ಚಿತ್ರದುರ್ಗ ಜಿಲ್ಲೆಯಲ್ಲಿ ವಿಜಯನಗರ ಅರಸರ ಕಾಲದ ಅಪ್ರಕಟಿತ ತುರುಗೋಳ್ ವೀರಗಲ್ಲು ಶಾಸನ ಪತ್ತೆಯಾಗಿದೆ.
ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಇತಿಹಾಸದ ಪ್ರಾಧ್ಯಾಪಕ, ಸಂಶೋಧಕ ಎಚ್.ತಿಪ್ಪೇಸ್ವಾಮಿ ಈ ಬಗ್ಗೆ ಸಂಶೋಧನೆ ನಡೆಸಿ ಮಾಹಿತಿ ಕಲೆಹಾಕುತ್ತಿದ್ದಾರೆ.
ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತುರುವನೂರು ಹೋಬಳಿಯ ಬೊಮ್ಮಕ್ಕನಹಳ್ಳಿ ಗ್ರಾಮದ ಹೊರವಲಯದಲ್ಲಿ ತುರುಗೋಳ್ ವೀರಗಲ್ಲು ಪತ್ತೆಯಾಗಿದೆ.
ಪ್ರಸ್ತುತ ಬೊಮ್ಮಕ್ಕನಹಳ್ಳಿ ಗ್ರಾಮದ ಚಿತ್ರದುರ್ಗ ತಾಲ್ಲೂಕಿಗೆ ಸೇರಿದ್ದರೂ ಚಳ್ಳಕೆರೆ ವಿಧಾನಸಭಾ ವ್ಯಾಪ್ತಿಯಲ್ಲಿದ್ದು, ವಿಜಯನಗರ ಕಾಲದ ವೀರಗಲ್ಲು ಪತ್ತೆಯಾಗಿದ್ದಕ್ಕೆ ಗ್ರಾಮಸ್ಥರು ಕುತೂಹಲದಿಂದ ವೀರಗಲ್ಲಿನ ಆಕೃತಿ ಹಾಗೂ ಅದರಲ್ಲಿರುವ ಮಾಹಿತಿ ವೀಕ್ಷಿಸುತ್ತಿದ್ದಾರೆ. ಇದರಿಂದ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಗೂ ಚಿತ್ರದುರ್ಗ ಜಿಲ್ಲೆಗೂ ವಿಶೇಷ ನಂಟಿರುವ ಬಗ್ಗೆ ಖಾತ್ರಿಯಾಗಿದೆ.
ಇತ್ತೀಚೆಗೆ ತಾನೇ ಸಂಶೋಧನಾ ತಂಡಕ್ಕೆ ದೊರೆತ ಮಾಹಿತಿ ಅನುಸರಿಸಿ ಬೊಮ್ಮಕ್ಕನಹಳ್ಳಿ ಗ್ರಾಮದ ಹೊರವಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮದ ಕೆರೆಯಂಗಳದ ಬಳಿ ಎತ್ತರ ಪ್ರದೇಶದಲ್ಲಿ ೬ ಅಡಿ ಎತ್ತರ, ಮೂರು ಅಡಿ ಅಗಲದ ವೀರಗಲ್ಲು ಶಾಸನ ಪತ್ತೆಯಾಗಿದ್ದು ಅದರಲ್ಲಿ ಯಾವುದೇ ಲಿಪಿ ಇರದ ಕಾರಣ ಯಾವ ಕಾಲಮಾನದ್ದು ಎಂಬ ಖಚಿತತೆ ದೊರಕಿಲ್ಲ.

ಆದರೆ, ಶಾಸನದ ಮೇಲಿದ್ದ ಶಿಲ್ಪ ಮತ್ತು ಅವುಗಳ ವೇಷಭೂಷಣ ಆಯುಧ, ಶಿಲೆಗಳ ಆಧಾರದ ಮೇಲೆ ನೊಂಳಬರ ಕಾಲಾವಧಿಯದ್ದು ಎಂದು ಗುರುತಿಸಲಾಗಿದೆ. ಎರಡೂ ವೀರಗಲ್ಲುಗಳು ತುರುಗೋಳ್ ವೀರಗಲ್ಲು ಶಾಸನವೆಂದು ಖಚಿತವಾಗಿದೆ.
ಪ್ರಸ್ತುತ ಬೊಮ್ಮಕ್ಕನಹಳ್ಳಿ ಕೆರೆಯಂಗಳದಲ್ಲಿ ದೊರೆತ ತುರುಗೋಳ್ ವೀರಗಲ್ಲುಗಳ ಮೇಲೆ ಮೂರು ಹಂತದಲ್ಲಿ ನುಣುಪಾದ ಬಳಪದ ಕಲ್ಲಿನಲ್ಲಿ ಕೆತ್ತಲಾಗಿದೆ. ಮೊದಲ ಹಂತದಲ್ಲಿ ಇಬ್ಬರು ವೀರರು ವೈರಿಯೊಂದಿಗೆ ಕಾದಾಡುವ ಚಿತ್ರವಿದೆ.
ಎರಡನೇ ಹಂತದಲ್ಲಿ ಬಿಲ್ಲುಗಳನ್ನು ಹಿಡಿದು ಕಾದಾಡುವ ಚಿತ್ರವಿದೆ. ಮೂರನೇ ಹಂತದಲ್ಲಿ ಕಾದಾಟದಲ್ಲಿ ಮಡಿದ ವೀರರು ಪದ್ಮಾಸನದಲ್ಲಿ ಶಿವನನ್ನು ಆರಾಧಿಸಲು ಧ್ಯಾನಸ್ತರಾಗಿರುವುದು ಕಂಡುಬಂದಿದೆ.
ಡಾ.ಕೃಷ್ಣೇಗೌಡ, ಕೆ.ಸಿ.ಚಿತ್ತಯ್ಯ, ಎ.ವೈ.ಚನ್ನಕೇಶವ, ಡಾ.ಗೋವಿಂದ ಡಾ.ವೀರಾಂಜನೇಯ, ತಿಮ್ಮಲಾಪುರದ ನರಸಿಂಹ, ಸಂಶೋಧನಾ ವಿದ್ಯಾರ್ಥಿ ವೀರಭದ್ರಗೌಡ, ಎಚ್.ರವಿ ಇವರುಗಳ ಸಹಕಾರದಿಂದ ತುರುಗೋಳ್ ವೀರಗಲ್ಲುಗಳು ಪತ್ತೆಯಾಗಿವೆ.
ತಾಲ್ಲೂಕಿನ ದೊಡ್ಡ ಉಳ್ಳಾರ್ತಿ, ದೊಡ್ಡೇರಿ ಗ್ರಾಮಗಳಲ್ಲಿ ವೀರಗಲ್ಲುಗಳಿದ್ದವು ಸಂಬಂಧಪಟ್ಟ ಇಲಾಖೆ ಅವುಗಳ ರಕ್ಷಣೆಗೆ ಮುಂದಾಗಬೇಕೆಂದು ಮನವಿ ಮಾಡಿದ್ದಾರೆ.


