ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭದ್ರಾ ಮೇಲ್ದಂಡೆ ಯೋಜನೆ ತ್ವರಿತವಾಗಿ ಪೂರ್ಣಗೊಳಿಸಲು ಅನುದಾನ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ಮಧ್ಯ ಕರ್ನಾಟಕ ಭಾಗದ ಬರಪೀಡಿತ ಪ್ರದೇಶಗಳ ರೈತರುಗಳು ಕಳೆದ 5 ದಶಕಗಳಿಗೂ ಹೆಚ್ಚು ಕಾಲ ನೀರಾವರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸತತ 5 ದಶಕಗಳ ಹೋರಾಟದ ಬಳಿಕ, ಭದ್ರಾ ಮೇಲ್ದಂಡ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಿಂದ ಮಧ್ಯ ಕರ್ನಾಟಕದ ಬರಪೀಡಿತ ಪ್ರದೇಶಗಳ 2.25 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಪದ್ಧತಿಯ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸುವುದು ಮತ್ತು ಅಚ್ಚುಕಟ್ಟು ಪ್ರದೇಶದ ಸುಮಾರು 367 ಕೆರೆಗಳನ್ನು ತುಂಬುವ ಉದ್ದೇಶ ಹೊಂದಿದೆ.
ಭದ್ರಾ ಯೋಜನೆ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಮತ್ತು ದಾವಣಗೆರೆ ಜಿಲ್ಲೆಗಳು ಸೇರಲಿವೆ. 2008ರಲ್ಲಿ ಯೋಜನೆ ಪ್ರಾರಂಭಿಸಲಾಗಿದ್ದು ಪ್ರಸ್ತುತ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಅವರು ತಿಳಿಸಿದ್ದಾರೆ.
ಯೋಜನೆಗೆ ಕೇಂದ್ರ ಜಲ ಆಯೋಗದ ವಿವಿಧ ನಿರ್ದೇಶನಾಲಯಗಳಿಂದ ಅಗತ್ಯವಿರುವ ಎಲ್ಲಾ ತೀರುವಳಿಗಳನ್ನು ಪಡೆಯಲಾಗಿದ್ದು, ಯೋಜನೆಯು ತಾಂತ್ರಿಕ ಹಾಗೂ ಆರ್ಥಿಕವಾಗಿ ಕಾರ್ಯಸಾಧುವಾಗಿದೆ ಎಂದು ಕೇಂದ್ರ ಜಲಶಕ್ತಿ ಮಂತ್ರಾಲಯದ ಸಲಹಾ ಸಮಿತಿಯು ಅಂಗೀಕರಿಸಿರುತ್ತದೆ.
ಇನವೆಸ್ಟ್ಮೆಂಟ್ ಕ್ಲಿಯರೆನ್ಸ್ ಕಮಿಟಿಯು ಯೋಜನೆಗೆ ತೀರುವಳಿಯನ್ನು ನೀಡಿದ್ದು, ಹೈ ಪವರ್ ಸ್ಟೀರಿಂಗ್ ಕಮಿಟಿಯು (HPSC) ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಡಿಯಲ್ಲಿ ಸೇರಿಸಲು ಶಿಫಾರಸು ಮಾಡಿರುತ್ತದೆ. ಕೇಂದ್ರ ಹಣಕಾಸು ಮಂತ್ರಾಲಯದ ಪಬ್ಲಿಕ್ ಇನ್ವೆಸ್ಟ್ಮೆಂಟ್ ಬೋರ್ಡ್ವು (PIB) ಭದ್ರಾ ಮೇಲ್ದಂಡೆ ಯೋಜನೆಗೆ ರೂ.5300 ಕೋಟಿಗಳ ಕೇಂದ್ರ ಸಹಾಯ ಧನಕ್ಕಾಗಿ ಶಿಫಾರಸು ಮಾಡಿರುತ್ತದೆ. ಹೀಗಾಗಿ, 2023-24ನೇ ಸಾಲಿನ ಕೇಂದ್ರ ಆಯವ್ಯಯದಲ್ಲಿ, ಭದ್ರಾ ಯೋಜನೆಗೆ ರೂ.5300 ಕೋಟಗಳ ಮೊತ್ತವನ್ನು ಕೇಂದ್ರ ಸರ್ಕಾರವು ಧನಸಹಾಯವಾಗಿ ನೀಡಲಾಗುವುದೆಂದು ಘೋಷಿಸಲಾಗಿತ್ತು. ಈ ಅನುದಾನ ಇದುವರಗೂ ಬಿಡುಗಡೆಯಾಗದ ಕಾರಣ ನವಹಲಿಯಲ್ಲಿ ಸಂಬಂಧಿಸಿದ ಸಚಿವರು, ಸಂಸದರನ್ನು ಭೇಟಿಯಾಗಿ ಅನುದಾನ ಬಿಡುಗಡೆಗೊಳಿಸಲು ಕೋರಲಾಗಿರುತ್ತದೆ ಎಂದು ಹೋರಾಟಗಾರರು ಮನವರಿಕೆ ಮಾಡಿಕೊಟ್ಟರು.
ಯೋಜನೆ ವ್ಯಾಪ್ತಿಯ ಚಿತ್ರದುರ್ಗ ಮತತು ತುಮಕೂರು ಜಿಲ್ಲೆ ಪಾವಗಡ ಮತ್ತು ಸಿರಾ ತಾಲೂಕುಗಳಲ್ಲಿ ಅಂತರ್ಜಲದಲ್ಲಿ ವಿಷಕಾರಿ ಫ್ಲೋರೈಡ್ ಪ್ರಮಾಣ ಅಧಿಕವಾಗಿದ್ದು ಜನರ ಆರೋಗ್ಯದ ಮೇಲೆ ವಿಪರೀತ ಪರಿಣಾಮಗಳನ್ನು ಉಂಟು ಮಾಡಿದ್ದು ಕೂಡಲೇ ಅನುದಾನ ನೀಡಿ ಯೋಜನೆ ಪೂರ್ಣಗೊಳಿಸುವ ಮೂಲಕ ರೈತರಿಗೆ ಅನುಕೂಲ ಆಗಲಿದೆ ಎಂದು ಹಸಿರು ಸೇನೆಯ ಮುಖ್ಯಸ್ಥ ಎಚ್.ಆರ್ ತಿಮ್ಮಯ್ಯ, ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ, ವಕೀಲಎಂ.ಟಿ.ಸುರೇಶ್, ನಟರಾಜ, ಎಂ.ಸಿದ್ದಪ್ಪ, ಬಯಲಪ್ಪ, ಜಗಳೂರಯ್ಯ, ಸೂರಮ್ಮನಹಳ್ಳಿ ರಾಜಣ್ಣ, ಮಂಜುನಾಥ್, ಕುಮಾರ್, ರವಿಕುಮಾರ್, ಬಿ.ಇ.ಮಲ್ಲೇಶಣ್ಣ, ಬಿ.ಎಸ್.ರಂಗಸ್ವಾಮಿ, ಎಸ್.ಆರ್.ತಿಪ್ಪೇಸ್ವಾಮಿ, ರೇಡರೆಡ್ಡಿಹಳ್ಳಿ ಬಸವರೆಡ್ಡಿ, ನಿಜಲಿಂಗಪ್ಪ, ರಾಜೇಂದ್ರ (MMM ಮಣಿ), ಕಬ್ಬಿಗೆರೆ ಕಾಂತರಾಜು, ಲವಕುಮಾರ್ ಮತ್ತಿತರರು ಇದ್ದರು.


