ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಬೆಂಗಳೂರಿನ ಜಯದೇವ ಹೃದ್ರೋಗ ಚಿಕಿತ್ಸಾ ಕೇಂದ್ರದ ನೂತನ ನಿರ್ದೇಶಕರಾಗಿ ಆಯ್ಕೆಯಾದ ಡಾ.ರವೀಂದ್ರನಾಥರವರನ್ನು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಳ್ಳಕೆರೆ ತಾಲ್ಲೂಕು ಎಲ್ಐಸಿ ದುಗ್ಗಾವರ ರಂಗಸ್ವಾಮಿ ಅಭಿಮಾನಿ ಬಳಗ ಸನ್ಮಾನಿಸಿ ಅಭಿನಂದಿಸಿದರು.
ಬಳಗದ ಅಧ್ಯಕ್ಷ ರಂಗಸ್ವಾಮಿ ಮಾತನಾಡಿ, ಡಾ.ರವೀಂದ್ರನಾಥ ಕಳೆದ ಹಲವಾರು ದಶಕಗಳಿಂದ ವೈದ್ಯಕೀಯ ಸೇವೆಯಲ್ಲಿ ತಮ್ಮದೇಯಾದ ಖ್ಯಾತಿಯನ್ನು ಗಳಿಸಿದ್ಧಾರೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಕರಾತ್ಮಕ ಚಿಕಿತ್ಸೆ ನೀಡುವ ಮೂಲಕ ಅವರಿಗೆ ಜೀವದಾನ ಮಾಡಿದ್ದಾರೆ. ಅವರ ಮಾಡಿದ ಪುಣ್ಯದ ಕೆಲಸದ ಫಲವಾಗಿ ನಿರ್ದೇಶಕರಾಗಿ ಆಯ್ಕೆಯಾಗಿದ್ದು, ಅವರ ಸೇವೆ ಹೀಗೆ ಮುಂದುವರೆಯಲಿ ಎಂದು ಆಶಿಸುವುದಾಗಿ ತಿಳಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಿರ್ದೇಶಕ ಡಾ.ರವೀಂದ್ರನಾಥ ಯಾವುದೇ ವೈದ್ಯರಿರಲಿ ತಮ್ಮ ಪಾಲಿನ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ಮಾಡಬೇಕು. ಪ್ರತಿಯೊಬ್ಬ ವೈದ್ಯನು ರೋಗಿಯ ಜೀವ ಸಂರಕ್ಷಿಸುವ ಕಾರ್ಯವನ್ನು ನಿರಂತರ ಮಾಡುತ್ತಾ ಬಂದಿದ್ದಾನೆ. ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯರಿಂದ ರೋಗಿಗಳಿಗೆ ತೊಂದರೆಯಾಗುವ ಸಂಭವ ಬಹಳ ಕಡಿಮೆ.
ನನ್ನ ಪಾಲಿನ ಕರ್ತವ್ಯವನ್ನು ನಾನು ಮಾಡಿದ್ದು, ನನ್ನ ಸೇವೆಯನ್ನು ಗುರುತಿಸಿ ಸನ್ಮಾನಿಸಿದ್ದು ಸಂತಸ ತಂದಿದೆ. ಆಸ್ಪತ್ರೆಗೆ ಬರುವ ರೋಗಿಗಳನ್ನು ಸೌಜನ್ಯ, ಸಹನೆಯಿಂದ ಮಾತನಾಡಿಸುವ ಮೂಲಕ ಅವರ ಎಷ್ಟೋ ಕಾಯಿಲೆಗಳಿಗೆ ಪರಿಹಾರ ದೊರೆತಂತಾಗುತ್ತದೆ. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಜೊತೆಗೆ ಉತ್ತಮ ಪರಿಸರವನ್ನು ನಿರ್ಮಿಸುವ ಜವಾಬ್ದಾರಿ ವೈದ್ಯರದ್ದು ಎಂದರು.
ಈ ಸಂದರ್ಭದಲ್ಲಿ ಬಳಗದ ನಿರ್ದೇಶಕ ವಕೀಲ ಜಿ.ಟಿ.ನಾಗರಾಜ, ಬೇಕರಿವಿಜಯ್, ಎನ್.ರವಿಕುಮಾರ್, ಹರೀಶ್ ಮುಂತಾದವರು ಉಪಸ್ಥಿತರಿದ್ದರು.


