬಗ್ಗೆ ಮಾಹಿತಿ ಇಂತಹ ಕಾರ್ಯಗಳಿಂದ ಯುವಕರಿಗೆ ತಿಳಿಸಲು ಸಹಕಾರಿ .
ನಮ್ಮ ಗ್ರಾಮಕ್ಕಾಗಿ ದುಡಿದ ಅವರನ್ನು ನೆನೆಯುವ ಸಲುವಾಗಿ ಗ್ರಾಮದ ಮುಖ್ಯ ರಸ್ತೆಗೆ ಸಾರ್ವಜನಿಕರ ಮನವಿಯ ಮೇರೆಗೆ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ಛೇರ್ಮನ್ ಎಸ್ ಯಲ್ಲಪ್ಪನವರು ಗ್ರಾಮಸ್ಥರ ಮನಸ್ಸಿನಲ್ಲಿ ಸದಾ ಅಜರಾಮರಾಗಿರುತ್ತಾರೆ ಎಂದು ತಿಳಿಸಿದರು.
ಈ ವೇಳೆ ಸ್ಥಳೀಯ ಪ್ರಮುಖರಾದ ಜೆ. ವೈ. ಸಿದ್ದಲಿಂಗಯ್ಯ, ನಾಗರಾಜು, ಚಂದ್ರ ಶೇಖರ್, ರವಿ, ಉಮೇಶ್, ಮಲ್ಲೇಶ್, ಸಿದ್ದು, ಕುಳ್ಳಪ್ಪ, ಲೋಹಿತ್ (ಅಪ್ಪಿ ) ಸೇರಿದಂತೆ ಸ್ಥಳೀಯ ಮುಖಂಡರು,ಸಾರ್ವಜನಿಕರು ಹಾಜರಿದ್ದರು.



