ಚಂದ್ರವಳ್ಳಿ ನ್ಯೂಸ್, ಮೈಸೂರು:
ರಾಜ್ಯ ಕಾಂಗ್ರೆಸ್ ಸರ್ಕಾರ ಐದು ವರ್ಷ ಬಂಡೆ ರೀತಿ ಭದ್ರವಾಗಿ ಇರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರಿನ ವಿಮಾನ ನಿಲ್ಧಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು ಮತ್ತು ಡಿಕೆ ಶಿವಕುಮಾರ್ ಇಬ್ಬರು ಚೆನ್ನಾಗಿ ಇದ್ದೇವೆ. ಯಾರು ಏನೇ ಹೇಳಿದರು ಕೇಳುವುದಿಲ್ಲ. ಬಿಜೆಪಿ ಅವರು ಸುಳ್ಳು ಹೇಳುತ್ತಿದ್ದಾರೆ. ಈ ಸರ್ಕಾರ ಐದು ವರ್ಷ ಬಂಡೆ ರೀತಿ ಭದ್ರವಾಗಿ ಇರುತ್ತದೆ. ಯಾರು ಈ ವಿಚಾರದಲ್ಲಿ ಏನು ಹೇಳಿದರೂ ಕೇಳುವುದಿಲ್ಲ ಎಂದು ಸಿಎಂ ತಿಳಿಸಿದರು.
ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಈ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸಿಎಂ ಕೈ ಜೊತೆ ಕೈ ಸೇರಿಸಿ, ಕೈ ಮೇಲಕ್ಕೆತ್ತಿ ವಿರೋಧ ಪಕ್ಷಗಳಿಗೆ ಟಾಂಗ್ ನೀಡಿದರು. ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ಅನುಮತಿ ಕೊಡಬೇಕು. ಏಕೆಂದರೆ ಮಳೆಗಾಲದಲ್ಲಿ ಹೆಚ್ಚಾಗಿ ಹರಿಯುವ ನೀರು ಪೋಲಾಗುತ್ತಿದ್ದು, ಅದರ ಬಳಕೆ ಆಗಬೇಕಾಗಿದೆ ಆದ್ದರಿಂದ ಮೇಕೆದಾಟು ಯೋಜನೆ ಅನುಮತಿ ನೀಡಿದರೆ ಅನುಕೂಲ ಆಗುತ್ತದೆ ಎಂದರು.
ಕರ್ನಾಟಕದಲ್ಲೂ ತ್ರಿಭಾಷ ಸೂತ್ರ ಒಪ್ಪಿಕೊಳ್ಳುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಮುಖ್ಯಮಂತ್ರಿಗಳು, ನಾವು ಸಹ ತ್ರಿಭಾಷಾ ಸೂತ್ರವನ್ನು ಒಪ್ಪಿಕೊಳ್ಳಲು ಬದ್ಧವಾಗಿದ್ದೇವೆ ಎಂದು ತಿಳಿಸಿದರು.
ಮುಂದುವರೆದು ಮಾತನಾಡಿದ ಮುಖ್ಯಮಂತ್ರಿಗಳು ಹಾಸನ ಜಿಲ್ಲೆಯಲ್ಲಿ ಕಿರಿಯ ವಯಸ್ಸಿನ ಯುವಕರಿಗೆ ಹೃದಯಘಾತ ಏಕೆ ಆಗುತ್ತಿದೆ ಎಂಬುದನ್ನು ತಿಳಿಯಲು ಹಾಗೂ ಇದಕ್ಕೆ ಪರಿಹಾರ ನೀಡುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಕರ್ನಾಟಕ ಉಸ್ತುವಾರಿ ಕಾರ್ಯದರ್ಶಿ ಸುರ್ಜೆವಾಲಾ ಅವರು ಶಾಸಕರ ಸಮಸ್ಯೆ ಹಾಗೂ ಪಕ್ಷ ಸಂಘಟನೆಗಾಗಿ ಬಂದಿದ್ದಾರೆ. ಅದರಲ್ಲಿ ವಿಶೇಷ ಇಲ್ಲ ಎಂದರು.
ಕೇಂದ್ರ ಸರ್ಕಾರದ ಟ್ರಿಬಿನಲ್ ಆದೇಶದಂತೆ ತಮಿಳುನಾಡಿಗೆ ಪ್ರತಿ ವರ್ಷ 177.25 ಟಿ.ಎಂ.ಸಿ ನೀರು ಬಿಡಲು ತಿಳಿಸಲಾಗಿದೆ ಇದಕ್ಕೆ ನಮ್ಮ ತಕರಾರು ಇಲ್ಲ. ಅದೇ ರೀತಿ ನೀರನ್ನು ಬಿಡುತ್ತ ಬಂದಿದ್ದೇವೆ. ಪ್ರತಿ ತಿಂಗಳು ತಮಿಳುನಾಡಿಗೆ 9 ಟಿ.ಎಂ.ಸಿ ನೀರನ್ನು ಬಿಡಬೇಕು. ಅದೇ ರೀತಿ ಬಿಡುತ್ತಿದ್ದೇವೆ. ಜೂನ್ ತಿಂಗಳಲ್ಲಿ ಈಗಾಗಲೇ 22 ಟಿ.ಎಂ.ಸಿ. ನೀರನ್ನು ಬಿಡಲಾಗಿದ್ದು, ಟ್ರಿಬ್ಯುನಲ್ ಆದೇಶವನ್ನು ಪಾಲನೆ ಮಾಡುತ್ತೇವೆ. ಆದರೆ, ಹೆಚ್ಚುವರಿ ನೀರು ಉಪಯೋಗವಾಗಲು ಮೇಕೆದಾಟು ಯೋಜನೆಗೆ ಅನುಮತಿ ನೀಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ ಮೇಕೆದಾಟು ಯೋಜನೆ ಜಾರಿ ಮಾಡುತ್ತೇವೆ. ಈಗಾಗಲೇ ಕನಕಪುರದಲ್ಲಿ ಈ ಸಂಬಂಧ ಕೆಲಸ ಕಾರ್ಯ ನಡೆಯಲು ಕಚೇರಿ ಆರಂಭ ಮಾಡಲಾಗಿದೆ. ಕೇಂದ್ರದ ಅನುಮತಿ ಪಡೆಯುತ್ತೇವೆ ಎಂದು ತಿಳಿಸಿದರು.
ಕಾವೇರಿ ಆರತಿ ಮಾಡುತ್ತೇವೆ. ಪೂಜೆ ಪ್ರಾರ್ಥನೆ ಸಣ್ಣ ಮಟ್ಟದಲ್ಲಿ ಅಥವಾ ದೊಡ್ಡ ಮಟ್ಟದಲ್ಲಿಯಾದರೂ ಮಾಡಬೇಕು. ಈಗ ಕಾವೇರಿ ಆರತಿ ಮಾಡಲು ಹಾಗೂ ರೂಪುರೇಷಗಳ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದರಿಂದ 1500 ಮಂದಿಗೆ, ಕಲಾವಿದರಿಗೆ ಕೆಲಸ ಸಿಗಲಿದೆ. ಪ್ರಕರಣ ಕೋರ್ಟ್ ನಲ್ಲಿದ್ದು ಆ ನಂತರ ಕಾವೇರಿ ಆರತಿ ಬಗ್ಗೆ ಮಾತನಾಡುತ್ತೇನೆ ಎಂದು ಡಿಸಿಎಂ ತಿಳಿಸಿದರು.


