ಚಂದ್ರವಳ್ಳಿ ನ್ಯೂಸ್, ಮೈಸೂರು
ಮಾನವನಾಗಿ ಹುಟ್ಟಿದ ಮೇಲೆ ಬದುಕಿನ ಪಯಣದಲ್ಲಿ ಏರುಪೇರುಗಳಿಲ್ಲದೆ ಸಾಗುವುದು ಸಾಧ್ಯವಿಲ್ಲ. ಜೀವನದ ಹಾದಿಯಲ್ಲಿ ನಾವು ಕೈಗೊಳ್ಳುವ ಕಾರ್ಯಗಳಲ್ಲಿ ಕೆಲವೊಮ್ಮೆ ಯಶಸ್ಸು ದೊರೆಯುತ್ತದೆ, ಮತ್ತೊಮ್ಮೆ ವಿಫಲತೆ ಎದುರಾಗುತ್ತದೆ. ಇಂತಹ ಸಂದರ್ಭಗಳು ಎದುರಾದಾಗ ಎದೆಗುಂದದೆ, ಅಧೈರ್ಯಕ್ಕೆ ಒಳಗಾಗದೆ ಬೆನ್ನು ತೋರಿಸಿ ಓಡಿಹೋಗದೆ, ನಾವು ಕೈಗೊಂಡ ಕಾರ್ಯದಲ್ಲಿಯೇ ಎದುರಾದ ನ್ಯೂನತೆಗಳನ್ನು ಗುರುತಿಸಬೇಕು. ಎಲ್ಲಿ ತಪ್ಪಾಗಿದೆ ಎಂಬುದನ್ನು ಅರಿತು, ಅದನ್ನು ಸರಿಪಡಿಸಿಕೊಳ್ಳುವ ವಿವೇಕದಿಂದ ಮತ್ತೆ ಪ್ರಯತ್ನಿಸಬೇಕು. ಧೈರ್ಯ, ಛಲ ಮತ್ತು ನಿರಂತರ ಪರಿಶ್ರಮದಿಂದ ವಿಫಲತೆಯ ಕತ್ತಲೆಯಲ್ಲೂ ಯಶಸ್ಸಿನ ಬೆಳಕು ಮೂಡಿಸುವ ಪ್ರಯತ್ನ ಮಾಡುವುದೇ ಬದುಕಿನ ಶ್ರೇಷ್ಠತೆ.
ಬೀಳುವುದು ಬದುಕಿನ ಅಂತ್ಯವಲ್ಲ. ಬಿದ್ದ ನಂತರವೂ ಎದ್ದು ನಿಲ್ಲುವ ಧೈರ್ಯ ಉಳಿದಿದ್ದರೆ, ಸೋಲು ಹೊಸ ಆರಂಭದ ಬೀಜವಾಗುತ್ತದೆ. ಕತ್ತಲೆ ಬೆಳಕಿನ ಕೊರತೆಯನ್ನು ಮಾತ್ರ ತೋರಿಸುವುದಿಲ್ಲ. ಬೆಳಕಿನ ಅಗತ್ಯವನ್ನೂ ತಿಳಿಸುತ್ತದೆ. ಹಾಗೆಯೇ ವಿಫಲತೆ ದೌರ್ಬಲ್ಯವನ್ನು ಮಾತ್ರ ಬಯಲು ಮಾಡುವುದಿಲ್ಲ. ನಮ್ಮೊಳಗೆ ಮಲಗಿರುವ ಸಾಮರ್ಥ್ಯವನ್ನೂ ಎಚ್ಚರಿಸುತ್ತದೆ.
