ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರ ಪ್ರದೇಶಗಳಲ್ಲಿ ವಾಸಿಸುವ ವಿದ್ಯಾವಂತರ ತಾತ್ಸಾರ ಮನೋಭಾವದಿಂದಾಗಿ ಎಸ್ಐಆರ್ ಪ್ರಕ್ರಿಯೆಯು ಹಿನ್ನಡೆ ಅನುಭವಿಸುತ್ತಿದೆ ಎಂದು ಬಿಎಲ್ಒ-೨ ಎನ್.ಡಿ. ಕುಮಾರ್ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಶನಿವಾರ ಚಿತ್ರದುರ್ಗ ನಗರದ ೪ನೇ ವಾರ್ಡ್ನ ೧೨೩ನೇ ಬೂತ್ನಲ್ಲಿ ಹಮ್ಮಿಕೊಳ್ಳಲಾಗಿದ್ದ ಎಸ್ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಫಾರಂ ಭರ್ತಿ ಮತ್ತು ಸುರಕ್ಷತೆ ಬಗ್ಗೆ ಮಾಹಿತಿ:
ಚುನಾವಣಾ ಆಯೋಗದ ನಿಯಮಾವಳಿಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದ ಅವರು, "ಚುನಾವಣಾ ಆಯೋಗವು ಪ್ರತಿ ಮತದಾರರಿಗೆ ಎರಡು ಫಾರಂಗಳನ್ನು ನೀಡುತ್ತಿದೆ. ಮತದಾರರು ಇದರಲ್ಲಿ ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿ, ಒಂದು ಫಾರಂಗೆ ಸಹಿ ಹಾಕಿ ಬಿಎಲ್ಒಗಳಿಗೆ ನೀಡಬೇಕು. ಮತ್ತೊಂದು ಫಾರಂಗೆ ಬಿಎಲ್ಒಗಳು ಸಹಿ ಮಾಡಿ ಮತದಾರರಿಗೆ ವಾಪಸ್ ನೀಡಲಿದ್ದಾರೆ," ಎಂದು ವಿವರಿಸಿದರು.
ಮುಂದುವರಿದು ಮಾತನಾಡಿದ ಅವರು, "ಬಿಎಲ್ಒಗಳು ಸಹಿ ಮಾಡಿ ನೀಡಿದ ಫಾರಂ ಅನ್ನು ಮತದಾರರ ಕರಡು ಪ್ರತಿ ಪ್ರಕಟವಾಗುವವರೆಗೂ ಸಾರ್ವಜನಿಕರು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಈ ಪ್ರಕ್ರಿಯೆಯ ಬಗ್ಗೆ ಮತದಾರರು ಯಾವುದೇ ರೀತಿಯ ಆತಂಕ ಪಡುವ ಅಥವಾ ಹೆದರುವ ಅಗತ್ಯವಿಲ್ಲ," ಎಂದು ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ನಗರಸಭೆ ವ್ಯವಸ್ಥಾಪಕ ಜಯಣ್ಣ, ಶಾಸಕರ ಆಪ್ತ ಸಹಾಯಕ ಶಿವಾನಂದ್, ಕಮ್ಯೂನಿಟಿ ಮೊಬಿಲೈಜರ್ ದೀಪಾ, ಬಿಎಲ್ಒ ರೇಣುಕಾ, ನಗರಸಭೆ ಮಾಜಿ ಸದಸ್ಯ ರಾಜೇಶ್, ಕಾಂಗ್ರೆಸ್ ಮುಖಂಡರಾದ ಶಶಿಕಿರಣ್ ಸೇರಿದಂತೆ ವಾರ್ಡಿನ ನೂರಾರು ಮತದಾರರು ಉಪಸ್ಥಿತರಿದ್ದರು.



