ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದ ವಿವೇಕಾನಂದ ನಗರದ ಬಳಿ ಇರುವ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರಕ್ಕೆ ವ್ಯಕ್ತಿಯೊಬ್ಬರು ಅಡ್ಡಿ ಪಡಿಸಿದ್ದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ತೇರಿನ ಬೀದಿಯ ಮಹಿಳೆಯೊಬ್ಬರು ಮೃತಪಟ್ಟಿದ್ದು ವಿವೇಕಾನಂದ ನಗರದ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರಕ್ಕೆ ಹೋದಾಗ ಜಾಗದ ಮಾಲೀಕನೆಂದು ಹೇಳಿಕೊಂಡ ವ್ಯಕ್ತಿಯೊಬ್ಬರು ಸ್ಮಶಾನದ ದಾರಿಯನ್ನು ಮುಚ್ಚಿ ಅಡ್ಡಿ ಪಡಿಸಿದರು. ಇದರಿಂದ ಸ್ಥಳೀಯ ಸಾರ್ವಜನಿಕರು ಆಕ್ರೋಶಗೊಂಡು ಪೊಲೀಸ್ ಠಾಣೆಗೆ ದೂರು ನೀಡಿದ್ದರಿಂದ ಸ್ಥಳಕ್ಕೆ ಆಗಮಿಸಿದ ಪೊಲೀಸರು ದೂರಿಗೆ ಸಂಬಂಧಿಸಿದಂತೆ ಅಹವಾಲು ಆಲಿಸಿ ದರು.
ಬಹು ದಿನಗಳಿಂದ ಸ್ಮಶಾನದ ದಾರಿ ವಿಚಾರವಾಗಿ ಸಾರ್ವಜನಿಕರು ಸ್ಥಳೀಯ ಆಡಳಿತಕ್ಕೆ ದೂರು ನೀಡಿದರೂ ಯಾವುದೇ ಕ್ರಮ ಜರುಗಿಸದೆ ಕಂದಾಯ ಇಲಾಖೆ ಉದಾಸೀನ ದೋರಣೆ ತಾಳಿದೆ. ಪೂರ್ವಿಕರ ಕಾಲದಿಂದಲೂ ಹಲವಾರು ಸಮುದಾಯಗಳವರು ಇಲ್ಲಿ ಅಂತ್ಯ ಸಂಸ್ಕಾರ ಮಾಡುತ್ತಿದ್ದರು.
ಆದರೆ ವ್ಯಕ್ತಿಯೊಬ್ಬರು ಸ್ಮಶಾನದ ಜಾಗ ತಮ್ಮದೆಂದು ಸ್ಮಶಾನಕ್ಕೆ ಹೋಗುವ ದಾರಿಯನ್ನು ಕಂಪೌಂಡ್ ಹಾಕುವ ಮೂಲಕ ಅಂತ್ಯಸಂಸ್ಕಾರಕ್ಕೆ ಹೋಗಲು ತೊಂದರೆ ಕೊಡುತ್ತಿದ್ದಾರೆ. ಪ್ರತಿ ಬಾರಿ ಶವಸಂಸ್ಕಾರಕ್ಕೆ ಬಂದಾಗಲೆಲ್ಲ ವ್ಯಕ್ತಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ.
ಇದು ಕೂಡಲೇ ಇತ್ಯರ್ಥವಾಗಿ ಸ್ಮಶಾನದ ಭೂಮಿಯನ್ನು ಒತ್ತುವರಿ ಮಾಡಿಕೊಂಡವರಿಂದ ಬಿಡಿಸಬೇಕೆಂದು ಸ್ಥಳೀಯರಾದ ಸಂಜೀವ್ ನಾಯಕ್ ಹಾಗೂ ಡಿ. ಪಿ. ಆಂಜಿನೇಯ ಸೇರಿದಂತೆ ಹಲವಾರು ಸಮುದಾಯಗಳ ಮುಖಂಡರು ಪೊಲೀಸ್ ಇಲಾಖೆ ಹಾಗೂ ಕಂದಾಯ ಅಧಿಕಾರಿಗಳನ್ನು ಒತ್ತಾಯಿಸಿದರು.