“ಬಿದ್ದಲ್ಲೇ ಚಿಗುರು” ಎಂದರೆ ಸಂಕಷ್ಟ ಎದುರಾದ ಜಾಗದಲ್ಲೇ ಹೊಸ ಅವಕಾಶವನ್ನು ಹುಡುಕುವ ಮನೋಭಾವ. “ಸೋಲಲ್ಲೇ ಹೊನಲು” ಎಂದರೆ ವಿಫಲತೆಯೊಳಗೆ ಅಡಗಿರುವ ಅನುಭವದ ಬೆಳಕನ್ನು ಗುರುತಿಸುವ ವಿವೇಕ. ಒಂದು ದಾರಿ ಮುಚ್ಚಿದರೆ ಬದುಕು ಮುಗಿಯುವುದಿಲ್ಲ. ಮತ್ತೊಂದು ದಾರಿ ಹುಡುಕುವ ಜವಾಬ್ದಾರಿ ನಮ್ಮದಾಗುತ್ತದೆ.
ಮಣ್ಣಿನೊಳಗೆ ಹೂತುಹೋದ ಬೀಜ ಕತ್ತಲೆಯಲ್ಲೇ ಮೊಳಕೆಯೊಡೆಯುತ್ತದೆ. ಬಿರುಗಾಳಿಗೆ ಮರದ ದುರ್ಬಲ ಕೊಂಬೆಗಳು ಮುರಿಯಬಹುದು. ಆದರೆ ಬೇರು ಗಟ್ಟಿಯಾಗಿದ್ದರೆ ಮರ ಮತ್ತೆ ಚಿಗುರುತ್ತದೆ. ಬದುಕಿನ ಸಂಕಷ್ಟಗಳೂ ಹಾಗೆಯೇ. ಅವು ನಮ್ಮನ್ನು ಮುರಿಯಲು ಮಾತ್ರ ಬರುವುದಿಲ್ಲ. ನಮ್ಮೊಳಗಿನ ಬೇರು ಎಷ್ಟು ಗಟ್ಟಿಯಾಗಿದೆ ಎಂಬುದನ್ನು ತೋರಿಸುತ್ತವೆ.
ಬದುಕನ್ನು ಕೇವಲ ಗೆಲುವಿನ ದೃಷ್ಟಿಯಿಂದ ನೋಡುವುದು ಅಪೂರ್ಣ. ಗೆಲುವು ಸಂತೋಷ ನೀಡಬಹುದು. ಸೋಲು ಅನುಭವ ನೀಡುತ್ತದೆ. ಗೆಲುವು ನಮ್ಮನ್ನು ಜಗತ್ತಿಗೆ ಪರಿಚಯಿಸಬಹುದು. ಸೋಲು ನಮ್ಮನ್ನು ನಮಗೇ ಪರಿಚಯಿಸುತ್ತದೆ. ನಮ್ಮ ಮಿತಿ ಎಲ್ಲಿ, ದೌರ್ಬಲ್ಯ ಎಲ್ಲಿ, ಮತ್ತೆ ಪ್ರಯತ್ನಿಸಲು ಎಷ್ಟು ಶಕ್ತಿ ಇದೆ ಎಂಬುದನ್ನು ಸೋಲಿನ ಸಂದರ್ಭವೇ ಕಲಿಸುತ್ತದೆ.
ಇಂದಿನ ಸಮಾಜದಲ್ಲಿ ಸೋಲಿನ ಬಗ್ಗೆ ತಪ್ಪು ದೃಷ್ಟಿಕೋನವಿದೆ. ಗೆದ್ದವನನ್ನು ಯಶಸ್ವಿ ಎಂದು ಕರೆಯಲಾಗುತ್ತದೆ. ಸೋತವನನ್ನು ಅಸಮರ್ಥನೆಂದು ತೀರ್ಮಾನಿಸಲಾಗುತ್ತದೆ. ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದ ವಿದ್ಯಾರ್ಥಿಯ ಪ್ರತಿಭೆಯನ್ನು ಪ್ರಶ್ನಿಸಲಾಗುತ್ತದೆ. ಉದ್ಯೋಗ ಸಿಗದ ಯುವಕನ ಸಾಮರ್ಥ್ಯವನ್ನು ಅನುಮಾನಿಸಲಾಗುತ್ತದೆ. ವ್ಯಾಪಾರದಲ್ಲಿ ನಷ್ಟವಾದವನನ್ನು ವಿಫಲನೆಂದು ಗುರುತಿಸಲಾಗುತ್ತದೆ. ಆದರೆ ಒಂದು ಘಟನೆ ಮನುಷ್ಯನ ಸಂಪೂರ್ಣ ಸಾಮರ್ಥ್ಯಕ್ಕೆ ಪ್ರಮಾಣಪತ್ರವಾಗುವುದಿಲ್ಲ.
