ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ವಿಜ್ಞಾನ-ತಂತ್ರಜ್ಞಾನ ಎಷ್ಟೆ ಮುಂದುವರೆದಿದ್ದರೂ ನೆಲ ಮೂಲ ಸಂಸ್ಕೃತಿ ಜಾನಪದ ಕಲೆಯನ್ನು ಮರೆಯುವಂತಿಲ್ಲ. ಉಸಿರು ನಿಂತಿರುವುದೇ ಜನಪದದಿಂದ ಜನಪದ ಹಾಡುಗಾರಿಕೆ, ನಾಟಕ, ಕಲೆ ಇವುಗಳೆಲ್ಲಾ ಮನೋಚಿಕಿತ್ಸಕ ಔಷಧಿಗಳಾಗಿ ಕೆಲಸ ಮಾಡುತ್ತವೆಂದು ನಿವೃತ್ತ ಪ್ರಾಚಾರ್ಯರು ಹಾಗೂ ರಂಗ ವಿಮರ್ಶಕ ಡಾ.ವಿ.ಬಸವರಾಜು ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘ ಕಾಲ್ಕೆರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಮಲ್ಲಾಪುದಲ್ಲಿರುವ ಬಾಪೂಜಿ ಸಮನ್ವಯ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಜಾನಪದ ಸಾಂಸ್ಕೃತಿಕ ಉತ್ಸವ-೨೦೨೬ ಮತ್ತು ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕೃಷಿ ಸಂಸ್ಕೃತಿ ಎಲ್ಲಿ ಸಮೃದ್ದವಾಗಿರುತ್ತದೋ ಅಲ್ಲಿ ಜನಪದ ಸಂಸ್ಕೃತಿ ಜೀವಂತವಾಗಿರುತ್ತದೆ. ವ್ಯವಸಾಯ, ಕಳೆ ತೆಗೆಯುವಾಗ, ಕುಟ್ಟುವಾಗ, ಬೀಸುವಾಗ, ಮದುವೆಗಳಲ್ಲಿ ಜಾನಪದ ಹಾಡುಗಳನ್ನು ಈಗಲು ಹಾಡಲಾಗುತ್ತದೆ. ಕಂಸಾಳೆ, ವೀರಗಾಸೆ, ಸೋಬಾನೆ ಇವೆಲ್ಲಾ ಜನಪದದ ಮೂಲ ಬೇರುಗಳು. ಎಷ್ಟೆ ಯುಗ ಕಳೆದರು ಜನಪದ ಸಂಸ್ಕೃತಿ ಮರೆಯಾಗುವುದಿಲ್ಲ. ಹಳ್ಳಿ ಮಕ್ಕಳಿಗೆ ಇಂತಹ ಜಾನಪದ ಸಾಂಸ್ಕೃತಿಕ ಉತ್ಸವಗಳನ್ನು ಪರಿಚಯಿಸಬೇಕು. ಪ್ರತಿಭಾ ಕಾರಂಜಿ ಇರುವುದೇ ಹಳ್ಳಿಗಾಡಿನ ಮಕ್ಕಳಿಗಾಗಿ ಎಂದು ಹೇಳಿದರು.
ರಾಜಕೀಯ ಸಾಮಾಜಿಕ ಸ್ಥಿತ್ಯಂತರಗಳಿಂದ ಹೆಪ್ಪುಗಟ್ಟಿದ ಸಮಾಜದಲ್ಲಿ ಬದುಕುತ್ತಿದ್ದೇವೆ. ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿದೆ. ಜನಪದ ಚಟುವಟಿಕೆಗಳು ಯಾವ ಕಾಲಕ್ಕೂ ಸೃಜನಶೀಲ, ಕ್ರಿಯಾಶೀಲವಾಗಿರುತ್ತವೆ. ಬದುಕಿನ ಸತ್ಯವನ್ನು ಜನಪದ ತಿಳಿಸುತ್ತದೆ. ನೋವು, ದುಃಖ, ದುಮ್ಮಾನವನ್ನು ಮರೆಸುವ ಶಕ್ತಿ ಜನಪದಕ್ಕಿದೆ. ಆಧ್ಯಾತ್ಮಿಕ ಸಾಂಸ್ಕೃತಿಕ ಮೌಲ್ಯವನ್ನು ಜನಪದ ಒಳಗೊಂಡಿದೆ. ಚಳ್ಳಕೆರೆ, ಮೊಳಕಾಲ್ಮುರು ಭಾಗಗಳಲ್ಲಿ ಚೌಡಿಕೆ ಪದಗಳನ್ನು ಇಂದಿಗೂ ಕೇಳಬಹುದು. ಜೋಗಪ್ಪ, ಗೊರಪ್ಪರು ಜನಪದ ಪರಂಪರೆಯಲ್ಲಿ ಬರುತ್ತಾರೆ. ಕೋಲಾಟ ಕ್ಷೀಣಿಸುತ್ತಿದೆ. ಯಳವರು, ಆಸಾದಿಗಳು ಕಾಣೆಯಾಗಿದ್ದಾರೆ. ಜನಪದ ಪರಂಪರೆ ಕಡಿಮೆಯಾಗುತ್ತಿದೆ ಎಂದು ವಿಷಾಧಿಸಿದರು.
ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಸಂಸ್ಥಾಪಕಿ ದಯಾ ಪುತ್ತೂರ್ಕರ್ ಮಾತನಾಡಿ ಜಾನಪದ ಬದುಕಿನ ಕನ್ನಡಿಯಿದ್ದಂತೆ. ಮೌಖಿಕವಾಗಿ ಒಬ್ಬರ ಬಾಯಿಂದ ಒಬ್ಬರ ಬಾಯಿಗೆ ಹರಡುವ ಜಾನಪದ ಗ್ರಾಮೀಣ ಭಾಗಗಳಿಂದ ಹುಟ್ಟಿದ ಹಳೆಯ ಕಲೆ. ಅನುಭವಗಳನ್ನು ಜಾನಪದ ಹಾಡುಗಳ ಮೂಲಕ ಹೊರ ಹಾಕಲಾಗುತ್ತದೆ. ಮದುವೆ, ಸುಗ್ಗಿ ಕಾಲದಲ್ಲಿ ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಜಾನಪದ ಹಾಡುಗಳನ್ನು ಕೇಳಬಹುದು. ಜನಪದ ಮನಸ್ಸಿಗೆ ತಟ್ಟಿದಷ್ಟು ಯಾವ ಸಾಹಿತ್ಯವೂ ಬೇಗನೆ ನಾಟುವುದಿಲ್ಲ. ಅನುಭವ ಜ್ಞಾನವನ್ನು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಕೊಂಡೊಯ್ಯುವ ಜಾನಪದ ಎಲ್ಲರಿಗೂ ಅರ್ಥವಾಗುವ ಸರಳ ಭಾಷೆ ಎಂದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಕೆ.ಎಂ.ವೀರೇಶ್ ಅಧ್ಯಕ್ಷತೆ ವಹಿಸಿದ್ದರು.
ಬೆಸ್ಕಾಂ ಜಾಗೃತಿ ದಳದ ಸಬ್ಇನ್ಸ್ಪೆಕ್ಟರ್ ಜಿ.ಯಶೋಧಮ್ಮ, ಕಡ್ಲೆಗುದ್ದು ಆಂಜನೇಯಸ್ವಾಮಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಡಾ.ಮಹೇಶ್, ರಂಗ ನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ, ಬಾದರಿ ದಿನ್ನಿ ಆರ್ಟ್ಸ್ ಅಕಾಡೆಮಿಯ ಪ್ರಕಾಶ್ಬಾದರದಿನ್ನಿ, ಚಂದ್ರೋದಯ ಸಾಂಸ್ಕೃತಿಕ ಸಂಘದ ಅಧ್ಯಕ್ಷೆ ಲತಾ, ಜಿಲ್ಲಾ ಮಹಿಳಾ ಒಕ್ಕೂಟದ ಶ್ರೀದೇವಿ ಇವರುಗಳು ವೇದಿಕೆಯಲ್ಲಿದ್ದರು.
ಎಂ.ಕೆ.ಹರೀಶ್ ಮತ್ತು ತಂಡ, ತ್ರೀವೆಣಿ ಮತ್ತು ತಂಡ, ಯಶೋಧಮ್ಮ ಮತ್ತು ತಂಡದವರು ಜಾನಪದ ಹಾಡುಗಳನ್ನು ಹಾಡಿ ರಂಜಿಸಿದರು.
ಡಿ.ನಾಗರಾಜು ಮತ್ತು ತಂಡದವರು ಕಹಳೆ, ಮಹೇಶ್ ಮತ್ತು ತಂಡದ ನಾಸಿಕ್ ಡೋಲ್, ಹಾಸ್ಯ ಸಾಹಿತಿ ಜಗನ್ನಾಥ್ ಇವರುಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.



