ಚಂದ್ರವಳ್ಳಿ ನ್ಯೂಸ್, ನೆಲಮಂಗಲ (ಬೆಂಗಳೂರು ಗ್ರಾಮಾಂತರ) :
ಭ್ರಷ್ಟಾಚಾರಕ್ಕೆ ರಾಜ್ಯ ಸರ್ಕಾರವೇ ಉತ್ತೇಜನ ನೀಡುತ್ತಿದೆ. ಶಾಸಕ ಬಿ. ಆರ್ ಪಾಟೀಲ್ ಹೇಳಿಕೆಯಿಂದ ಈ ಎಲ್ಲವೂ ಗೊತ್ತಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ನೆಲಮಂಗಲದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯದ ಪರಿಸ್ಥಿತಿಯ ಬಗ್ಗೆ ಕಾಂಗ್ರೆಸ್ ಶಾಸಕ ಬಿ. ಆರ್. ಪಾಟೀಲ್ ಅವರು ಗಂಭೀರವಾದ ಬೆಳಕು ಚೆಲ್ಲಿದ್ದಾರೆ. ಯಾವ ಇಲಾಖೆ ಬಡವರಿಗೆ ಮನೆಗಳನ್ನು ಕೊಡಬೇಕಿತ್ತೋ, ಅಲ್ಲಿಯೂ ಸಹ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದನ್ನು ಇಂದು ರಾಜ್ಯದ ಜನತೆ ಮುಂದೆ ಬಿಚ್ಚಿಟ್ಟಿದ್ದಾರೆ ಎಂದು ಹೇಳಿದ್ದಾರೆ.ಹಿರಿಯ ನಾಯಕರಾದ ಬಿ. ಆರ್ ಪಾಟೀಲ್ ಅವರನ್ನ ಆಡಳಿತ ಪಕ್ಷದ ನಾಯಕರು ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಈ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಬಡವರಿಗೆ, ರೈತರಿಗೆ ಶಾಪವಾಗಿ ಪರಿಣಮಿಸಿದೆ. ಕಾಂಗ್ರೆಸ್ ಸರ್ಕಾರ, ಸಿದ್ದರಾಮಯ್ಯ ಸರ್ಕಾರದಿಂದ ಬಡವರಿಗೆ ಯಾವುದೇ ಅನುಕೂಲ ಇಲ್ಲ ಎಂದು ತಿಳಿಸಿದ್ದಾರೆ.
ಹಿಂದೆ ಯಡಿಯೂರಪ್ಪನವರ ಸರ್ಕಾರ ಇದ್ದಾಗ ಅನೇಕ ಬಡವರ ಪರ ಯೋಜನೆ ನೀಡಿದ್ದರು. ಎಲ್ಲಾ ಯೋಜನೆ ಮರೆತಿದ್ದಾರೆ. ಭ್ರಷ್ಟಾಚಾರ, ಭ್ರಷ್ಟಾಚಾರ, ಭ್ರಷ್ಟಾಚಾರ ಬಿಟ್ರೆ ಈ ಸರ್ಕಾರದಲ್ಲಿ ಯಾವುದೇ ಯೋಜನೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರವೇ ಇವತ್ತು ಭ್ರಷ್ಟಾಚಾರಕ್ಕೆ ಉತ್ತೇಜನ ನೀಡುತ್ತಿದೆ. ಎಲ್ಲೊ ಒಂದು ಕಡೆ ಸ್ಟೇಟ್ ಸ್ಪಾನ್ಸರ್ ಕರೆಪ್ಷನ್ ನಡೆಯುತ್ತಿದೆ, ಈ ಎಲ್ಲವೂ ಬಿ. ಆರ್ ಪಾಟೀಲ್ ಹೇಳಿಕೆಯಿಂದ ಗೊತ್ತಾಗುತ್ತಿದೆ. ನಾವು ಕೂಡ ಬಿಜೆಪಿಯಿಂದ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ವಿಜಯೇಂದ್ರ ಹೇಳಿದರು.
ಬಿಆರ್ ಪಾಟೀಲ್ ಹೇಳಿದ್ದೇನು? ವಸತಿ ಹಂಚಿಕೆಯಲ್ಲಿ ಲಂಚ ಆರೋಪಕ್ಕೆ ಸಂಬಂಧಪಟ್ಟಂತೆ ಆಡಿಯೋ ಸಂಭಾಷಣೆ ಬಗ್ಗೆ ಶನಿವಾರ (ಜೂನ್ 21) ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದ ಶಾಸಕ ಬಿ ಆರ್ ಪಾಟೀಲ್, ಅದು ನಾನೇ ಮಾತನಾಡಿದ ಆಡಿಯೋ. ಎಲ್ಲ ಸರ್ಕಾರಗಳಲ್ಲೂ ಭ್ರಷ್ಟಾಚಾರ ನಡೆದಿತ್ತು. ನಾವು ಜನಪರ ಆಡಳಿತ ಕೊಡುತ್ತೇವೆ ಎಂದು ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು. ಆದರೆ ಹೀಗೆ ಆಗಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದರು.
5-6 ಪಂಚಾಯಿತಿಗಳಲ್ಲಿ ಜನರು ದುಡ್ಡು ಕೊಟ್ಟು ಮನೆಗಳನ್ನು ತೆಗೆದುಕೊಂಡಿದ್ದಾರೆ. ನಾನು ಕೊಟ್ಟ ಪತ್ರಕ್ಕೆ ಮನೆಗಳು ಹಂಚಿಕೆ ಆಗಿಲ್ಲ. ನಾನು 4 ಪತ್ರಗಳನ್ನು ಕೊಟ್ಟಿದ್ದೆ. ನನ್ನ ಕ್ಷೇತ್ರಕ್ಕೆ ಮನೆಗಳನ್ನು ಕೊಡಿ ಅಂತಾ ಪತ್ರ ಬರೆದರೂ ಕೊಟ್ಟಿರಲಿಲ್ಲ. ಆದ್ರೆ ಪಂಚಾಯಿತಿ ಅಧ್ಯಕ್ಷರು ನನ್ನ ಪತ್ರಗಳನ್ನೇ ಕೊಟ್ಟು ಮನೆಗಳನ್ನು ತಂದಿದ್ದಾರೆ. ಸಿಎಂ ಕರೆದು ಮಾಹಿತಿ ಕೇಳಿದರೆ ಹೋಗಿ ಮಾಹಿತಿ ಕೊಡುವೆ ಎಂದು ಹೇಳಿದ್ದರು.