ಬಿದ್ದ ನೆಲದಲ್ಲೇ ಬೀಜ ಮೊಳೆಯಲಿ
ಸೋತ ಮನದಿ ಧೈರ್ಯ ಬೆಳೆಯಲಿ.
ಕತ್ತಲ ದಾರಿಲಿ ಹೊನಲು ಹೊಳೆಯಲಿ
ಎದ್ದು ನಡೆದ ಹೆಜ್ಜೆ ದಾರಿ ತೋರಲಿ.
ಒಂದು ಸೋಲು ಮನುಷ್ಯನ ಅಂತಿಮ ಪರಿಚಯವಲ್ಲ. ಅದು ಬದುಕಿನ ಒಂದು ಅಧ್ಯಾಯ. ಆ ಅಧ್ಯಾಯದಿಂದ ಏನು ಕಲಿತನು ಎಂಬುದೇ ಮುಂದಿನ ದಾರಿಯನ್ನು ನಿರ್ಧರಿಸುತ್ತದೆ. ಥಾಮಸ್ ಎಡಿಸನ್ ಅವರ ಪ್ರಯೋಗಶೀಲ ಬದುಕು ಇದಕ್ಕೆ ಉದಾಹರಣೆ. ಅನೇಕ ಪ್ರಯತ್ನಗಳು ನಿರೀಕ್ಷಿತ ಫಲ ನೀಡದಿದ್ದರೂ ಅವರು ಪ್ರಯೋಗ ನಿಲ್ಲಿಸಲಿಲ್ಲ. ವಿಫಲ ಪ್ರಯತ್ನವನ್ನು ಅಂತ್ಯವೆಂದು ನೋಡದೆ, ಮುಂದಿನ ಪ್ರಯತ್ನಕ್ಕೆ ಪಾಠವೆಂದು ಸ್ವೀಕರಿಸಿದರು.
ಸ್ವಾಮಿ ವಿವೇಕಾನಂದರ ಚಿಂತನೆಯಲ್ಲಿಯೂ ಆತ್ಮಶಕ್ತಿಗೆ ಮಹತ್ವವಿದೆ. ಮನುಷ್ಯನು ತನ್ನೊಳಗಿನ ಶಕ್ತಿಯನ್ನು ಅರಿತುಕೊಳ್ಳಬೇಕು ಎಂಬ ಸಂದೇಶ ಅವರ ಚಿಂತನೆಯ ಕೇಂದ್ರದಲ್ಲಿದೆ. ಪ್ರತಿಕೂಲ ಪರಿಸ್ಥಿತಿಯನ್ನು ಕಾರಣವನ್ನಾಗಿ ಮಾಡಿಕೊಂಡು ಕೈಚೆಲ್ಲುವುದು ಸುಲಭ. ಅದನ್ನೇ ಆತ್ಮವಿಕಾಸದ ಅವಕಾಶವನ್ನಾಗಿ ಪರಿವರ್ತಿಸುವುದು ಧೈರ್ಯ.