ಅಂತ್ಯ ಸಂಸ್ಕಾರ ಕ್ಕೆ ಅಡ್ಡಿ ಪಡಿಸಿದರೆ ತಾಲೂಕು ಕಚೇರಿಯ ಮುಂಭಾಗದಲ್ಲಿ ಅಂತ್ಯ ಸಂಸ್ಕಾರ ಮಾಡುವುದಾಗಿ ಮೃತರ ಸಂಬಂದಿಕರು ಪಟ್ಟು ಹಿಡಿದಾಗ, ಡಿವೈಎಸ್ ಪಿ ಪಾಂಡುರಂಗ ಹಾಗೂ ಇನ್ಸ್ಪೆಕ್ಟರ್ ಡಾ. ನವೀನ್ ಕುಮಾರ್ ಅಡ್ಡಿ ಪಡಿಸಿದ ವ್ಯಕ್ತಿಗೆ ತಿಳಿಹೇಳಿ ಅಂತ್ಯಸಂಸ್ಕಾರಕ್ಕೆ ಅನುವು ಮಾಡಿಕೊಟ್ಟರು. ಜೊತೆಗೆ ಜಾಗದ ಒತ್ತುವರಿಗೆ ಸಂಬಂಧಿಸಿದಂತೆ ಒಂದು ವಾರದ ಒಳಗಾಗಿ ಸ್ಮಶಾನದ ಜಾಗಕ್ಕೆ ಸಂಬಂದಿಸಿದ ದಾಖಲೆಗಳನ್ನು ಪರಿಶೀಲಿಸಿ ಕಂದಾಯ ಇಲಾಖೆಯವರಿಂದ ಮಾಹಿತಿ ಪಡೆದು ಸಮಸ್ಯೆಯನ್ನು ಪರಿಹಾರಿಸುವುದಾಗಿ ಹೇಳಿದರು.
ದಶಕಗಳಿಂದ ಹಲವಾರು ಸಮುದಾಯಗಳು ಅಂತ್ಯ ಸಂಸ್ಕಾರ ಮಾಡುತ್ತಿದ್ದ ಸ್ಮಶಾನದ ಜಾಗ ಭೂ ಗಳ್ಳರಿಂದ ಒತ್ತುವರಿಯಾಗಿದೆ. ಇದರ ಬಗ್ಗೆ ಹಲವಾರು ಬಾರಿ ಕಂದಾಯ ಇಲಾಖೆಗೆ ದೂರು ಕೊಟ್ಟರೂ ಮೌನ ವಹಿಸಿದೆ.
ಸ್ಥಳೀಯ ಆಡಳಿತದ ದಿವ್ಯ ನಿರ್ಲಕ್ಷ್ಯವನ್ನು ಖಂಡಿಸಿ ಪ್ರತಿಭಟನೆ ಸಹಾ ಮಾಡಲಾಗಿದೆ. ಆದರೂ ಸಂಬಂಧ ಪಟ್ಟವರು ಗಮನ ಹಾರಿಸಿಲ್ಲ ಈ ಭಾಗದಲ್ಲಿ ಸುಮಾರು ಆರು ಎಕರೆ ಸರ್ಕಾರಿ ಭೂಮಿ ಇದ್ದು ಎಲ್ಲವೂ ಒತ್ತುವರಿಯಾಗಿದೆ. ಸಾಲದ್ದಕ್ಕೆ ಸಾರ್ವಜನಿಕ ಸ್ಮಶಾನದ ಜಾಗವನ್ನು ಬಿಡದೆ ಸಾರ್ವಜನಿಕರ ಅಂತ್ಯ ಸಂಸ್ಕಾರಕ್ಕೆ ತೊಂದರೆಯಾಗಿದೆ. ಇದು ಕೂಡಲೇ ಬಗೆ ಹರಿಸದಿದ್ದರೆ ಹೋರಾಟವನ್ನು ತೀವ್ರ ಗೊ ಳಿಸಬೇಕಾಗುವುದೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.



