ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸತತವಾಗಿ ಅತಿ ಹೆಚ್ಚು ಅವಧಿಗೆ ಸೇವೆ ಸಲ್ಲಿಸಿದ ದೇಶದ ಚುನಾಯಿತ ಪ್ರಧಾನಮಂತ್ರಿ ಎಂಬ ಐತಿಹಾಸಿಕ ಹಾಗೂ ಅಪೂರ್ವ ಗೌರವಕ್ಕೆ ನರೇಂದ್ರ ಮೋದಿ ಪಾತ್ರರಾದ ಹಿನ್ನೆಲೆಯಲ್ಲಿ, ಭಾರತೀಯ ಜನತಾ ಪಾರ್ಟಿ ಚಿತ್ರದುರ್ಗ ನಗರ ಮಂಡಲದ ವತಿಯಿಂದ ಇಂದು ನಗರದ ಶ್ರೀ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನಗರ ಮಂಡಲ ಅಧ್ಯಕ್ಷ ಲೋಕೇಶ್ ಹೆಚ್.ಎನ್. ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಪ್ರಧಾನಿ ಮೋದಿ ಅವರ ಹೆಸರಿನಲ್ಲಿ ಅರ್ಚನೆ ನಡೆಸಿ, ಅವರ ಮುಂದಿನ ಸತ್ಕಾರ್ಯಗಳಿಗೆ ಮತ್ತು ದೇಶದ ಅಭಿವೃದ್ಧಿಗೆ ಭಗವಂತನು ಮತ್ತಷ್ಟು ಶಕ್ತಿ ನೀಡಲಿ ಎಂದು ಭಕ್ತಿ-ಗೌರವಗಳೊಂದಿಗೆ ಪ್ರಾರ್ಥಿಸಲಾಯಿತು.
ಈ ಸಂಭ್ರಮದ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್, ಮಾಜಿ ಶಾಸಕ ಎಸ್.ಕೆ. ಬಸವರಾಜನ್, ರಾಜ್ಯ ಪದಾಧಿಕಾರಿ ಕೆ. ಮಲ್ಲಿಕಾರ್ಜುನ ಅವರು ಭಾಗವಹಿಸಿ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ದಾವಣಗೆರೆ ಸಹ-ಪ್ರಭಾರಿ ಎ. ಮುರಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ. ವೆಂಕಟೇಶ್ ಯಾದವ್, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಪರಶುರಾಮ್, ನಗರ ಪ್ರಧಾನ ಕಾರ್ಯದರ್ಶಿ ಎಸ್. ಬಸವೇಶ್ ಹಾಗೂ ಲೀಲಾ ಶಶಿಧರ್ ಉಪಸ್ಥಿತರಿದ್ದರು.
ಮುಖಂಡರ ಮತ್ತು ಕಾರ್ಯಕರ್ತರ ಹರ್ಷ:
ರಾಜ್ಯ ಮಹಿಳಾ ಮೋರ್ಚಾ ಪದಾಧಿಕಾರಿ ಶ್ಯಾಮಲ ಶಿವಪ್ರಕಾಶ್, ಜಿಲ್ಲಾ ಉಪಾಧ್ಯಕ್ಷೆ ಶೈಲಜಾ ರೆಡ್ಡಿ, ಜಿಲ್ಲಾ ಮಾಧ್ಯಮ ವಕ್ತಾರ ನಾಗರಾಜ್ ಬೇದ್ರೆ ಮತ್ತು ನವೀನ್ ಚಾಲುಕ್ಯ, ಪ್ರಮುಖ ಮುಖಂಡರಾದ ತಿಪ್ಪೇಸ್ವಾಮಿ ಹಾಗೂ ಹರೀಶ್ ಸೇರಿದಂತೆ ಪಕ್ಷದ ನೂರಾರು ಮುಖಂಡರು ಮತ್ತು ಕಾರ್ಯಕರ್ತರು ಈ ಐತಿಹಾಸಿಕ ಕ್ಷಣವನ್ನು ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
"ನರೇಂದ್ರ ಮೋದಿ ಅವರು ದೇಶದ ಸುದೀರ್ಘ ಅವಧಿಯ ಚುನಾಯಿತ ಪ್ರಧಾನಿಯಾಗಿ ಇತಿಹಾಸ ನಿರ್ಮಿಸಿರುವುದು ಪ್ರತಿ ಭಾರತೀಯನೂ ಹೆಮ್ಮೆ ಪಡುವಂತಹ ಸಂಗತಿಯಾಗಿದೆ. ಅವರ ನಾಯಕತ್ವದಲ್ಲಿ ದೇಶವು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂಬ ಆಶಯ ನಮ್ಮದಾಗಿದೆ."
ಕೆ.ಎಸ್ ನವೀನ್, ಶಾಸಕರು ಹಾಗೂ ಬಿಜೆಪಿ ಪ್ರಮುಖರು.