ನಮ್ಮ ಕನ್ನಡ ಸಾಹಿತ್ಯವೂ ಮನುಷ್ಯನ ಹೋರಾಟ, ನೋವು ಮತ್ತು ಬದುಕಿನ ವಾಸ್ತವಗಳನ್ನು ಆಳವಾಗಿ ಪ್ರತಿಬಿಂಬಿಸಿದೆ. ಕಾಶೀಗೌ ಅವರ ಸಾಹಿತ್ಯದ ಒಳನೋಟದಲ್ಲಿಯೂ ಮಣ್ಣಿಗೆ ಹತ್ತಿರವಾದ ಬದುಕು, ಮನುಷ್ಯನ ಅಂತರಂಗ ಮತ್ತು ಸಾಮಾಜಿಕ ವಾಸ್ತವಗಳು ಚಿಂತನೆಗೆ ದಾರಿ ಮಾಡಿಕೊಡುತ್ತವೆ. ಸಾಹಿತ್ಯ ನೋವನ್ನು ಅಲಂಕರಿಸುವುದಕ್ಕಿಂತ, ಅದರೊಳಗಿನ ಸತ್ಯವನ್ನು ಗುರುತಿಸುವ ಶಕ್ತಿಯನ್ನು ನೀಡಬೇಕು.
ಸಮಾಜವೂ ತನ್ನ ದೃಷ್ಟಿಕೋನ ಬದಲಿಸಬೇಕಾಗಿದೆ. ನಾವು ಯಶಸ್ಸಿನ ಫಲವನ್ನು ಮಾತ್ರ ನೋಡುತ್ತೇವೆ. ಅದರ ಹಿಂದೆ ನಡೆದ ಹೋರಾಟವನ್ನು ಮರೆತುಬಿಡುತ್ತೇವೆ. ಗೆದ್ದವನಿಗೆ ವೇದಿಕೆ ಕೊಡುತ್ತೇವೆ. ಸೋತವನಿಗೆ ಕಾರಣ ಕೇಳುತ್ತೇವೆ. ಈ ಮನೋಭಾವ ಹೊಸ ಪ್ರಯತ್ನಗಳನ್ನು ಕುಂಠಿತಗೊಳಿಸುತ್ತದೆ.
ಮಕ್ಕಳಿಗೆ “ಸೋಲಬೇಡ” ಎನ್ನುವುದಕ್ಕಿಂತ “ಸೋತಾಗ ಏನು ಕಲಿತೆ?” ಎಂದು ಕೇಳುವ ಸಂಸ್ಕೃತಿ ಬೇಕು. ಉದ್ಯೋಗ ಸಿಗದ ಯುವಕನ ಆತ್ಮವಿಶ್ವಾಸ ಕುಗ್ಗಿಸುವ ಬದಲು ಹೊಸ ಕೌಶಲ್ಯ ಕಲಿಯಲು ಪ್ರೋತ್ಸಾಹಿಸಬೇಕು. ರೈತನ ಬೆಳೆ ನಷ್ಟವಾದಾಗ ಕೇವಲ ಸಂತಾಪವಲ್ಲ, ಮತ್ತೆ ನಿಲ್ಲಲು ಅಗತ್ಯವಾದ ನೆರವು ನೀಡಬೇಕು. ಸಣ್ಣ ಉದ್ಯಮ ವಿಫಲವಾದಾಗ ಹಾಸ್ಯ ಮಾಡುವ ಬದಲು ಮತ್ತೊಂದು ಪ್ರಯತ್ನಕ್ಕೆ ಅವಕಾಶ ಕಲ್ಪಿಸಬೇಕು.
ಆದರೆ ಸೋಲನ್ನು ಮಹಿಮೆಪಡಿಸುವುದೂ ಸರಿಯಲ್ಲ. ಸೋಲನ್ನು ವಿಧಿಯೆಂದು ಒಪ್ಪಿಕೊಂಡು ಕುಳಿತುಕೊಳ್ಳುವುದು ಧೈರ್ಯವಲ್ಲ. ತಪ್ಪು ಎಲ್ಲಿ ನಡೆದಿದೆ ಎಂಬುದನ್ನು ಗುರುತಿಸಬೇಕು. ಅಗತ್ಯವಿದ್ದರೆ ದಾರಿಯನ್ನು ಬದಲಿಸಬೇಕು. ಒಣಗಿದ ಕೊಂಬೆಯನ್ನು ಹಿಡಿದುಕೊಂಡೇ ಹೊಸ ಚಿಗುರನ್ನು ನಿರೀಕ್ಷಿಸಲಾಗದು. ಬದಲಾವಣೆಯನ್ನು ಸ್ವೀಕರಿಸುವ ವಿವೇಕವೂ ಬದುಕಿನ ಶಕ್ತಿಯೇ.
