ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬಿಸಿಯೂಟ ತಯಾರಕರು ಮತ್ತು ಸಿಬ್ಬಂದಿ ತಮ್ಮ ಗೌರವಧನ ಹೆಚ್ಚಳ, ಸಾಮಾಜಿಕ ಭದ್ರತೆ ಹಾಗೂ ಕಾಯಂ ನೌಕರರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ತಾಲ್ಲೂಕು ಕಚೇರಿ ಪ್ರತಿಭಟನೆ ನಡೆಸಿದರು.
ಬಿಸಿಯೂಟ ತಯಾರಕರನ್ನು ಸರ್ಕಾರಿ ನೌಕರರೆಂದು ಅಧಿಕೃತವಾಗಿ ಗುರುತಿಸಬೇಕು. ಹಾಗೂ ಕನಿಷ್ಠ ವೇತನ ಜಾರಿಗೊಳಿಸಬೇಕು. 2022–23ರಿಂದ ನಿವೃತ್ತರಾದ ತಯಾರಕರಿಗೆ ಬಾಕಿ ಇರುವ ಹಣವನ್ನು ಬಿಡುಗಡೆ ಮಾಡಬೇಕು. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದ ಕಾರಣ ಕೆಲಸ ಕಳೆದುಕೊಂಡವರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಅಲ್ಲದೆ ಮೊಟ್ಟೆ ಸುಲಿಯುವ ಕೆಲಸಕ್ಕೆ ಪ್ರತಿ ಮೊಟ್ಟೆಗೆ ₹1 ನೀಡಬೇಕು. ಬಾಕಿ ಇರುವ ಮೊಟ್ಟೆ ಸುಲಿಯುವ ಹಣವನ್ನು ತಕ್ಷಣ ಪಾವತಿಸಬೇಕು. 100 ವಿದ್ಯಾರ್ಥಿಗಳಿರುವ ಶಾಲೆಗಳಲ್ಲಿ ಇಬ್ಬರ ಬದಲು ಮೂರು ಬಿಸಿಯೂಟ ತಯಾರಕರನ್ನು ನೇಮಿಸಬೇಕು. ಪ್ರತಿ ತಿಂಗಳು ಗೌರವಧನವನ್ನು ಸಮಯಕ್ಕೆ ಸರಿಯಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಎಂದು ಆಗ್ರಹಿಸಿದರು.
ಬಿಸಿಯೂಟ ತಯಾರಕರಿಗೆ ₹10 ಲಕ್ಷ ಮರಣ ಪರಿಹಾರ, ನಿವೃತ್ತ ತಯಾರಕರ ಪಿಂಚಣಿ ಹಾಗೂ ಇತರೆ ಸೌಲಭ್ಯಗಳನ್ನು ಹೆಚ್ಚಿಸುವುದು, ಸರ್ಕಾರಿ ಶಾಲೆಗಳ ಬಿಸಿಯೂಟ ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕದೆ ಸೇವೆಯಲ್ಲಿ ಮುಂದುವರಿಸುವುದು ಹಾಗೂ ಬಿಸಿಯೂಟ ತಯಾರಕರಿಗಾಗಿ ಕಲ್ಯಾಣ ಮಂಡಳಿ ರಚಿಸಿ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಎಐಟಿಯುಸಿ ತಾಲೂಕು ಅಧ್ಯಕ್ಷ ಮಹೇಶ್ಕುಮಾರ್ ರಾಜಘಟ್ಟ, ಎಐಟಿಯುಸಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಾಂತರಾಜ ಜೈನ್, ಭಾನುಪ್ರಕಾಶ್, ಬಿಸಿಯೂಟ ತಯಾರಕರ ಸಂಘದ ಅಧ್ಯಕ್ಷೆ ಮಾಲಾ, ಕಾರ್ಯದರ್ಶಿ ಅಂಜಲಿ ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಬಿಸಿಯೂಟ ತಯಾರಕರು ಭಾಗವಹಿಸಿದ್ದರು.