“ಬಿದ್ದಲ್ಲೇ ಚಿಗುರು” ಎನ್ನುವುದು ಕೇವಲ ಭರವಸೆಯ ಮಾತಲ್ಲ. ಅದು ಚೇತರಿಕೆಯ ತತ್ವ. “ಸೋಲಲ್ಲೇ ಹೊನಲು” ಎನ್ನುವುದು ಸೋಲನ್ನು ಸಮರ್ಥಿಸುವ ಮಾತಲ್ಲ. ಅದರೊಳಗಿರುವ ಪಾಠವನ್ನು ಗುರುತಿಸುವ ದೃಷ್ಟಿ. ಮನುಷ್ಯನು ಬಿದ್ದಾಗ ಇತರರ ಕೈ ಅವನನ್ನು ಎತ್ತಬಹುದು. ಆದರೆ ಮತ್ತೆ ಹೆಜ್ಜೆ ಇಡುವ ಧೈರ್ಯ ಅವನೊಳಗಿಂದಲೇ ಬರಬೇಕು.
ಉದುರಿದ ಎಲೆ ಮರದ ಅಂತ್ಯವಲ್ಲ. ಮಳೆ ನಿಂತರೆ ಭೂಮಿಯ ಅಂತ್ಯವಲ್ಲ. ಕತ್ತಲೆ ಬಂದರೆ ಬೆಳಕು ನಾಶವಾದಂತಲ್ಲ. ಹಾಗೆಯೇ ಒಂದು ಸೋಲು ಬಂದರೆ ಮನುಷ್ಯನ ಸಾಮರ್ಥ್ಯ ಮುಗಿದಂತಲ್ಲ. ಬಿದ್ದ ಜಾಗವನ್ನು ಶಾಪಿಸುವುದಕ್ಕಿಂತ, ಅಲ್ಲಿಂದ ಎದ್ದು ನಿಲ್ಲಲು ಅದೇ ನೆಲವನ್ನು ಬಳಸಿಕೊಳ್ಳಬೇಕು.
ನಿನ್ನೆಗಿನ ಗಾಯವನ್ನು ನಾಳೆಯ ದೌರ್ಬಲ್ಯವನ್ನಾಗಿಸದೆ, ಅನುಭವವನ್ನಾಗಿ ಸಬೇಕು. ಸೋಲನ್ನು ಹೊತ್ತುಕೊಂಡು ಕುಳಿತುಕೊಳ್ಳುವುದಕ್ಕಿಂತ, ಅದರೊಳ ಗಿನ ಪಾಠವನ್ನು ಬದುಕಿಗೆ ಅಳವಡಿಸಿಕೊಳ್ಳಬೇಕು. ಎಷ್ಟು ಬಾರಿ ಗೆದ್ದೆವು ಎಂಬುದಕ್ಕಿಂತ, ಎಷ್ಟು ಬಾರಿ ಬಿದ್ದರೂ ನಮ್ಮೊಳಗಿನ ಧೈರ್ಯವನ್ನು ಕಳೆದುಕೊಳ್ಳದೆ ಮತ್ತೆ ಪ್ರಯತ್ನಿಸಿದೆವು ಎಂಬುದೇ ಬದುಕಿನ ಅರ್ಥವನ್ನು ಗಟ್ಟಿಗೊಳಿಸುತ್ತದೆ.
ಲೇಖನ: ಕಾಶಿಗೌ, ಚಿಂತಕರು, ಮೈಸೂರು.



